ಚುನಾವಣೆಯ ಟ್ರಂಪ್ ಕಾರ್ಡ್ ಆಗಿತ್ತಾ "ಬಳ್ಳಾರಿ ವಿಭಜನೆ" ವಿಷಯ?
ಬಳ್ಳಾರಿ, ಫೆಬ್ರವರಿ 10: ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಕ್ಷೇತ್ರವನ್ನು ಪ್ರತ್ಯೇಕ ಮಾಡಿ, ಪ್ರತ್ಯೇಕ ಜಿಲ್ಲೆ ಮಾಡಿಯೇ ತಿರುತ್ತೇನೆ ಎಂದು ಸಚಿವ ಆನಂದ್ ಸಿಂಗ್ ಶಪಥ ಮಾಡಿದ್ದರು. ಆದರೆ ಸಿಎಂ ಇದಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ. ಪ್ರತ್ಯೇಕ ಜಿಲ್ಲೆ ಮಾಡುವ ಬಗ್ಗೆ ಯೋಚನೆ ಇಲ್ಲ ಎಂದಿದ್ದಾರೆ.
ಆದರೆ ಇದೇ ಸಿಎಂ ಯಡಿಯೂರಪ್ಪ ಅವರು ವಿಜಯನಗರ ಉಪಚುನಾವಣೆಯಲ್ಲಿ ನಿಮ್ಮ ಎಲ್ಲ ಬೇಡಿಕೆಯನ್ನು ಈಡೇರಿಸುವುದಾಗಿ ಹೇಳಿದ್ದರು. ಆನಂದ್ ಸಿಂಗ್ ಸಹ ರಾಜೀನಾಮೆ ನೀಡಿದ್ದೇ ಜಿಲ್ಲೆ ಪ್ರತ್ಯೇಕ ಮಾಡುವ ವಿಷಯವಾಗಿ ಎಂದು ಹೇಳಿದ್ದರು. ಹಾಗಾದರೆ ಜಿಲ್ಲಾ ವಿಭಜನೆ ಒಂದು ಚುನಾವಣೆ ಟ್ರಂಪ್ ಕಾರ್ಡ್ ಇರಬಹುದಾ ಎನ್ನುವ ಅನುಮಾನ ಜನರಲ್ಲಿ ಕಾಡುತ್ತಿದೆ. ಇದರೊಂದಿಗೆ ಸಿಎಂಗೆ ಶ್ರೀರಾಮುಲು ಅವರನ್ನು ಡಿಸಿಎಂ ಮಾಡಲೇಬೇಕು ಎನ್ನುವ ಬೇಡಿಕೆಗಳು ಪದೇ ಪದೇ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ರೆಡ್ಡಿ, ಶ್ರೀರಾಮುಲು ಅವರನ್ನು ಸಮಾಧಾನ ಮಾಡುವ ಸಲುವಾಗಿ ಆನಂದ್ ಸಿಂಗ್ ಅವರ ಬೇಡಿಕೆಯನ್ನು ತಳ್ಳಿ ಹಾಕಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ನೂತನ ಸಚಿವರ ಖಾತೆ ಮತ್ತೆ ಬದಲಾವಣೆ ಮಾಡಿದ ಯಡಿಯೂರಪ್ಪ!
ಆನಂದ್ ಸಿಂಗ್ ಕನಸಿಗೆ ತಣ್ಣೀರು ಎರಚಿದ್ದ ಸಿಎಂ
ಈ ಹಿಂದೆ ಇದ್ದ ಸಮ್ಮಿಶ್ರ ಸರ್ಕಾರದಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಸ್ಪಂದನೆ ನೀಡುತಿಲ್ಲ ಎನ್ನುತ್ತಾ, ಜಿಲ್ಲಾ ವಿಭಜನೆ ಬೇಡಿಕೆ ಮುಂದಿಟ್ಟು ಆನಂದ್ ಸಿಂಗ್ ರಾಜೀನಾಮೆ ನೀಡಿ, ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು ಈಗ ಇತಿಹಾಸ. ಆದರೆ ಯಾವ ಕಾರಣಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ರು ಆ ಕೆಲಸಕ್ಕೆ ಸ್ವತಃ ಸಿಎಂ ಯಡಿಯೂರಪ್ಪ ಬಹುತೇಕವಾಗಿ ತಿಲಾಂಜಲಿ ನೀಡಿದ್ದಾರೆ. ನಿನ್ನೆ ಸಿಎಂ ಯಡಿಯೂರಪ್ಪ ಅವರು ಬಳ್ಳಾರಿ ಜಿಲ್ಲೆ ವಿಭಜನೆ ಮಾಡಲ್ಲ, ಆ ಆಲೋಚನೆ ನಮ್ಮ ಬಳಿ ಇಲ್ಲ ಎನ್ನುವ ಮೂಲಕ ಆನಂದ್ ಸಿಂಗ್ ಅವರ ಕನಸಿಗೆ ತಣ್ಣೀರು ಎರಚಿದ್ದಾರೆ.
ಸಿಎಂ ನಿರ್ಧಾರ ಸಂತೋಷ ತಂದಿದೆ ಎಂದ ಸೋಮಶೇಖರ್ ರೆಡ್ಡಿ
ಆದರೆ ಆನಂದ್ ಸಿಂಗ್ ಸಚಿವರಾದ ಬಳಿಕ ಹೇಳಿಕೆ ನೀಡಿದ್ದು, ಮಂತ್ರಿ ಆಗುವುದು ನನ್ನ ಬೇಡಿಕೆ ಅಲ್ಲ, ಬದಲಿಗೆ ಜಿಲ್ಲೆ ವಿಭಜನೆ ಮಾಡುವುದು ನನ್ನ ಮೊದಲ ಬೇಡಿಕೆ. ಸಿಎಂ ಈವರೆಗೂ ನನ್ನ ಬೇಡಿಕೆ ಈಡೇರಿಸಿಲ್ಲ ಎಂದಿದ್ದರು. ಆದರೆ ಸಿಎಂ ಜಿಲ್ಲಾ ವಿಭಜನೆ ಇಲ್ಲ ಎನ್ನುವ ಮೂಲಕ ಆನಂದ್ ಸಿಂಗ್ ಗೆ ಭಾರಿ ಹಿನ್ನಡೆಯನ್ನು ಉಂಟು ಮಾಡಿದ್ದಾರೆ. ಇತ್ತ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಸೋಮಶೇಖರ್ ರೆಡ್ಡಿ, ಸಿಎಂ ಹೇಳಿಕೆ ನಮಗೆ ಸಂತೋಷ ತಂದಿದೆ. ಜಿಲ್ಲೆ ವಿಭಜನೆ ಮಾಡುವುದು ಬೇಡ ಎಂದು ನಾ ಹಿಂದಿನಿಂದಲೂ ಹೇಳಿದ್ದೆ. ಹೀಗಾಗಿ ಸಿಎಂ ನಿರ್ಧಾರ ನಮಗೆ ಸಂತೋಷ ತಂದಿದೆ ಎಂದಿದ್ದಾರೆ.
ನಾನು ಸಚಿವ ಸ್ಥಾನದ ಆಕಾಂಕ್ಷಿಯೇ ಅಲ್ಲ ಎಂದಿದ್ದೇಕೆ ಆನಂದ್ ಸಿಂಗ್?
ಜಿಲ್ಲಾ ವಿಭಜನೆ ಟ್ರಂಪ್ ಕಾರ್ಡ್ ಎನ್ನುವ ಕಾಂಗ್ರೆಸ್ ವಾದ
ಪ್ರತಿ ಚುನಾವಣೆ ಬಂದಾಗಲೂ ಆನಂದ್ ಸಿಂಗ್ ಒಂದೊಂದು ಟ್ರಂಪ್ ಕಾರ್ಡ್ ಮುಂದೆ ಇಟ್ಟುಕೊಂಡು ಚುನಾವಣೆಗೆ ನಿಲ್ಲುತ್ತಾರೆ, ಈ ಬಾರಿ ಜಿಲ್ಲಾ ವಿಭಜನೆಯ ವಿಷಯ ಮುಂದಿಟ್ಟುಕೊಂಡು ಚುನಾವಣೆ ಗೆದ್ದಿದ್ದಾರೆ ಎನ್ನುವುದು ಕಾಂಗ್ರೆಸ್ ನಾಯಕರ ವಾದ. ಇತ್ತ ಶ್ರೀರಾಮುಲು ಮತ್ತು ರೆಡ್ಡಿ ಸಮಾಧಾನ ಮಾಡಲು ಸಿಎಂ ಈ ತಂತ್ರ ಹೆಣೆದಿದ್ದಾರಾ ಎನ್ನುವ ಅನುಮಾನ ಜನರಲ್ಲಿ ಇದೆ. ಅಲ್ಲದೆ ಡಿಸಿಎಂ ಸ್ಥಾನವನ್ನು ರಾಮುಲು ಅವರಿಗೆ ನೀಡಲೇಬೇಕು ಎನ್ನುವುದು ರೆಡ್ಡಿ ಆಂಡ್ ಟೀಮ್ ವಾದ. ಆದರೆ ಇದನ್ನು ಶಮನ ಮಾಡಿ, ರೆಡ್ಡಿ ರಾಮುಲು ಅವರನ್ನು ಸಮಾಧಾನ ಮಾಡಲು ಸಿಎಂ ಆನಂದ್ ಸಿಂಗ್ ಆಸೆಗೆ ತಣ್ಣೀರು ಹಾಕಿದ್ದಾರೆ ಅಂದರೆ ತಪ್ಪಾಗಲ್ಲ.
ಮತ್ತೆ ಬಿಜೆಪಿಯ ವಶವಾದ ವಿಜಯನಗರ ಕ್ಷೇತ್ರ
ತಮ್ಮ ಸ್ಥಾನವನ್ನು ಭದ್ರ ಮಾಡಿಕೊಳ್ಳಲು ಭರವಸೆ ನೀಡಿದರಾ?
ರಾಮುಲು ಅವರನ್ನು ಡಿಸಿಎಂ ಮಾಡಲೇಬೇಕು ಎನ್ನುವ ಬೇಡಿಕೆಗಳು ಪದೇ ಪದೇ ಕೇಳಿ ಬರುತ್ತಿತ್ತು. ಹೀಗಾಗಿ ರೆಡ್ಡಿ, ಶ್ರೀರಾಮುಲು ಅವರನ್ನು ಸಮಾಧಾನ ಮಾಡುವ ಸಲುವಾಗಿ ಆನಂದ್ ಸಿಂಗ್ ಬೇಡಿಕೆಯನ್ನು ತಳ್ಳಿ ಹಾಕಿದ್ದಾರೆ ಎನಿಸುತ್ತದೆ. ಸಿಎಂ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಳ್ಳುವ ದೃಷ್ಟಿಯಿಂದ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಇದೇ ಕಾರಣಕ್ಕೆ ಅಂದು ನಿಮ್ಮ ಎಲ್ಲ ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿದ್ದರು. ಈಗ ಆನಂದ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರ ಕೆಡವಿ ಮತ್ತೊಮ್ಮೆ ರಾಜ್ಯದಲ್ಲಿ ಕಮಲ ಅರಳಲು ಕಾರಣ ಆದ ಆನಂದ್ ಸಿಂಗ್ ಅವರ ಮುಂದಿನ ನಡೆ ಏನು ಎನ್ನುವುದು ಸದ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.