ಸಿಎಎ ಬೆಂಬಲಿಸಿ ರ್ಯಾಲಿ: ನಖ್ರಾ ಮಾಡಿದರೆ ಸರಿಯಿರೋಲ್ಲ, ರೊಚ್ಚಿಗೇಳಬೇಕಾಗುತ್ತೆ
ಬಳ್ಳಾರಿ, ಜ 3: ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.
"ಸಿಎಎ ಅನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಲಿ" ಎಂದಿರುವ ಶಾಸಕ ರೆಡ್ಡಿ, "ನಖರಾ ಮಾಡಿದರೆ, ನಾವೂ ರೊಚ್ಚಿಗೇಳಬೇಕಾಗುತ್ತದೆ" ಎನ್ನುವ ಮಾತನ್ನು ಹೇಳಿದ್ದಾರೆ.
ಇಡೀ ಕರ್ನಾಟಕಕ್ಕೆ ಭೀಕರ ಪ್ರವಾಹ ಎದುರಾದಾಗ ಮೋದಿ ಬರಲಿಲ್ಲ: ಸಿದ್ದರಾಮಯ್ಯ
"ನಾವಿರೋದು ಶೇ. 80ರಷ್ಟು ನೀವಿರೋದು ಶೇ. 17ರಷ್ಟು. ಕಾಂಗ್ರೆಸ್ ಮುಖಂಡರು ನಿಮ್ಮ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಸಹನೆಯನ್ನು ಪರೀಕ್ಷಿಸಬೇಡಿ" ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.
"ದುರ್ಗಮ್ಮನ ಖಡ್ಗವನ್ನು ಹಿಡಿದುಕೊಂಡು ಬಂದರೆ ಕಷ್ಟವಾಗುತ್ತದೆ. ಕಾಂಗ್ರೆಸ್ಸಿನವರು ಬೇವಕೂಫ್ ಗಳು. ಅವರ ಮಾತನ್ನು ಕೇಳಿದರೆ, ನೀವೆಲ್ಲಾ ಬೀದಿಗೆ ಬರುತ್ತೀರಾ" ಎನ್ನುವ ಎಚ್ಚರಿಕೆಯನ್ನು ರೆಡ್ಡಿ ನೀಡಿದ್ದಾರೆ.
"ಕಾಂಗ್ರೆಸ್ಸಿನ ಮುಖಂಡರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಲಿ. ನಿಮಗೆಲ್ಲಾ ಸೀರಿಯಸ್ ಆಗಿ ಎಚ್ಚರಿಕೆ ಕೊಡುತ್ತಿದ್ದೇನೆ. ನಮ್ಮ ಆಸ್ತಿಗಳನ್ನು ನಾಶ ಮಾಡಬೇಡಿ. ನಾವೆಲ್ಲಾ ಹಿರಿಯರು ಕರೆ ನೀಡಿದರೆ, ಏನಾಗುತ್ತೆ ಎಂದು ಒಮ್ಮೆ ಯೋಚಿಸಿ" ಎಂದು ಶಾಸಕ ರೆಡ್ಡಿ, ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
"ನಿಮಗೆಲ್ಲಾ ಪಾಕಿಸ್ತಾನದ, ಬಾಂಗ್ಲಾದೇಶದ ಹುಳ ಕಡಿಯುತ್ತದಾ" ಎಂದು ಪ್ರಶ್ನಿಸಿರುವ ರೆಡ್ಡಿ, "ಇನ್ನೊಂದು ಸಲ ಏನಾದರೂ ಬಳ್ಳಾರಿಯಲ್ಲಿ ಸಿಎಎ ವಿರುದ್ದ ಪ್ರತಿಭಟನೆ ನಡೆದರೆ ನಾವು ಸುಮ್ಮನಿರುವುದಿಲ್ಲ" ಎಂದು ರೆಡ್ಡಿ ಹೇಳಿದ್ದಾರೆ.