ಮೈಲಾರಲಿಂಗೇಶ್ವರ ದರ್ಶನ ಪಡೆದ ರವಿ. ಡಿ. ಚನ್ನಣ್ಣನವರ್
ವಿಜಯನಗರ, ಜುಲೈ 12: ಸಿಐಡಿ ಎಸ್ಪಿಯಾಗಿ ವರ್ಗಾವಣೆಗೊಂಡಿರುವ ರವಿ. ಡಿ. ಚನ್ನಣ್ಣನವರ್ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿ ಅಶೋಕ್ ಮಿರ್ಜಿ ಭಾನುವಾರ ಮೈಲಾರಲಿಂಗೇಶ್ವರ ದರ್ಶನ ಪಡೆದರು.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಶ್ರೀಕ್ಷೇತ್ರ ಮೈಲಾರಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಅಶೋಕ್ ಮಿರ್ಜಿ ಮತ್ತು ಐಪಿಎಸ್ ಅಧಿಕಾರಿ ರವಿ. ಡಿ. ಚನ್ನಣ್ಣನವರ್ ಭಾನುವಾರ ಸಂಜೆ ಭೇಟಿ ನೀಡಿ ಮೈಲಾರಲಿಂಗೇಶ್ವರನಿಗೆ ಹೂವು, ಹಣ್ಣು, ಕಾಯಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಈ ವೇಳೆ ಧರ್ಮಧಿಕಾರಿ ಶ್ರೀಗುರು ವೆಂಕಟಪ್ಪ ಒಡೆಯರ್ ಸಿಐಡಿ ಎಸ್ಪಿ ರವಿ. ಡಿ. ಚನ್ನಣ್ಣನವರರನ್ನು ಸ್ವಾಗತಿಸಿ ಮಾತನಾಡಿ, ಮೈಲಾರ ಕ್ಷೇತ್ರದ ಮಹಿಮೆಯನ್ನು ತಿಳಿಸಿದರು. "ನೀವು ಇನ್ನೂ ಉನ್ನತ ಹುದ್ದೆಗಳನ್ನು ಅಲಂಕರಿಸಿ ಜನರ ಸೇವೆಯನ್ನು ಮಾಡಿ ಮತ್ತು ನೂತನ ವಿಜಯನಗರ ಜಿಲ್ಲೆಗೆ ಎಸ್ಪಿ ಆಗಿ ಬಂದು ನಮ್ಮ ಜನರ ಸೇವೆ ಮಾಡಿ,'' ಎಂದು ಆಶೀರ್ವಾದ ಮಾಡಿದರು.
ಇದೇ ವೇಳೆ ಪ್ರಧಾನ ಅರ್ಚಕ ಪ್ರಮೋದ್ ಭಟ್ ಅರ್ಚನೆ ಮಾಡಿ ಮಂಗಳಾರತಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಇಒ ಎಚ್.ಗಂಗಾಧರ್, ಕಾರಣಿಕದ ಗೋರವಯ್ಯ, ರಾಮಣ್ಣ ಹಾಗೂ ಬಾಬುದಾರ ಇದ್ದರು.
ಇದಕ್ಕೂ ಮೊದಲು ರವಿ. ಡಿ. ಚನ್ನಣ್ಣನವರ್ ಮೈಲಾರ ಕ್ಷೇತ್ರದ ಕನಕ ಗುರುಪೀಠಕ್ಕೆ ಭೇಟಿ ನೀಡಿ ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದ ಪಡೆದರು. ರವಿ. ಡಿ. ಚನ್ನಣ್ಣನವರ್ ಭೇಟಿ ನೀಡುತ್ತಿದ್ದ ಹಾಗೆ ಯುವಕರು ಮತ್ತು ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಮುಗಿಬಿದ್ದರು.