ಧಮ್ ಇದ್ರೆ ಒಬ್ಬರೇ ಬಳ್ಳಾರಿಗೆ ಬನ್ನಿ ಎಂದು ಜಮೀರ್ ಗೆ ರೆಡ್ಡಿ ಸವಾಲ್
ಬಳ್ಳಾರಿ, ಜನವರಿ.13: ಧಮ್ ಇದ್ದರೆ ಮಾಜಿ ಸಚಿವ ಜಮೀರ್ ಅಹ್ಮದ್ ಒಬ್ಬರೇ ಬಳ್ಳಾರಿಗೆ ಬರಲಿ ಎಂದು ಶಾಸಕ ಸೋಮಶೇಖರ್ ರೆಡ್ಡಿ ಮತ್ತೊಮ್ಮೆ ಸವಾಲ್ ಎಸೆದಿದ್ದಾರೆ. ಬಳ್ಳಾರಿ ರೆಡ್ಡಿಗಳ ತಂಟೆಗೆ ಬಂದರೆ ಪರಿಣಾಮ ಹೇಗಿರುತ್ತದೆ ಎಂದು ಅವರಿಗಿನ್ನೂ ಗೊತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಶಾಸಕ ಸೋಮಶೇಖರ್ ರೆಡ್ಡಿ, ಜಮೀರ್ ಅಹ್ಮದ್ ಒಬ್ಬ ಹುಚ್ಚುನಾಯಿ ಎಂದು ಸಂಬೋಧಿಸಿದ್ದಾರೆ. ಹುಚ್ಚುನಾಯಿ ಜಮೀರ್ ಅಹ್ಮದ್ ಖಾನ್ ಕಚ್ಚುವುದಕ್ಕಾಗಿ ಬೆಂಗಳೂರಿನಿಂದ ಬಳ್ಳಾರಿಗೆ ಬಂದಿತ್ತು ಅಂತಾ ಹರಿಹಾಯ್ದರು.
ಸೋಮಶೇಖರ ರೆಡ್ಡಿ ಮನೆ ಮುಂದೆ ಪ್ರತಿಭಟನೆ: ಜಮೀರ್ ಅಹ್ಮದ್ ಬಂಧನ
ಹುಚ್ಚುನಾಯಿಯನ್ನು ಓಡಿಸಲು ನಮ್ಮ ಹುಡುಗರು ಕೋಲು ಹಿಡಿದು ನಿಂತಿದ್ದರು. ತಾಕತ್ತಿದ್ದರೆ ಜಮೀರ್ ಅಹ್ಮದ್ ಒಬ್ಬರೇ ಬಳ್ಳಾರಿಗೆ ಬರಲಿ. ನಾನೂ ಕೂಡಾ ಒಬ್ಬನೇ ಬರುತ್ತಿದೆ. ಇಬ್ಬರೂ ಫೈಟ್ ಮಾಡೋಣ ಎಂದು ಸವಾಲ್ ಹಾಕಿದ್ದಾರೆ.
"ನಾನು ಯಾರಿಗೋ ಹೇಳಿದರೆ ಇವರಿಗೇಕೆ ಸಿಟ್ಟು?"
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿಚಾರದಲ್ಲಿ ದೇಶದ ಆಸ್ತಿ-ಪಾಸ್ತಿ ನಷ್ಟ ಮಾಡಿದವರ ವಿರುದ್ಧ ನಾನು ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದೆನು. "ಈ ಜಮೀರ್ ಆಹ್ಮದ್ ಏನು ದೇಶದ ಆಸ್ತಿಗೆ ನಷ್ಟ ಉಂಟು ಮಾಡಿದ್ದಾನಾ. ಅಥವಾ ಬಳ್ಳಾರಿಯಲ್ಲಿರುವ ಅವನ ಕೆಲವು ಬೆಂಬಲಿಗರು ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿದ್ದಾರಾ?. ಕುಂಬಳಕಾಯಿ ಕಳ್ಳ ಎಂದರೆ ಇವರೇನೆ ಬೆನ್ನು ಮುಟ್ಟಿ ನೋಡಿಕೊಳ್ಳುತ್ತಾರೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಪ್ರಶ್ನೆ ಮಾಡಿದರು.
