ಕೊರೊನಾ ಕಾರಣ ಉಜ್ಜೈನಿಯ ಐತಿಹಾಸಿಕ ಜಾತ್ರೆ ರದ್ದು
ಬಳ್ಳಾರಿ, ಏಪ್ರಿಲ್ 27: ಕೊರೊನಾ ಭೀತಿಯಿಂದಾಗಿ ಐತಿಹಾಸಿಕ ಉಜ್ಜೈನಿ ಮರುಳಸಿದ್ದೇಶ್ವರ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಕೊಟ್ಟರು ತಾಲೂಕಿನ ಉಜ್ಜೈನಿ ಮರುಳಸಿದ್ದೇಶ್ವರ ದೇಗುಲದಲ್ಲಿ ಪ್ರತಿ ವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜಾತ್ರೆ ನಡೆಯುತ್ತಿತ್ತು. ಮರುಳ ಸಿದ್ದೇಶ್ವರ ದೇಗುಲದ ಶಿಖರಕ್ಕೆ ವಿಶೇಷವಾದ ತೈಲಾಭಿಷೇಕ ನಡೆಯುತ್ತಿತ್ತು.
ಆದರೆ ಈ ಬಾರಿ ಕೊರೊನಾದಿಂದಾಗಿ ನಾಳೆ ನಿಗದಿಯಾಗಿದ್ದ ತೈಲಾಭಿಷೇಕ ಮತ್ತು ರಥೋತ್ಸವವನ್ನು ರದ್ದುಗೊಳಿಸಿರುವುದಾಗಿ ಉಜ್ಜೈನಿ ಪೀಠದ ಜಗದ್ಗುರುಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಪ್ರಸಿದ್ದ ಮಠದ ಜಾತ್ರೆ ರದ್ದು; ಕಣ್ಣೀರಿಟ್ಟ ಸ್ವಾಮೀಜಿ
"ಯಾರು ಕೂಡ ಉಜ್ಜೈನಿಗೆ ಬರಬೇಡಿ. ಕೊರೊನಾ ಹಿನ್ನೆಲೆಯಲ್ಲಿ ರಥೋತ್ಸವ, ತೈಲಾಭಿಷೇಕ ಎಲ್ಲವನ್ನೂ ರದ್ದು ಗೊಳಿಸಲಾಗಿದೆ. ಈ ವರ್ಷ ಭಕ್ತರು ಸಹಕರಿಸಿ" ಎಂದು ಶ್ರೀಗಳು ಮನವಿ ಮಾಡಿದ್ದಾರೆ. ಬಹು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಗೆ ಜನರು ಬರುವುದರಿಂದ ಲಾಕ್ ಡೌನ್ ಉಲ್ಲಂಘನೆಯಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.