ನಾನು ಸಚಿವ ಸ್ಥಾನದ ಆಕಾಂಕ್ಷಿಯೇ ಅಲ್ಲ ಎಂದಿದ್ದೇಕೆ ಆನಂದ್ ಸಿಂಗ್?
ಬಳ್ಳಾರಿ, ಡಿಸೆಂಬರ್.25: ರಾಜ್ಯದಲ್ಲಿ ಉಪ ಚುನಾವಣೆ ಮುಗಿದು ಫಲಿತಾಂಶ ಬಂದಿದ್ದಾಗಿದೆ. ಬಿಜೆಪಿ ಸರ್ಕಾರವೂ ಸೇಫ್ ಆಗಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಆಗಮಿಸಿದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ಪಕ್ಕಾ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಹೇಳಿದ್ದಾರೆ.
ಸಿಎಂ ಹೇಳಿಕೆ ಬಳಿಕವೂ ಇಲ್ಲೊಬ್ಬ ಶಾಸಕರು ತಾವು ಸಚಿವ ಸ್ಥಾನದ ಆಕಾಂಕ್ಷಿಯೇ ಅಲ್ಲ ಎಂದು ಹೇಳಿದ್ದಾರೆ. ನನಗೆ ಸಚಿವ ಸ್ಥಾನದ ಮೇಲೆ ಯಾವುದೇ ಆಸೆಯಿಲ್ಲ. ಇಂಥದ್ದೇ ಖಾತೆ, ಅಂಥದ್ದೆ ಖಾತೆ ನೀಡುವಂತೆ ಒತ್ತಾಯವನ್ನೂ ಮಾಡುವುದಿಲ್ಲ ಎಂದು ವಿಜಯನಗರ ಶಾಸಕ ಆನಂದ್ ಸಿಂಗ್ ತಿಳಿಸಿದ್ದಾರೆ.
'ಅರ್ಹ'ರಾಗಿ ಬದಲಾದ ನೂತನ ಶಾಸಕರ ಪ್ರಮಾಣ ವಚನ ಭಾನುವಾರ
ಹರಪನಹಳ್ಳಿಯಲ್ಲಿ ಮಾತನಾಡಿರುವ ಶಾಸಕ ಆನಂದ್ ಸಿಂಗ್ ತಮಗೆ ಯಾವುದೇ ಸಚಿವ ಸ್ಥಾನದ ಮೇಲೆ ಆಸೆಯಿಲ್ಲ ಎಂದು ಹೇಳಿದರು. ತಮ್ಮ ಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಉದ್ದೇಶವಾಗಿದೆ. ಅದನ್ನು ಹೊರತುಪಡಿಸಿ ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ಸಲ್ಲಿಸಲು ಕಾರಣಕೊಟ್ಟ ಶಾಸಕ:
ವಿಜಯನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ನೆರವು ಸಿಕ್ಕರಷ್ಟೇ ಸಾಕು. ನನಗೆ ಮತ್ಯಾವ ಸಚಿವ ಸ್ಥಾನವೂ ಬೇಕಿಲ್ಲ ಎಂದು ಶಾಸಕ ಆನಂದ್ ಸಿಂಗ್ ಹೇಳಿದರು. ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಾಯಕರು ತಲೆ ಕೆಡಿಸಿಕೊಳ್ಳಲಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರಿಯಾದ ರೀತಿಯಲ್ಲಿ ಅನುದಾನವನ್ನು ನೀಡುತ್ತಿರಲಿಲ್ಲ. ಹೀಗಾಗಿ ನಾನು ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿದೆ ಎಂದು ಆನಂದ್ ಸಿಂಗ್ ಸ್ಪಷ್ಟನೆ ನೀಡಿದರು.