ಪಿಎಂ-ಕೇರ್ ನಿಧಿಗೆ ಜೆಎಸ್ ಡಬ್ಲ್ಯೂ ಗ್ರೂಪ್ 100 ಕೋಟಿ ದೇಣಿಗೆ
ಬಳ್ಳಾರಿ, ಮಾರ್ಚ್ 29: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮತ್ತು ಸೋಂಕಿಗೆ ಒಳಗಾಗಿರುವವರ ರಕ್ಷಣೆಗಾಗಿ ಜೆಎಸ್ ಡಬ್ಲ್ಯೂ ಗ್ರೂಪ್ 'ಪಿಎಂ-ಕೇರ್' ನಿಧಿಗೆ 100 ಕೋಟಿ ರುಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದೆ.
ಸಂಸ್ಥೆಯ ಪ್ರತಿಯೊಬ್ಬ ಉದ್ಯೋಗಿಯೂ ಕನಿಷ್ಠ ತಮ್ಮ ಒಂದು ದಿನದ ಸಂಬಳವನ್ನು 'ಪಿಎಂ ಕೇರ್ಸ್' ನಿಧಿಗೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಬಹಳಷ್ಟು ಉದ್ಯೋಗಿಗಳು ಅತೀ ಹೆಚ್ಚಿನ ನೆರವನ್ನು ಸ್ವಯಂ ಪ್ರೇರಣೆಯಿಂದ ಒದಗಿಸಲು ಮುಂದಾಗಿದ್ದಾರೆ.
ಕೊವಿಡ್19 ವಿರುದ್ಧ ಹೋರಾಡಲು ದೇಣಿಗೆ ನೀಡಿ: ಸಿಎಂ ಬಿಎಸ್ವೈ
ಜೆಎಸ್ ಡಬ್ಲ್ಯೂ ಗ್ರೂಪ್ ನ ಸುತ್ತಮುತ್ತ ವಾಸಿಸುವ ಸಮುದಾಯಗಳಿಗೆ ಸಂಸ್ಥೆಯು ಅಗತ್ಯ ಆಹಾರ ಪೂರೈಸಲಿದೆ. ಸಮುದಾಯ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಅಧಿಕ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ.
"ನಿರಂತರವಾಗಿ ಪರಿಸ್ಥಿತಿಯ ಮೌಲ್ಯಮಾಪನವನ್ನು ನಾವು ಮಾಡುತ್ತಿದ್ದೇವೆ. ಕೊವಿಡ್-19 ಅನ್ನು ಎದುರಿಸಲು ಸಾಧ್ಯವಿರುವ ಎಲ್ಲಾ ಸಹಕಾರವನ್ನು ಸರ್ಕಾರಕ್ಕೆ ನೀಡಲು ಜೆಎಸ್ ಡಬ್ಲ್ಯೂ ಗ್ರೂಪ್ ಬದ್ಧವಾಗಿದೆ. ಈ ತುರ್ತು ಸಂದರ್ಭಕ್ಕೆ ಅಗತ್ಯವಿರುವ ತಾತ್ಕಾಲಿಕ ನೆರವು ಇದಾಗಿದ್ದು, ಭವಿಷ್ಯದಲ್ಲಿ ಎಲ್ಲಾ ಸಾಮಾಜಿಕ ಅವಶ್ಯಕತೆಗಳಿಗೆ ಕ್ರಿಯಾತ್ಮಕವಾಗಿ ಪ್ರತಿಕ್ರಿಯಿಸಲು ನಾವು ಮತ್ತಷ್ಟು ಆರ್ಥಿಕ ಮತ್ತು ಇನ್ನಿತರ ಸಹಕಾರವನ್ನು ಒದಗಿಸಲು ಸಿದ್ದವಾಗಿದ್ದೇವೆ" ಎಂದು ಜೆಎಸ್ ಡಬ್ಲ್ಯೂ ಗ್ರೂಪ್ ನ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದರು.
ಜೆಎಸ್ ಡಬ್ಲ್ಯೂ ಗ್ರೂಪ್ ನ ಈ ಕೊಡುಗೆ ರಾಷ್ಟ್ರ ನಿರ್ಮಾಣಕ್ಕೆ ಬದ್ಧತೆಯಾಗಿದೆ. ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಬದ್ಧವಾಗಿರುವ ಜೆಎಸ್ ಡಬ್ಲ್ಯೂ ಈ ಬಿಕ್ಕಟ್ಟನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಎಲ್ಲಾ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.