ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ
ಬಳ್ಳಾರಿ, ಜೂನ್ 06: "ಯಾವುದೇ ಕಾರಣಕ್ಕೂ ಚಿಕ್ಕಮಕ್ಕಳಿಗೆ ಆನ್ ಲೈನ್ ಕ್ಲಾಸ್ ಮಾಡಲು ನಾನು ಬಿಡುವುದಿಲ್ಲ. ಈ ಕುರಿತು ಅಂತಿಮ ತೀರ್ಮಾನವನ್ನು ಜೂನ್ 8ರ ಸೋಮವಾರ ತೆಗೆದುಕೊಳ್ಳಲಾಗುತ್ತದೆ" ಎಂದು ತಿಳಿಸಿದ್ದಾರೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್.
Recommended Video
ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಎಸ್ ಎಸ್ಎಲ್ ಸಿ ಪೂರ್ವ ಸಿದ್ಧತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, "ಆನ್ ಲೈನ್ ಕ್ಲಾಸ್ ನಡೆಸಲು ಸರ್ಕಾರ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಈ ಬಗ್ಗೆ ಸೋಮವಾರ ಅಂತಿಮ ತೀರ್ಮಾನ ಮಾಡಲಾಗುವುದು. ಆದರೆ ಚಿಕ್ಕ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆನ್ಲೈನ್ ಕ್ಲಾಸ್ ನಡೆಸುವುದಿಲ್ಲ" ಎಂದಿದ್ದಾರೆ. ಜುಲೈ ನಾಲ್ಕಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಯಲಿದ್ದು, ಜುಲೈ ಕೊನೆಯ ವಾರದಲ್ಲಿ ಫಲಿತಾಂಶ ಕೊಡಲು ವ್ಯವಸ್ಥೆ ಮಾಡಲಾಗುವುದು. ವಲಸೆ ಕಾರ್ಮಿಕರ ಮಕ್ಕಳಿಗೆ ಹತ್ತಿರದ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿದೆ. ಒಂದು ವೇಳೆ ಮಕ್ಕಳು ಫೇಲ್ ಆದ್ರೆ ಪ್ರತಿ ವರ್ಷದಂತೆ ಈ ವರ್ಷವೂ ಪೂರಕ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ. ಇದೇ ವೇಳೆ ಇನ್ನಷ್ಟು ಮಾಹಿತಿಗಳನ್ನು ಹಂಚಿಕೊಂಡರು...
ಆನ್ ಲೈನ್ ಕ್ಲಾಸ್ ಬಗ್ಗೆ ಸ್ಪಷ್ಟ ಮಾಹಿತಿ ಸೋಮವಾರ
ಶಾಲೆ ಆರಂಭ ಮಾಡಲು ಕೇಂದ್ರ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಶಾಲೆ ಆರಂಭ ಸದ್ಯಕ್ಕೆ ಇಲ್ಲ. ಆನ್ ಲೈನ್ ಕ್ಲಾಸ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಆನ್ ಲೈನ್ ಕ್ಲಾಸ್ ಮಾಡಲು ಮೊದಲ ಎಸ್ ಡಿ ಎಮ್ ಸಿ ಸದಸ್ಯರು, ಪಾಲಕರ ಸಭೆ ನಡೆಸಿ ಅವರ ಅಭಿಪ್ರಾಯ ಚಿಂತನೆ ನಡೆಸಲಾಗುವುದು. ಆದರೆ ಮಕ್ಕಳ ಮೇಲೆ ದುಷ್ಪರಿಣಾಮ ಆಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಎಲ್ ಕೆ ಜಿ ಲೋಯರ್ ಕ್ಲಾಸ್ ಗಳನ್ನು ಆರಂಭ ಮಾಡಲು ಮಕ್ಕಳ ಮತ್ತು ಪೋಷಕರ ವಿರೋಧ ಇದೆ. ಹಾಗೇ ಈ ಚಿಂತನೆ ಶಿಕ್ಷಣ ಇಲಾಖೆಯಲ್ಲೂ ಇದೆ. ಹೀಗಾಗಿ ಲೋಯರ್ ಕ್ಲಾಸ್ ನಲ್ಲಿ ಆನ್ ಲೈನ್ ಶಿಕ್ಷಣ ನೀಡಲು ನಾವೂ ಒಪ್ಪಲ್ಲ. ಯಾರಿಗೆ ಆನ್ ಲೈನ್ ಕ್ಲಾಸ್ ಕೊಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಿ ಸೋಮವಾರ ಆಲ್ ಲೈನ್ ಕುರಿತಾದ ಶಿಕ್ಷಣದ ಬಗ್ಗೆ ಆದೇಶ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದರು.
ಮಕ್ಕಳಿಗಷ್ಟೇ ಅಲ್ಲ, ಶಿಕ್ಷಣ ಸಚಿವರಿಗೂ ಪರೀಕ್ಷೆ; ಯಾರೂ 'ಫೇಲ್' ಆಗದಿರಲಿ
"ಖಾಸಗಿ ಶಾಲೆಗಳ ಲಾಬಿಗೆ ಬಗ್ಗುವ ಮನಸ್ಥಿತಿ ನನ್ನದಲ್ಲ"
ನಾನು ನನ್ನ ತಾಯಿಯ ಋಣ ತೀರಿಸಬೇಕಿದೆ. ನನ್ನ ತಾಯಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರು. ಆಕೆಯ ಋಣಭಾರದಿಂದ ಇಲ್ಲಿ ಕೂತಿದೀನಿ. ಹೀಗಾಗಿ, ಖಾಸಗಿ ಶಾಲೆಗಳ ಲಾಬಿಗೆ ಬಗ್ಗುವಂತಹ ಮನಸ್ಥಿತಿ ಇದುವರೆಗೂ ನನಗೆ ಬಂದಿಲ್ಲ. ನನಗೆ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರ ಋಣ ತೀರಿಸಲು ಒಂದು ಅವಕಾಶ ಕೊಟ್ಟಿದೆ. ಹಾಗಾಗಿ, ನನಗೆ ಖಾಸಗಿ ಶಾಲೆಗಳ ಲಾಬಿಯಾಗಲೀ, ಷೂ ಲಾಬಿಯಾಗಲೀ ಅಥವಾ ಟೆಕ್ಟ್ ಬುಕ್ ಲಾಬಿಯಾಗಲೀ ಇನ್ಯಾವುದೇ ಲಾಬಿಗೆ ಬಗ್ಗುವಂತಹ ಮನಸ್ಥಿತಿ ದೇವರ ದಯೆಯಿಂದ ಬಂದಿಲ್ಲ ಎಂದರು.
ಹೈಕೋರ್ಟ್ ನಲ್ಲಿ ಪಿಐಎಲ್ ಇತ್ಯರ್ಥ ಆಗಿದೆ
ಲಾಕ್ ಡೌನ್ ನಿಂದಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಲಾಯಿತು. ಕೇಂದ್ರ ಗೃಹ ಸಚಿವಾಲಯ ಸಮ್ಮತಿ ನೀಡಿದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೈಕೋರ್ಟ್ ಗೂ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಪರೀಕ್ಷೆಯಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಪರೀಕ್ಷೆ ಬರೆಸಲು ನಿರ್ಧರಿಸಲಾಗಿದೆ. ಎಲ್ಲಾ ನಿಯಮಾನುಸಾರ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಲು ಈಗಾಗಲೇ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ. ಪರೀಕ್ಷೆಯಲ್ಲಿ ಎಲ್ಲಾ ಮಕ್ಕಳಿಗೂ ಪ್ರತಿ ದಿನ ಆರೋಗ್ಯ ತಪಾಸಣೆ ಮಾಡಲಾಗುವುದು. ಜ್ವರ, ಕೆಮ್ಮು-ನೆಗಡಿ ಇದ್ದ ಮಕ್ಕಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುವುದು. ಮಕ್ಕಳ ಜೊತೆಯಲ್ಲಿ ಪಾಲಕರು ಗುಂಪುಗುಂಪಾಗಿ ಬರಬೇಡಿ ಎಂದು ಮನವಿ ಮಾಡಿದರು.
ಪುಟ್ಟ ಬಾಲಕಿಯ ಪ್ರಶ್ನೆಗೆ ಮನಸೋತ ಶಿಕ್ಷಣ ಸಚಿವ ಸುರೇಶ್ ಕುಮಾರ್
ಶಿಕ್ಷಕರ ಚಳಿ ಬಿಡಿಸಿದ ಸಚಿವ
ಶಾಲು - ಮಾಲೆ ಹಾಕಲು ಬಂದವರಿಗೆ ಗದರಿ, ನಿಮಗೆ ಒಮ್ಮೆ ಹೇಳಿದರೆ ಅರ್ಥ ಆಗಲ್ವಾ ಎಂದು ಶಿಕ್ಷಕರ ಮೇಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೆಂಡಾ ಮಂಡಲರಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆಗೆ ಆಗಮಿಸಿದ ಸುರೇಶ್ ಕುಮಾರ್ ಅವರನ್ನು ಜಿಲ್ಲಾಧಿಕಾರಿ ಪುಸ್ತಕ ಕೊಟ್ಟು ಬರಮಾಡಿಕೊಂಡರು. ಬಳಿಕ ಸ್ಥಳೀಯ ಕೆಲ ಶಿಕ್ಷಕರು ಹಾರ ಮಾಲೆ ಶಾಲು ಹೊದಿಸಿ ಬರಮಾಡಿಕೊಳ್ಳಲು ಮುಂದಾದರು. ಆಗ ಇದೆಲ್ಲ ಬೇಡ. ಈಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿ ಹೇಳಿದರು. ಆದರೆ ಕೆಲ ಶಿಕ್ಷಕರು ಮತ್ತೆ ಶಾಲು ಹಾಕಲು ಮುಂದಾದರು. ಆಗ ಸಚಿವರಿಗೆ ಕೋಪ ನೆತ್ತಿಗೆ ಏರಿ, ಪಾಠ ಮಾಡುವ ಶಿಕ್ಷಕರು ನೀವು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಿಗೆ ತಿಳಿ ಹೇಳಬೇಕು. ಆದ್ರೆ ನೀವೂ ಹೀಗೆ ಮಾಡಿದ್ರೆ ಹೇಗೆ ಎಂದು ಗದರಿ ಸಭೆಗೆ ನಡೆದರು.