"ಎಲ್ಲ ಕಾಂಗ್ರೆಸ್ ನಾಯಕರೂ ಬೇಕಾದ್ರೆ ಬಂದು ಪ್ರತಿಭಟಿಸಲಿ"
ತಮ್ಮ ಹೇಳಿಕೆ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಕಾಂಗ್ರೆಸ್ ನಾಯಕರೆಲ್ಲ ಬಳ್ಳಾರಿಗೆ ಬಂದು ಪ್ರತಿಭಟನೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಶಾಸಕ ಸೋಮಶೇಖರ್ ರೆಡ್ಡಿ, ಬೇಕಿದ್ದಲ್ಲಿ ದೇಶಾದ್ಯಂತ ಇರುವ ಕಾಂಗ್ರೆಸ್ ನಾಯಕರೆಲ್ಲ ಬಂದು ಪ್ರತಿಭಟನೆ ಮಾಡಲಿ. ನಾನೇ ಅವರಿಗೆ ವ್ಯವಸ್ಥೆ ಮಾಡಿ ಕೊಡುತ್ತೇನೆ. ಶಾಮಿಯಾನ ಹಾಕಿಸುತ್ತೇನೆ, ಒಳ್ಳೆಯ ಊಟದ ವ್ಯವಸ್ಥೆ ಮಾಡಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಜಮೀರ್ ವಿರುದ್ಧ ಸೋಮಶೇಖರ ರೆಡ್ಡಿ ಸಿಡಿಮಿಡಿ
ಬಳ್ಳಾರಿಯಲ್ಲಿ ಐವತ್ತು ಮಂದಿಯನ್ನು ಸೇರಿಸಿಕೊಂಡು ರೆಡ್ಡಿಗಳ ವಿರುದ್ಧ ಪ್ರತಿಭಟನೆ ನಡೆಸಲು ಬಂದರೆ ಅದೆಲ್ಲ ನಡೆಯುವ ಮಾತಲ್ಲ. ಹುಚ್ಚುನಾಯಿ ಹಾಗೆ ಬಂದವನ ಓಡಿಸಲು ಹುಡುಗರು ಕೋಲು ಹಿಡಿದು ನಿಂತಿದ್ದರು. ಆದದೆ, ಪೊಲೀಸರೇ ಅವನನ್ನು ಬೆಂಗಳೂರಿಗೆ ವಾಪಸ್ ಕಳುಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರೆಡ್ಡಿ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದ ಜಮೀರ್
ಇಷ್ಟೆಲ್ಲ ಬೆಳವಣಿಗೆಗೂ ಮುನ್ನ ಮುಸ್ಲೀಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಬಳ್ಳಾರಿಗೆ ಬರುವಂತೆ ಸವಾಲು ಹಾಕಿದ್ದ ಶಾಸಕ ಸೋಮಶೇಖರ ರೆಡ್ಡಿ ಸವಾಲು ಸ್ವೀಕರಿಸಿದ ಜಮೀರ್ ಅಹ್ಮದ್ ಖಾನ್ ಬಳ್ಳಾರಿಗೆ ತೆರಳಿ ಪ್ರತಿಭಟನೆಗೆ ಮುಂದಾಗಿದ್ದರು. ಬಳ್ಳಾರಿಯಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸಿದ ಜಮೀರ್ ಅಹ್ಮದ್ ಖಾನ್ ರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜಮೀರ್ ಅಹ್ಮದ್, ಶಾಂತಿಯುತವಾಗಿ ಪ್ರತಿಭಟನೆಗೆ ತೆರಳಿದ ತಮ್ಮನ್ನು ರೆಡ್ಡಿ ಮನೆಯಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಇರುವಾಗಲೇ ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.