ವಿಜಯನಗರ ಜಿಲ್ಲೆ ರಚನೆಗೆ ಕಂಪ್ಲಿ ಶಾಸಕ ಜೆ.ಎನ್ ಗಣೇಶ ಸ್ವಾಗತ
ಬಳ್ಳಾರಿ, ನವೆಂಬರ್ 18: ವಿಜಯನಗರ ಜಿಲ್ಲೆ ರಚನೆಗೆ ರಾಜ್ಯ ಸಚಿವ ಸಂಪುಟ ಸಭೆ ಸಾತ್ವಿಕ ಒಪ್ಪಿಗೆ ನೀಡಿರುವುದನ್ನು ಸಚಿವ ಆನಂದ್ ಸಿಂಗ್ ಕರೆ ಮಾಡಿ ವಿಷಯ ತಿಳಿಸಿದ್ದು, ವಿಜಯನಗರ ಜಿಲ್ಲೆ ರಚನೆಯನ್ನು ಸ್ವಾಗತ ಮಾಡುವುದಾಗಿ ಕಂಪ್ಲಿ ಕಾಂಗ್ರೆಸ್ ಶಾಸಕ ಜೆ.ಎನ್ ಗಣೇಶ ಹೇಳಿದರು.
ಅಲ್ಲದೆ, ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲ್ಲೂಕು ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸುವಂತೆ ಹೇಳಿದ್ದಾರೆ, ಇದರಿಂದ ತಮಗೆ ಖುಷಿಯಾಗಿದ್ದು, ಕಂಪ್ಲಿಯು ವಿಜಯನಗರ ಜಿಲ್ಲೆಯ ಹೆಬ್ಬಾಗಿಲು ಆಗಿದೆ ಎಂದರು.
ಬಳ್ಳಾರಿ ಜಿಲ್ಲಾ ವಿಭಜನೆಗೆ ನನ್ನ ಬೆಂಬಲವಿಲ್ಲ, ಹೋರಾಟಕ್ಕೂ ಸಿದ್ಧ: ಶಾಸಕ ಸೋಮಶೇಖರ ರೆಡ್ಡಿ
ಅಭಿವೃದ್ಧಿ ದೃಷ್ಟಿಯಿಂದ ಕಂಪ್ಲಿ ಸೇರ್ಪಡೆಯಾದರೆ ಒಳ್ಳೆಯದು, ಒಂದು ವೇಳೆ ಕಂಪ್ಲಿ ವಿಜಯನಗರ ಜಿಲ್ಲೆಗೆ ಸೇರಿಸದಿದ್ದರೆ ಜನತೆ, ಮುಖಂಡರೊಂದಿಗೆ ಸೇರಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಶಾಸಕ ಜೆ.ಎನ್ ಗಣೇಶ ಅವರು ಕಂಪ್ಲಿ ತಾಲೂಕು ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಒತ್ತಾಯಿಸಿರುವುದು ಮತ್ತೊಂದು ವಿವಾದಕ್ಕೆ ನಾಂದಿ ಹಾಡಲಿದೆ ಎಂದು ಹೇಳಲಾಗಿದೆ. ಇದು ವಿಜಯನಗರ ಜಿಲ್ಲೆ ಘೋಷಣೆಯಾಗುತ್ತಿದ್ದಂತೆ ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅಂದಾಜಿಸಲಾಗಿದೆ.
ನೂತನ ವಿಜಯನಗರ ಜಿಲ್ಲೆಯಾದರೆ ಬಳ್ಳಾರಿಯಲ್ಲಿಯೇ ಕಂಪ್ಲಿ ತಾಲ್ಲೂಕು ಉಳಿಯಲಿದೆ. ಒಂದು ವೇಳೆ ಕಂಪ್ಲಿಯನ್ನು ಸೇರಿಸದಿದ್ದರೆ ಹೋರಾಟದ ಹಾದಿ ತುಳಿಯುವುದಾಗಿ ಶಾಸಕ ಗಣೇಶ ಎಚ್ಚರಿಕೆ ನೀಡಿದ್ದು, ತಾಲ್ಲೂಕಿನ ಮುಖಂಡರೊಂದಿಗೆ ಸಭೆ ಸೇರಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.