ಸರ್ಕಾರಿ ಜಮೀನು ಕ್ರಯ ವಿವಾದ: ಜಿಂದಾಲ್ ಸ್ಪಷ್ಟನೆ
ಬಳ್ಳಾರಿ, ಮೇ 28: ಜೆಎಸ್ಡಬ್ಲೂ (ಜಿಂದಾಲ್) ಸಂಸ್ಥೆಗೆ 3666 ಎಕರೆ ಸರ್ಕಾರಿ ಭೂಮಿಯನ್ನು ಕ್ರಯ ಮಾಡಿಕೊಡಲು ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ಕಾಂಗ್ರೆಸ್ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೆ ಇದೊಂದು ವಿವಾದವಾಗಿ ಬೆಳೆಯುತ್ತಿದೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೆಎಸ್ಡಬ್ಲ್ಯೂ (ಜಿಂದಾಲ್) ಸಂಸ್ಥೆ, 'ಸರ್ಕಾರ ಲೀಸ್ ಆಧಾರದ ಮೇಲೆ ನಮಗೆ ಈ ಭೂಮಿ ನೀಡಿತ್ತು, ಅದನ್ನೇ ಈಗ ನಿಯಮದಂತೆ ಕ್ರಯ ಮಾಡಿಕೊಡಲಾಗುತ್ತಿದೆ' ಎಂದು ಹೇಳಿದೆ.
ಜಿಂದಾಲ್ ಗೆ ಸರ್ಕಾರಿ ಜಮೀನು ಕ್ರಯ, ಎಚ್ಕೆ ಪಾಟೀಲ್ ಗರಂ
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಜಿಂದಾಲ್ ಸಂಸ್ಥೆ, ವಿಜಯನಗರದಲ್ಲಿ ಉಕ್ಕು ಘಟಕದ ವಿಸ್ತರಣೆಗೆ ಜೆಎಸ್ ಡಬ್ಲ್ಯೂ ಗೆ ಸರ್ಕಾರ ಲೀಸ್ ಆಧಾರದ ಮೇಲೆ ಈ ಭೂಮಿಯನ್ನು ನೀಡಿತ್ತು. ಈ ಲೀಸ್ ಅವಧಿ ಪೂರ್ಣಗೊಂಡಿದ್ದು, ಮೂಲ ಲೀಸ್ ನ ನಿಯಮಾವಳಿಗಳನ್ನು ಪೂರೈಸಿದ ನಂತರ ಲೀಸ್ ವ್ಯಾಪ್ತಿಯಿಂದ ಭೂಮಿಯನ್ನು ಮುಕ್ತಗೊಳಿಸಲಾಗುತ್ತಿದೆ ಎಂದು ಹೇಳಿದೆ.
'ಆದರೆ, ಈ ಬಗ್ಗೆ ಸುಳ್ಳು ಮತ್ತು ತಪ್ಪು ದಾರಿಗೆ ಎಳೆಯುವಂತಹ ವರದಿಗಳನ್ನು ಹರಡಲಾಗುತ್ತಿದೆ. ಈ ಭೂಮಿಯ ವಿಚಾರದಲ್ಲಿ ಎಲ್ಲಾ ಪ್ರಕ್ರಿಯೆಗಳು ಕಾನೂನು ವ್ಯಾಪ್ತಿಯಲ್ಲೇ ನಡೆಯುತ್ತಿವೆ' ಎಂದು ಜಿಂದಾಲ್ ಹೇಳಿದೆ.
ಜಿಂದಾಲ್ಗೆ ಕ್ರಯ ಮಾಡಿಕೊಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಹಿರಿಯ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಅವರು ಖಂಡಿಸಿದ್ದು, ಜಿಂದಾಲ್ ಕಂಪನಿ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಇದೆ. ರಾಜ್ಯ ಸರ್ಕಾರಕ್ಕೆ ಜಿಂದಾಲ್ ಕಂಪನಿಯಿಂದ 1200 ಕೋಟಿ ರೂಪಾಯಿ ಬಾಕಿ ಉಳಿದಿದೆ. ಬಾಕಿ ಹಣವನ್ನು ವಸೂಲು ಮಾಡದೇ ಅದೇ ಕಂಪನಿಗೆ ಭೂಮಿ ನೀಡುವುದು ಸಮಂಜಸವಲ್ಲ, ಮೊದಲು ಆ ಕಂಪನಿಯಿಂದ ಬಾಕಿ ವಸೂಲು ಮಾಡಿ ಎಂದು ಎಚ್ ಕೆ ಪಾಟೀಲ್ ನಿನ್ನೆ ಹೇಳಿದ್ದರು.
ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳು
ಕ್ರಯಕ್ಕೆ ಗುರುತಿಸಲಾಗಿರುವ ಜಮೀನು ಖನಿಜ ಸಂಪತ್ತು ಹೊಂದಿದೆ, ಈ ಜಮೀನು ಕ್ರಯ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗಲಿದೆ ಎಂದು ಪತ್ರದಲ್ಲಿ ಎಚ್ ಕೆ ಪಾಟೀಲ್ ಎಚ್ಚರಿಕೆ ನೀಡಿದ್ದರು. ಎಚ್.ಕೆ.ಪಾಟೀಲ್ ಹೇಳಿಕೆ ನೀಡಿದ ಬಳಿಕ ಇದೀಗ ಜಿಂದಾಲ್ ಸಂಸ್ಥೆಯೇ ಸ್ಪಷ್ಟನೆ ನೀಡಿದೆ.