ಸರಿಯಾದ ಊಟ ಕೊಡದಿದ್ದಕ್ಕೆ ಪ್ರತಿಭಟಿಸಿದ ಹೊಸೂರು ಶಾಲೆ ಮಕ್ಕಳು
ಬಳ್ಳಾರಿ, ಫೆಬ್ರವರಿ 05: ಸರ್ಕಾರವು ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದೆ. ಆದರೆ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸರಿಯಾದ ಊಟ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಮಕ್ಕಳು ಪ್ರತಿಭಟನೆ ಮಾಡಿದ್ದಾರೆ.
ಹೌದು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಸರಿಯಾದ ಊಟ ಕೊಡದ ಕಾರಣ, ಮಕ್ಕಳು ರೋಡಿಗೆ ಇಳಿದು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ.
ಕಳೆದ ಮೂರು ದಿನಗಳಿಂದ ಇಲ್ಲಿನ ಮಕ್ಕಳು ತರಗತಿಗಳಿಗೆ ಹಾಜರಾಗದೇ ಶಾಲಾ ಆವರಣದಲ್ಲಿ ಪ್ರತಿಭಟನೆ ಮಾಡುತಿದ್ದಾರೆ. ಸರಿಯಾದ ರೀತಿಯಲ್ಲಿ ಊಟ ಕೊಡಲ್ಲಾ, ಶಾಲೆಯ ಕೆಲ ಶಿಕ್ಷಕರು ಮನೆಯಿಂದ ಊಟ ಮಾಡಿ ಬಂದು ಶಾಲೆಯಲ್ಲಿ ಮಲಗುತ್ತಾರೆ ಎಂದು ಆರೋಪಿಸಿದ್ದಾರೆ.
ಇನ್ನು ಕಳೆದ ಮೂರು ದಿನಗಳಿಂದ ಮಕ್ಕಳು ಪ್ರತಿಭಟನೆ ಮಾಡಿದರೂ, ಇತ್ತ ಯಾವುದೇ ಶಿಕ್ಷಣ ಇಲಾಖೆ ಅಧಿಕಾರಿಗಳು ಬಂದಿಲ್ಲ ಎಂಬುದು ಮಕ್ಕಳ ಆರೋಪ. ಇನ್ನು ಶಾಲೆ ಸಂಪೂರ್ಣ ಹಾಳಾಗಿದ್ದು, ಈ ಮಕ್ಕಳು ಶಾಲೆಯ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಲಾಗಿದೆ.