ಕುಮಾರಸ್ವಾಮಿ ಕುರ್ಚಿ ಕಳೆದುಕೊಳ್ಳಲು ಸಂಡೂರಿನ ದೇವರ ಶಾಪ ಕಾರಣವೇ?
Recommended Video
ಬಳ್ಳಾರಿ, ಜುಲೈ 24: ಕುಮಾರಸ್ವಾಮಿಯವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಮ್ಮಿಶ್ರ ಸರ್ಕಾರ ಪತನಗೊಂಡು ಹೊಸ ಸರ್ಕಾರ ರಚನೆಯ ಸಿದ್ಧತೆ ನಡೆಯುತ್ತಿದೆ. ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗುತ್ತಿದೆ. ಈ ನಡು ನಡುವೆಯೇ, ಕುಮಾರಸ್ವಾಮಿ ಅವರು ಕುರ್ಚಿ ಕಳೆದುಕೊಳ್ಳಲು ಕಾರಣ ಏನಿರಬಹುದು ಎಂಬ ಚರ್ಚೆಯೂ ಎಲ್ಲೆಡೆ ನಡೆಯುತ್ತಿದೆ. ಒಬ್ಬೊಬ್ಬರು ಒಂದೊಂದು ಕಾರಣಗಳನ್ನು ಕೊಡುತ್ತಿದ್ದಾರೆ.
ಅಂಥದ್ದೇ ಒಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ದೇವರ ಶಾಪವೇ ಕಾರಣ ಎಂದು ಹಲವರು ವಾದ ಮಾಡುತ್ತಿದ್ದಾರೆ. ಅದರ ಮೂಲ ಬಳ್ಳಾರಿ ಎಂದು ಹೇಳಲಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುಮಾರಸ್ವಾಮಿ ದೇವರ ಶಾಪ ಕುಮಾರಸ್ವಾಮಿಯವರಿಗೆ ತಟ್ಟಿದೆ ಎಂದು ಪೋಸ್ಟ್ ಗಳಲ್ಲಿ ಹೇಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕುಮಾರಸ್ವಾಮಿ
ಲೋಕಸಭೆ ಚುನಾವಣೆಗೆ ಮುಂಚೆ ಸಂಡೂರಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿಯವರು, ಆ ಸಂದರ್ಭ ಸಂಡೂರು ಶ್ರೀ ಕುಮಾರಸ್ವಾಮಿ ದೇಗುಲದ ಸುತ್ತ ಮೂರು ಕಿಲೋ ಮೀಟರ್ ವ್ಯಾಪ್ತಿವರೆಗೂ ಗಣಿಗಾರಿಕೆ ನಿಷೇಧ ಮಾಡುತ್ತೇನೆಂದು ವಚನ ನೀಡಿದ್ದರು.
ಆದರೆ ಅಧಿಕಾರಕ್ಕೆ ಬಂದ ನಂತರ ಅದನ್ನು ಮರೆತರು. ಬಳಿಕ ಜಿಂದಾಲ್ ಕಂಪನಿಗೆ ಗಣಿಗಾರಿಕೆ ಮಾಡಲು ಅವಕಾಶ ನೀಡಿದ್ದರು. ಹೀಗಾಗಿ ಅವರಿಗೆ ತಕ್ಕ ಶಾಸ್ತಿ ಆಗಿದೆ, ಕುಮಾರಸ್ವಾಮಿ ದೇವರ ಶಾಪವೇ ಕುಮಾರಸ್ವಾಮಿ ಅವರ ಈಗಿನ ಸ್ಥಿತಿಗೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳು ರಾರಾಜಿಸುತ್ತಿವೆ. ಅಲ್ಲದೆ, ಮತ್ತೆ ಯಾರಾದರೂ ಗಣಿಗಾರಿಕೆಗೆ ಅನುಮತಿ ನೀಡಿದರೆ ಕುಮಾರಸ್ವಾಮಿಗೆ ಆದ ಶಾಸ್ತಿ ಅವರಿಗೂ ಆಗುತ್ತೆ ಎಂದು ಪೋಸ್ಟ್ ಗಳಲ್ಲೇ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.