'ನಾಡೋಜ' ಗೌರವಕ್ಕೆ ಪಂಡಿತ್ ರಾಜೀವ್ ತಾರಾನಾಥರು ಆಯ್ಕೆ
ಹೊಸಪೇಟೆ, ಮಾರ್ಚ್ 08: ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಈ ಬಾರಿಯ ನಾಡೋಜ ಗೌರವ ನೀಡಿ ಸನ್ಮಾನಿಸಲಾಗುವುದು ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದೆ.
ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿ ಅವರು ಸುದ್ದಿಗೋಷ್ಠಿ ನಡೆಸಿ, ಮಾರ್ಚ್ 10ರಂದು ವಿವಿ ಆವರಣದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜೀವ್ ತಾರಾನಾಥ್ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ನಾಡೋಜ ಪ್ರಶಸ್ತಿ(ಗೌರವ ಡಿ. ಲಿಟ್ ಪದವಿಗೆ ಸಮ) ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಜತೆಗೆ 91 ಪಿಎಚ್ ಡಿ ಹಾಗೂ 299 ವಿದ್ಯಾರ್ಥಿಗಳಿಗೆ ಪದವಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇಂಗ್ಲಿಷ್ ಪ್ರಾಧ್ಯಾಪಕ, ಅನುವಾದಕ, ಸರೋದ್ ವಾದಕರಾಗಿರುವ ರಾಜೀವ್ ತಾರಾನಾಥ್ ಅವರು ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ.ಭಾರತವಲ್ಲದೆ ಆಸ್ಟ್ರೇಲಿಯಾ, ಯುರೋಪ್, ಯೆಮೆನ್, ಅಮೆರಿಕಾ, ಕೆನಡಾ ಮುಂತಾದ ವಿದೇಶಗಳಲ್ಲಿಯೂ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ. ಅನೇಕ ಪ್ರಖ್ಯಾತ ಚಲನಚಿತ್ರಗಳಿಗೂ ಸಂಗೀತ ನೀಡಿದ್ದಾರೆ.
ಕನ್ನಡದಲ್ಲಿ ಸಂಸ್ಕಾರ, ಪಲ್ಲವಿ, ಅನು ರೂಪ, ಶೃಂಗಾರಮಾಸ, ಪೇಪರ್ ಬೋಟ್ ಹಾಗೂ ಮಲಯಾಳಂನ ಕಾಂಚನಸೀತಾ ಮತ್ತು ಕಡಾವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.