ನನಗೂ ಕರ್ನಾಟಕದ ಸಿಎಂ ಆಗುವ ತಾಕತ್ತು ಇತ್ತು, ಆದರೆ...
ವಿಜಯಪುರ, ಆಗಸ್ಟ್ 02: "ನನಗೆ ಕರ್ನಾಟಕದ ಸಿಎಂ ಆಗಿ ಕೆಲಸ ಮಾಡುವ ತಾಕತ್ತು ಇತ್ತು, ಆದರೆ ಬಿಜೆಪಿ ಪಕ್ಷ ನನ್ನನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ನನ್ನ ಸದುಪಯೋಗ ಮಾಡಿಕೊಂಡರೆ ಮುಂದಿನ ಬಾರಿ ರಾಜ್ಯದಲ್ಲಿ 150 ಸ್ಥಾನಗಳು ಬರುತ್ತವೆ,'' ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, "ಯಾರೋ ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಅಡತಡೆ ಮಾಡಿದರು, ಅವರ ರಾಜಕೀಯ ಭವಿಷ್ಯ ಈಗಾಗಲೇ ಮುಗಿದಿದೆ. ಪಾಪ ಅವರು ವಿಶ್ರಾಂತಿ ತೆಗೆದುಕೊಳ್ಳಲಿ, ಮೊಮ್ಮಕ್ಕಳನ್ನು ಆಟ ಆಡಿಸುತ್ತಾ ಮನೆಯಲ್ಲಿರಲಿ,'' ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡ್ಡಿಯೂರಪ್ಪಗೆ ಟಾಂಗ್ ನೀಡಿದರು.
"ವಿಜಯಪುರಕ್ಕೆ ಈ ಬಾರಿ ಸಚಿವ ಸಂಪುಟದಲ್ಲಿ ಅನ್ಯಾಯ ಆಗಲ್ಲ, ಯಡ್ಡಿಯೂರಪ್ಪನವರ ಮನೆಯಲ್ಲಿ ಈಗಾಗಲೇ ಒಬ್ಬರು ಇದ್ದಾರೆ. ಎಷ್ಟು ಜನರಿಗೆ ಅಂತಾ ಸರ್ಕಾರದಲ್ಲಿ ಹುದ್ದೆ ಕೊಡುವುದು. ಒಂದು ಮನೆಯಲ್ಲಿ ಎಷ್ಟು ಜನ ಎಂಎಲ್ಎ, ಎಂಪಿ ಆಗಬೇಕು? ಎಂದು ಪ್ರಶ್ನಿಸಿದ ಯತ್ನಾಳ್, ಬಿಜೆಪಿ ಹೈಕಮಾಂಡ್ಗೆ ಎಲ್ಲ ಗೊತ್ತಿದೆ. ಈ ಅನುವಂಶಿಕವನ್ನು ಮುಂದುವರೆಸಬಾರದೆಂದು ಯಡ್ಡಿಯೂರಪ್ಪರನ್ನು ಕೆಳಗಿಳಿಸಿ, ಬಸವರಾಜ ಬೊಮ್ಮಾಯಿರನ್ನು ಸಿಎಂ ಮಾಡಿದ್ದಾರೆ. ಅವರಿಗೂ ಬೆನ್ನಿಗೆ ಚೂರಿ ಹಾಕದೆ ಇದ್ದರೆ ಸಾಕು,'' ಎಂದು ಹರಿಹಾಯ್ದರು.
"ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಆದರೆ ಬಿಜೆಪಿ ಹೈಕಮಾಂಡ್ ಸಚಿವ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷಿ ಎಂದು ತಿಳಿಸಿದರು.
"ವಿಜಯಪುರದಿಂದ ಬಾಗಲಕೋಟೆವರೆಗೆ ಕೆ.ಎಸ್. ಈಶ್ವರಪ್ಪ ಜೊತೆ ಪ್ರಯಾಣ ಮಾಡಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ವಿ, ಮುಂಬರುವ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಬಗ್ಗೆ, ಹೆಚ್ಚಿನ ಸಂಖ್ಯೆಯಲ್ಲಿ ಸೀಟ್ ತರುವ ಬಗ್ಗೆ ಚರ್ಚೆ ಮಾಡಿದ್ವಿ. ಭ್ರಷ್ಟರಿಗೆ, ಹೊಗಳು ಭಟ್ಟರನ್ನು ಇಟ್ಟುಕೊಂಡರೆ ಮುಂದಿನ ಚುನಾವಣೆಯಲ್ಲಿ ಕಷ್ಟ ಆಗುತ್ತೆ ಅಂತಾ ಮಾತನಾಡದ್ದಿವಿ,'' ಎಂದು ಹೇಳಿದರು.
