ಹೊಸಪೇಟೆ ಅಪಘಾತ ಪ್ರಕರಣ: ರಾಹುಲ್ ಬಂಧನ
ಬಳ್ಳಾರಿ, ಫೆಬ್ರವರಿ 15: ರಾಜ್ಯದ ಗಮನಸೆಳೆದಿರುವ ಹೊಸಪೇಟೆ ಮರಿಯಮ್ಮನಹಳ್ಳಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಎಂಬಾತನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆರ್.ಅಶೋಕ್ ಪುತ್ರ ಶರತ್ ಅಪಘಾತವಾದ ಕಾರಿನಲ್ಲಿದ್ದರು ಎಂಬ ಅನುಮಾನ ಇರುವ ಕಾರಣ ಫೆಬ್ರವರಿ 10 ರಂದು ಹೊಸಪೇಟೆ ಬಳಿಯ ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ ಕಾರು ಅಪಘಾತ ರಾಜ್ಯದಾದ್ಯಂತ ಗಮನ ಸೆಳೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಒಬ್ಬ (ಸಚಿನ್) ಮತ್ತು ದಾರಿ ಬದಿ ನಿಂತಿದ್ದ ರವಿನಾಯ್ಕ ಮರಣಕ್ಕೀಡಾಗಿದ್ದಾರೆ.
ಘಟನೆ ಬಗ್ಗೆ ದಾಖಲಾಗಿರುವ ಎಫ್ಐಆರ್ ನಲ್ಲಿ ರಾಹುಲ್ ಎಂಬಾತ ಕಾರು ಚಲಾಯಿಸಿದ್ದ ಎಂದು ನಮೂದಾಗಿದ್ದು, ಅದರನ್ವಯ ಬಳ್ಳಾರಿಯ ಸಂಡೂರು ಸಿಪಿಐ ಶೇಖರಪ್ಪ ನೇತೃತ್ವದ ತಂಡ ಬೆಂಗಳೂರಿಗೆ ತೆರಳಿ ರಾಹುಲ್ ಅನ್ನು ಇಂದು ಬಂಧಿಸಿ ಹೊಸಪೇಟೆಗೆ ಕರೆತಂದಿದ್ದಾರೆ.
ಮಧ್ಯಾಹ್ನ ಆರೋಪಿ ರಾಹುಲ್ ಅನ್ನು ಹೊಸಪೇಟೆಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಯು ನ್ಯಾಯಾಲಯದಲ್ಲಿ ಜಾಮೀನು ಪಡೆದು ಬೆಂಗಳೂರಿಗೆ ವಾಪಸ್ಸಾಗಿದ್ದಾನೆ.
ಘಟನೆ ನಡೆದಾಗ ಆರ್.ಅಶೋಕ್ ಪುತ್ರ ಶರತ್ ಅವರು ಕಾರಿನಲ್ಲಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಇದನ್ನು ಅಲ್ಲಗಳೆದಿದ್ದು, ಕಾರಿನಲ್ಲಿ ಐದಲ್ಲ ಬದಲಿಗೆ ನಾಲ್ಕು ಜನ ಮಾತ್ರವೇ ಇದ್ದು, ರಾಹುಲ್ ಎಂಬಾತ ಅಜಾರೂಗತೆಯಿಂದ ಕಾರು ಓಡಿಸಿದ ಪರಿಣಾಮ ಅಪಘಾತ ಆಗಿದೆ ಎಂದು ಎಫ್ಐಆರ್ ದಾಖಲಿಸಿದ್ದಾರೆ.
ಆದರೆ ಕೆಲವು ಸ್ಥಳೀಯರು ಮಾಧ್ಯಮಗಳಿಗೆ ಹೇಳಿದ ಪ್ರಕಾರ ಆರ್.ಅಶೋಕ್ ಮಗ ಶರತ್ ಕಾರಿನಲ್ಲಿದ್ದರು. ಅಪಘಾತವಾದ ನಂತರ ಅವರು ಅಲ್ಲಿಂದ ಬೇರೆ ಕಾರಿನಲ್ಲಿ ತೆರಳಿದರು ಎಂದಿದ್ದಾರೆ. ಅದಕ್ಕೆ ಪೂರಕವೆಂಬಂತೆ ಪ್ರಕರಣ ಇಷ್ಟು ಸದ್ದು ಮಾಡುತ್ತಿದ್ದರೂ ಶರತ್ ಎಲ್ಲೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ.