ಮದುವೆಯಾದರೂ ಬಿಡದ ಹಳೆ ಪ್ರೀತಿ; ಬಳ್ಳಾರಿಯಲ್ಲಿ ಮರ್ಯಾದೆಗಂಜಿ ಮಗಳನ್ನೇ ಕೊಲೆ ಮಾಡಿದ ತಂದೆ
ಬಳ್ಳಾರಿ, ಫೆಬ್ರವರಿ 12: ಮದುವೆಯಾಗಿದ್ದರೂ ಹಳೆಯ ಪ್ರಿಯಕರನ ಜೊತೆ ಓಡಾಡುತ್ತಿದ್ದಳು ಎಂಬ ಕಾರಣಕ್ಕೆ ಮಗಳನ್ನು ಅಪ್ಪನೇ ಕೊಲೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಅಷ್ಟೇ ಅಲ್ಲ, ಮಗಳನ್ನು ಕೊಂದು "ನಾನೇ ನನ್ನ ಮಗಳನ್ನು ಕೊಂದಿದ್ದೇನೆ. ಮಗಳ ತಪ್ಪನ್ನು ಎಷ್ಟೆಂದು ಸಹಿಸಲು ಸಾಧ್ಯ" ಎಂದು ಕಾರಣ ನೀಡಿ ತಂದೆ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.
ಬಳ್ಳಾರಿಯ ಕವಿತಾ (23) ಕೊಲೆಯಾದವರು. ಕವಿತಾ ಅವರಿಗೆ ಮದುವೆ ಮಾಡಲಾಗಿದ್ದು, ಅವರಿಗೆ ಆರು ತಿಂಗಳ ಮಗುವಿದೆ. ಆದರೂ ಆಕೆ ಹಳೆಯ ಪ್ರಿಯತಮನೊಂದಿಗೆ ಓಡಾಡುತ್ತಿದ್ದಳು ಎಂದು ಮರ್ಯಾದೆಗೆ ಅಂಜಿ ಅಪ್ಪನೇ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ.
"ಮಗಳನ್ನು ನಾನೇ ಕೊಂದೆ" ಎಂದ ಅಪ್ಪ
ಮಗಳನ್ನು ಕೊಲೆ ಮಾಡಿ "ಮಗಳನ್ನು ನಾನೇ ಕೊಂದಿದ್ದೇನೆ. ಅವಳಿಗೆ ಆರು ತಿಂಗಳ ಮಗುವಿದೆ. ಆದರೂ ಆಕೆ ಬೇರೆ ಗಂಡಿನೊಂದಿಗೆ ಸುತ್ತಾಡುತ್ತಿದ್ದಳು. ಅವಳ ತಪ್ಪನ್ನು ಎಷ್ಟೆಂದು ಮನ್ನಿಸಲು ಸಾಧ್ಯ? ಹೀಗಾಗೇ ಕೊಲೆ ಮಾಡಿದೆ" ಎಂದು ತಂದೆ ಪೊಲೀಸರಿಗೆ ಶರಣಾಗಿ ಹೇಳಿಕೆ ನೀಡಿದ್ದಾನೆ. ತನ್ನ ಮಗಳ ನಡವಳಿಕೆಯೇ ನಾನು ಕೊಲೆ ಮಾಡಲು ಪ್ರೇರಕವಾಯಿತು ಎಂದೂ ಹೇಳಿಕೊಂಡಿದ್ದಾನೆ.
14 ವರ್ಷ, 6 ಕೊಲೆ; ಸರಣಿ ಹಂತಕಿ ಜಾಲಿ ಜೋಸೆಪ್ ಕೊಲೆಗಾಗಿ ಬಳಸಿದ್ದು ಸೈನಡ್ ಅಲ್ಲ!
ಮದುವೆಯಾದ ಮೇಲೂ ಬಿಡದ ಪ್ರೀತಿ
ಕವಿತಾಗೆ ಹದಿನೆಂಟು ವಯಸ್ಸಿರುವಾಗ ಒಬ್ಬನನ್ನು ಪ್ರೀತಿಸುತ್ತಿದ್ದಳು. ಅದೇ ಗ್ರಾಮದ ಯುವಕನೊಂದಿಗೆ ಸುತ್ತಾಡುತ್ತಿರುವುದನ್ನು ಅರಿತ ಕುಟುಂಬಸ್ಥರು ಕವಿತಾಳನ್ನು ನಾಲ್ಕು ವರ್ಷದ ಹಿಂದೆ ಮದುವೆ ಮಾಡಿದ್ದರು. ಆದರೆ ತನ್ನ ಹಳೇ ಪ್ರಿಯತಮನನ್ನು ಬಿಟ್ಟಿರದ ಕವಿತಾ ಊರಿಗೆ ಬಂದಾಗಲೆಲ್ಲ ಅವನ ಜೊತೆ ಹೋಗುತ್ತಿದ್ದಳು ಎಂದು ತಿಳಿದುಬಂದಿದೆ. ಎಷ್ಟೇ ಬುದ್ಧಿ ಹೇಳಿದರೂ ಕೇಳದ ಕಾರಣ ತಂದೆಯೇ ಕತ್ತು ಹಿಸುಕಿ ಕೊಂದು ಹಾಕಿದ್ದಾನೆ.
ಬಹಿರಂಗವಾದ ಅನೈತಿಕ ಸಂಬಂಧ
ಈ ನಡುವೆ ಕವಿತಾಳ ಸಂಬಂಧ ಬಹಿರಂಗವಾಗಿತ್ತು. ಕಳೆದ ತಿಂಗಳು ಕವಿತಾ ಗಂಡನ ಮನೆ ಬಿಟ್ಟು ನೇರವಾಗಿ ಪ್ರಿಯತಮನ ಜೊತೆ ಹೋಗಿದ್ದಳು. ಇದರಿಂದ ಮತ್ತೊಮ್ಮೆ ಕುಟುಂಬ ಸದಸ್ಯರು ಕವಿತಾಗೆ ಬುದ್ಧಿ ಮಾತನ್ನು ಹೇಳಿ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ಆ ಹುಡುಗ ಕೂಡ ಮತ್ತೆ ಮತ್ತೆ ಕವಿತಾಳನ್ನು ಸಂಪರ್ಕ ಮಾಡಲು ಮನೆ ಹತ್ತಿರ ಬರುತ್ತಿದ್ದ ಎಂದು ತಿಳಿದುಬಂದಿದೆ.
ಉಡುಪಿಯಲ್ಲಿ ಮುಂಬೈ ಹೋಟೆಲ್ ಮಾಲೀಕ ಕೊಲೆ!
ಅನಾಥವಾಯ್ತು ಆರು ತಿಂಗಳ ಮಗು
ಈ ನಡವಳಿಕೆಯಿಂದ ಬೇಸತ್ತು ನಿನ್ನೆ ಫೆಬ್ರವರಿ 11ರಂದು ಮನೆಯಲ್ಲಿ ತಂದೆ ಕವಿತಾಳ ಕತ್ತು ಹಿಸುಕಿ ಕೊಂದು ಶವವನ್ನು ಹೊಲಕ್ಕೆ ತಂದು ಎಸೆದಿದ್ದಾನೆ. ಕವಿತಾಳ ಆರು ತಿಂಗಳ ಮಗು ಇದೀಗ ಅನಾಥವಾಗಿದೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪರಮದೇವನ ಹಳ್ಳಿ ಪೊಲೀಸರು ಇದು ಒಬ್ಬರ ಕೃತ್ಯವೇ ಅಥವಾ ಮನೆಯವರು ಸೇರಿ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲನೆ ಮಾಡುತ್ತಿದ್ದಾರೆ.