"ನಿನ್ನ ಹಠ ಸಾಧಿಸಿದ್ದಿಯಾ, ಇನ್ನು ಮುಂದೆ ಎಲ್ಲರೂ ಪಕ್ಷ ಕಟ್ಟೋಣ. ಬಹಿರಂಗವಾಗಿ ಹೇಳಿಕೆ ಕೊಡಬೇಡ ಅಂತ ನನಗೆ ಕೆಲವರು ಸಲಹೆ ನೀಡಿದರು. ಅವರು ಹಿರಿಯರು ಅವರ ಮಾತಿಗೆ ನಾನು ಒಪ್ಪಿದ್ದೇನೆ. ಅಲ್ಲದೇ ಯಡಿಯೂರಪ್ಪನವರು ಗೌರವಯುತವಾಗಿ ನಿರ್ಗಮನ ಆಗಿದ್ದಾರೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪರಿಗೆ ಬಹಳ ಗೌರವ ಕೊಟ್ಟು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾ ಟ್ವೀಟ್ ಮಾಡಿ ಶುಭ ಕೋರಿದ್ದಾರೆ,'' ಎಂದರು.
"ಯಡಿಯೂರಪ್ಪನವರೇ.. ನೀವು ಸಾಕಷ್ಟು ಕಷ್ಟ ಪಟ್ಟಿದ್ದೀರಿ, ಸೈಕಲ್ ತುಳಿದು ಪಕ್ಷ ಕಟ್ಟಿದ್ದೀರಿ, ಈಗ ನೀವು ಸ್ವಂತ ಹೆಲಿಕಾಪ್ಟರ್ನಲ್ಲಿ ತಿರುಗಾಡುವಂತಹ ಶಕ್ತಿ ಬಿಜೆಪಿಯಿಂದ ಸಿಕ್ಕಿದೆ. ಬಿಜೆಪಿ ಋಣ ಬಹಳ ಇದ್ದು, ಅದಕ್ಕೆ ನಿಮ್ಮ ನಿವೃತ್ತಿ ಜೀವನಕ್ಕೆ ಒಳ್ಳೆಯದಾಗಲಿ ಅಂತ ಸಂದೇಶದೊಂದಿಗೆ ಸ್ಪಷ್ಟವಾದ ಸಂಕೇತ ಕೊಟ್ಟಿದೆ,'' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟರು.
"ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಆಯ್ಕೆ ಯಡ್ಡಿಯೂರಪ್ಪನವರದು. ನೀವು ಬೊಮ್ಮಾಯಿಗೂ ಬೆಂಬಲ ಕೊಡಲಿಲ್ಲ ಅಂದರೆ, ಇವರನ್ನು ಯಾರೂ ಸಹಿಸುವುದಿಲ್ಲ. ಬಿ.ಎಸ್. ಯಡಿಯೂರಪ್ಪ ಮುಂದೆ ತಮ್ಮ ಮಗ ವಿಜಯೇಂದ್ರನನ್ನೇ ಉತ್ತರಾಧಿಕಾರಿಯಾಗಿ ಮಾಡಲು ಬೊಮ್ಮಾಯಿರನ್ನು ತಾತ್ಕಾಲಿಕವಾಗಿ ತಯಾರಿ ಮಾಡಿದ್ದಾರೆ ಎಂಬ ಸಂಶಯ ಬರಲು ಪ್ರಾರಂಭವಾಗುತ್ತದೆ,'' ಎಂದು ಕುಟುಕಿದರು.
Recommended Video
ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಏನಾದರೂ ತೊಂದರೆ ಆದರೆ, ನಾವು ಬೆಂಬಲ ಕೊಡುತ್ತೇವೆ ಎಂದಿದ್ದಾರೆ. ಯಡ್ಡಿಯೂರಪ್ಪನವರ ಜೊತೆ 10- 20 ಜನರು ಹೋಗುತ್ತೀವಿ ಎಂದರೆ, ಜೆಡಿಎಸ್ ಬೆಂಬಲ ಇದೆ. ಇದು ಕೇಂದ್ರದ ಸೂಚನೆಯ ಮೇರೆಗೆ ಸಿಎಂ ಬೊಮ್ಮಾಯಿ ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿ ಮಾಡಿದ್ದಾರೆ ಅಂತ ನನಗೆ ಅನಿಸುತ್ತದೆ,'' ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿಯ ಹೇಳಿಕೆ ನೀಡಿದರು.