'ಜಮೀರ್ ಭಾಯ್.. ಬಳ್ಳಾರಿಕೋ ಆವೋ ಆವೋ' ಎಂದ ಸೋಮಶೇಖರ ರೆಡ್ಡಿ
ಬಳ್ಳಾರಿ, ಜ 6: "ನಖ್ರಾ ಮಾಡಿದರೆ ಸರಿಯಿರೋಲ್ಲಾ.. ರೊಚ್ಚಿಗೇಳಬೇಕಾಗುತ್ತದೆ" ಎನ್ನುವ ಹೇಳಿಕೆಯನ್ನು ನೀಡಿದ್ದ ಬಳ್ಳಾರಿ ನಗರ ಶಾಸಕ, ಸೋಮಶೇಖರ ರೆಡ್ಡಿ, ರಾಜಕಾರಣಿಗಳ ಎಂದಿನ ಸ್ಟೈಲಿನಂತೆ, "ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ" ಎಂದು ಉಲ್ಟಾ ಹೊಡೆದಿದ್ದರು.
ಶಾಸಕ ಜಮೀರ್ ಅಹಮದ್ ಖಾನ್ ಈ ವಿಚಾರದಲ್ಲಿ ನೀಡಿದ ಸವಾಲಿನ ಬಗ್ಗೆ ಮಾತನಾಡುತ್ತಾ, "ಅವರ ಸಮುದಾಯದ ಬಗ್ಗೆ ಮಾತನಾಡಿದ್ದೇನೆ ಎಂದು ಜಮೀರ್ ಯಾಕೆ ತಿಳಿದುಕೊಳ್ಳುತ್ತಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಯಾಕೆ ನೋಡಬೇಕು" ಎಂದು ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಸೋಮಶೇಖರ್ ರೆಡ್ಡಿ ವಿರುದ್ಧ ಜಮೀರ್ ಏಕವಚನದಲ್ಲಿ ವಾಗ್ದಾಳಿ
"ನನ್ನ ಮನೆ ಮುಂದೆ ಧರಣಿ ಮಾಡುತ್ತೇನೆ ಎಂದು ಜಮೀರ್ ಹೇಳಿದ್ದಾರೆ. ಅವರಿಗೆ ಬಳ್ಳಾರಿಗೆ ಸ್ವಾಗತ ಕೋರುತ್ತೇನೆ. ಧರಣಿ ಮನೆ ಮುಂದೆ ಯಾಕೆ ಮಾಡುತ್ತಾರೆ. ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗಲಿ" ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.
"ದೇಶದ ಆಸ್ತಿ ಧ್ವಂಸವಾಗುತ್ತಿದೆ. ಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿರುವವರ ಬಗ್ಗೆ ನಾನು ಮಾತನಾಡಿದ್ದೇನೆಯೇ ಹೊರತು, ಯಾವುದೇ ಸಮುದಾಯದ ವಿರುದ್ದ ಅಲ್ಲ" ಎಂದು ಸೋಮಶೇಖರ ರೆಡ್ಡಿ, ತಮ್ಮ ಹೇಳಿಕೆಗೆ ಸಮರ್ಥನೆಯನ್ನು ನೀಡಿದ್ದಾರೆ.
"ದುರ್ಗಮ್ಮನ ಗುಡಿಗೆ ಹೋಗಿ, ನಾವು ಕೂಡಾ ಖಡ್ಗ ಹಿಡಿದುಕೊಂಡರೆ ಎಂದು ಮಾತ್ರ ಹೇಳಿದ್ದು. ಕಡಿದು ಬಿಡುತ್ತೇನೆ ಎಂದು ಹೇಳಿಲ್ಲ. ಅದಕ್ಕೆ ಜಮೀರ್ ವಿಪರೀತವಾಗಿ ಪ್ರತಿಕ್ರಿಯಿಸಿದ್ದಾರೆ. ತೋರಿಸಲಿ, ತೊಂದರೆಯಿಲ್ಲ, ಅವರನ್ನು ಬಳ್ಳಾರಿಗೆ ಸ್ವಾಗತಿಸುತ್ತಿದ್ದೇನೆ" ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ.
"ಸೋಮಶೇಖರ ರೆಡ್ಡಿಗೆ ಮಾನ ಮರ್ಯಾದೆ ಇದೆಯಾ, ಅವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಂದಿನ ಸೋಮವಾರದ ವರೆಗೆ ಕಾಯುತ್ತೇನೆ ಇಲ್ಲದೇ ಹೋದರೆ ಸೋಮಶೇಖರ್ ರೆಡ್ಡಿ ಮನೆ ಮುಂದೆ ನಾನೇ ಧರಣಿ ಕೂರುತ್ತೇನೆ" ಎಂದು ಜಮೀರ್ ಅಹಮದ್ ಸವಾಲು ಹಾಕಿದ್ದರು.