ನನಗೂ ಸಚಿವ ಸ್ಥಾನದ ಆಫರ್ ಬಂದಿತ್ತು: ಕಾಂಗ್ರೆಸ್ ಶಾಸಕ ಸ್ಫೋಟಕ ಹೇಳಿಕೆ
ವಿಜಯನಗರ, ಆಗಸ್ಟ್ 17: ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ 17 ಜನ ಶಾಸಕರು ರಾಜೀನಾಮೆ ನೀಡಿ ಸರ್ಕಾರ ಉರುಳಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ವೇಳೆ ಇನ್ನೊಬ್ಬ ಕಾಂಗ್ರೆಸ್ ಶಾಸಕನಿಗೂ ರಾಜೀನಾಮೆ ನೀಡುವಂತೆ ಕರೆ ಹೋಗಿತ್ತು ಎಂದು ತಿಳಿದುಬಂದಿದೆ.
ಎರಡು ವರ್ಷಗಳ ಹಿಂದೆ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನದ ನಂತರ ಬಿಜೆಪಿ ಅಲ್ಪ ಬಹುಮತದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಿತ್ತು. ನಂತರ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 2 ಮತ್ತು ಒಂದು ಪಕ್ಷೇತರ ಅಭ್ಯರ್ಥಿ ಜಯಿಸಿದ್ದರು. ಬಿಜೆಪಿ ಪಕ್ಷ ಪೂರ್ಣ ಬಹುಮತ ಪಡೆದು ಸರ್ಕಾರ ಇನ್ನಷ್ಟು ಸುಭದ್ರವಾಯಿತು.
ಕಾಂಗ್ರೆಸ್- ಜೆಡಿಎಸ್ ತೊರೆದು ಬಂದು ಉಪಚುನಾವಣೆಯಲ್ಲಿ ಜಯಿಸಿದ ಬಹುತೇಕ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ನಂತರ ಇತ್ತೀಚಿಗೆ ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ.
ಇದೆಲ್ಲದರ ನಡುವೆ ಕಾಂಗ್ರೆಸ್ ಶಾಸಕರೊಬ್ಬರು ಈಗ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. "ಬಿಜೆಪಿಗೆ ಬಂದರೆ ಸಚಿವ ಸ್ಥಾನ ನೀಡುವುದಾಗಿ ನನಗೂ ಆಫರ್ ಬಂದಿತ್ತು," ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ಭೀಮಾನಾಯ್ಕ್ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್. ಭೀಮಾನಾಯ್ಕ್, "ಮೈತ್ರಿ ಸರ್ಕಾರ ಮುಗಿದ ಮೇಲೆ ಬಿಜೆಪಿ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ನೀನು ನಮ್ಮ ಬಿಜೆಪಿ ಪಕ್ಷಕ್ಕೆ ಬಂದರೆ ನಿನಗೂ ಸಚಿವ ಖಾತೆ ಕೊಡುವುದಾಗಿ ಹೇಳಿದ್ದರು."
"ಒಂದು ವೇಳೆ ನಾನೇನಾದರೂ ಬಿಜೆಪಿಗೆ ಹೋಗಿದ್ದರೆ ಬಿ.ಎಸ್. ಯಡಿಯೂರಪ್ಪನವರ ಸರ್ಕಾರದಲ್ಲಿ ಸಚಿವನಾಗಿರುತ್ತಿದ್ದೆ, ಆದರೆ ನಾನು ಮೊದಲ ಶಾಸಕನಾಗಿ ಆಯ್ಕೆಯಾಗಲು ಎರಡನೇ ಬಾರಿಗೆ ಕಾಂಗ್ರೆಸ್ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಟಿಕೆಟ್ ಕೊಡಿಸುವಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ತರ ಪಾತ್ರ ವಹಿಸಿದ್ದರು."
"ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನನ್ನ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ಕೊಟ್ಟಿದ್ದಾರೆ. ಹಾಗಾಗಿ ನಾನು ಸಿದ್ದರಾಮಯ್ಯನವರಿಗೆ ಮೋಸ ಮಾಡಿ ಹೋಗುವುದಕ್ಕೆ ಮನಸ್ಸಾಗಲಿಲ್ಲ, ನಮಗೆ ಸಿದ್ದರಾಮಯ್ಯನವರೇ ನಾಯಕರು," ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ಭೀಮಾನಾಯ್ಕ್ ತಿಳಿಸಿದರು.
"ಬಿಜೆಪಿ ಸರ್ಕಾರದ ರಚನೆ ವೇಳೆ ಸಾಕಷ್ಟು ಬಾರಿ ನನಗೆ ಕರೆ ಬಂದಿದ್ದವು. ಆದರೆ ನನ್ನ ಮೇಲೆ ಸಿದ್ದರಾಮಯ್ಯನವರು ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. ಹಾಗಾಗಿ ನಾನು ಬಿಜೆಪಿ ಪಕ್ಷಕ್ಕೆ ಹೋಗಲಿಲ್ಲ," ಎಂದರು.
"2013- 2018ರವರೆಗೆ ಜೆಡಿಎಸ್ ಶಾಸಕನಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಕೇಳಿದಷ್ಟು ಅನುದಾನ ಕೊಟ್ಟಿದ್ದರು. ನನ್ನನ್ನು ಕಾಂಗ್ರೆಸ್ಗೆ ಕರೆದುಕೊಂಡು ಬಂದಿದ್ದೇ ಸಿದ್ದರಾಮಯ್ಯ. ಹಾಗಾಗಿ ಬೇರೆಯವರು ಪಕ್ಷ ತೊರೆದರೂ ನನಗೆ ಹೋಗುವ ಮನಸ್ಸಾಗಲಿಲ್ಲ."
"ಬಿಜೆಪಿ ನೀಡಿರುವ ಆಫರ್ ವಿಷಯವಾಗಿ ಮನೆಯಲ್ಲಿ ಕುಟುಂಬದವರ ಜತೆ ಸಾಕಷ್ಟು ಬಾರಿ ಚರ್ಚಿಸಿದ್ದೆ, ಆದರೆ ಮನೇಲಿ ಬಿಜೆಪಿಗೆ ಹೋಗುವುದು ಬೇಡ ಎಂದಿದ್ದರು, ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲೇ ಉಳಿದುಕೊಂಡೆ," ಎಂದು ಶಾಸಕ ಎಸ್. ಭೀಮಾನಾಯ್ಕ್ ಮಾಹಿತಿ ನೀಡಿದರು.