ಬಳ್ಳಾರಿ: ಸತತ ಮಳೆಗೆ ಧರೆಗುರುಳಿದ ಐತಿಹಾಸಿಕ ಹಂಪಿಯ ಕಂಬಗಳು
ಬಳ್ಳಾರಿ, ಸೆಪ್ಟೆಂಬರ್ 29: ಕಳೆದ ಒಂದು ವಾರದಿಂದ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಬಳಿ ಎರಡು ಕಂಬಗಳು ಮಳೆಯಿಂದ ಧರೆಗುರುಳಿವೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಹಾಗೂ ಸಂಡೂರು ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಮಳೆಯಿಂದ ಐತಿಹಾಸಿಕ ಹಂಪಿಯ ದೇವಸ್ಥಾನದ ಬಳಿ ಮಣ್ಣು ಸಡಿಲಗೊಂಡು ಕಂಬಗಳು ನೆಲಕ್ಕೆ ಬಿದ್ದಿವೆ ಎನ್ನಲಾಗಿದೆ.
ಬಳ್ಳಾರಿಯಲ್ಲಿ ವಿರಾಮ ಕೊಟ್ಟ ಮಳೆರಾಯ; ಸಹಜ ಸ್ಥಿತಿಯತ್ತ ಬದುಕು
ಇನ್ನು ಒಂದೇ ವರ್ಷದಲ್ಲಿ ಎರಡನೇ ಸಾರಿ ಪ್ರವಾಹದ ನೀರಿನಲ್ಲಿ ಹಂಪಿಯ ಬಹುತೇಕ ಸ್ಮಾರಕಗಳು ಮುಳುಗಡೆಯಾಗಿದ್ದು, ಕೆಲ ಸ್ಮಾರಕಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿವೆ. ಈ ಕುರಿತು ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯ ಹಂಪಿ ವೃತ್ತದ ಉಪಾಧೀಕ್ಷಕ ಕಾಳಿಮುತ್ತು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸತತ ಮಳೆಯಿಂದ ಕಂಬಗಳು ಬಿದ್ದಿವೆ
ಸತತ ಮಳೆಯಿಂದ ಕಂಬಗಳು ಬಿದ್ದಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದು, ಈ ಕುರಿತು ಪರಿಶೀಸಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಬಿಡದೇ ಸುರಿಯುತ್ತಿದ್ದ ಮಳೆ ಎರಡು ದಿನಗಳಿಂದ ಬಿಡುವು ನೀಡಿದೆ. ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದ ಮಳೆ ತಣ್ಣಗಾಗಿದ್ದು, ಈಗ ಬಳ್ಳಾರಿ ಜಿಲ್ಲೆಯ ಜನರು ಕೊಂಚ ನಿರಾಳರಾಗಿದ್ದಾರೆ. ಇನ್ನು ತುಂಗಭದ್ರಾ ಜಲಾಶಯದ ಒಳಹರಿವು ಹಾಗೂ ಹೊರಹರಿವು ಪ್ರಮಾಣವೂ ತಗ್ಗಿದ್ದು, ಮುಳುಗಡೆಯಾಗಿದ್ದ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ.
ಹಲವು ಸ್ಮಾರಕಗಳು ಜಲಾವೃತಗೊಂಡಿದ್ದವು
ಹಂಪಿಯ ನದಿ ಪಾತ್ರದಲ್ಲಿ ಮುಳುಗಡೆಯಾಗಿದ್ದ ಸ್ಮಾರಕಗಳು ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಮೇಲೆ ಕಾಣತೊಡಗಿವೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಮ ಹಂಪಿಯ ಹಲವು ಸ್ಮಾರಕಗಳು ಜಲಾವೃತಗೊಂಡಿದ್ದವು.
ಪುರಂದರ ದಾಸರ ಮಂಟಪ, ಸಾಲುಮಂಟಪ, ಧಾರ್ಮಿಕ ವಿಧಿಗಳನ್ನು ಮಾಡುವ ಮಂಟಪಗಳು ಸೇರಿದಂತೆ ಹಲವು ಸ್ಮಾರಕಗಳು ಮುಳುಗಡೆಯಾಗಿದ್ದವು. ಇದೀಗ ನೀರಿನ ಪ್ರಮಾಣ ತಗ್ಗಿದ್ದು, ಎಲ್ಲವೂ ಸಹಜ ಸ್ಥಿತಿಯತ್ತ ಮರಳುತ್ತಿವೆ.
ಹೊಲಗದ್ದೆಗಳು ಜಲಾವೃತವಾಗಿದ್ದವು
ಬಳ್ಳಾರಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದ್ದು, ಹಲವು ಮನೆಗಳು, ಹೊಲಗದ್ದೆಗಳು ಜಲಾವೃತವಾಗಿದ್ದವು. ಮಳೆಯಿಂದ ಜಿಲ್ಲೆಯಲ್ಲಿ ಅಂದಾಜು 353.00 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಬಳ್ಳಾರಿ ಹಾಗೂ ಸಂಡೂರು ತಾಲೂಕಿನಲ್ಲಿ ಹೆಚ್ಚು ಪ್ರಮಾಣದ ಬೆಳೆನಷ್ಟ ಉಂಟಾಗಿದೆ ಎಂದು ಅಂದಾಜಿಸಿರುವುದಾಗಿ ಎಂದು ಕೃಷಿ ಇಲಾಖೆ ತಿಳಿಸಿದೆ. ಬಳ್ಳಾರಿ ತಾಲೂಕು ಶೇ.89ರಷ್ಟು ಬಿತ್ತನೆ ಗುರಿಯಲ್ಲಿ, ಶೇ.72.86ರಷ್ಟು ಪ್ರದೇಶ ವ್ಯಾಪ್ತಿಯಲ್ಲಿ ಬೆಳೆನಷ್ಟ ಉಂಟಾಗಿರುವುದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಸಂಡೂರು ತಾಲೂಕಿನಲ್ಲಿ ಶೇ.99.3ರಷ್ಟು ಬಿತ್ತನೆ ಗುರಿಯಲ್ಲಿ ಶೇ.40.72 ರಷ್ಟು ಪ್ರದೇಶದಲ್ಲಿ ಬೆಳೆನಷ್ಟ ಉಂಟಾಗಿರಬಹುದೆಂದು ಕೃಷಿ ಇಲಾಖೆಯು ಅಂದಾಜಿಸಿದೆ.
ತುಂಗಭದ್ರಾ ನದಿಯ ನೀರಿನ ಮಟ್ಟವೂ ಹೆಚ್ಚಾಗಿತ್ತು
ಹೂವಿನ ಹಡಗಲಿ ಮದಗಲಟ್ಟಿ ಸಮೀಪದ ತುಂಗಭದ್ರಾ ನದಿಗೆ ಕಟ್ಟಲಾಗಿರುವ ಸೇತುವೆ ವಾರದ ಹಿಂದೆ ಏಕಾಏಕಿ ಕುಸಿದಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದ ಪರಿಣಾಮ ತುಂಗಭದ್ರಾ ನದಿಯ ನೀರಿನ ಮಟ್ಟವೂ ಹೆಚ್ಚಾಗಿತ್ತು. ಈ ನಡುವೆಯೇ ಇಂದು ಬೆಳಿಗ್ಗೆ ಬ್ರಿಡ್ಜ್ ಕುಸಿದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಸೇತುವೆ ಮೇಲೆ ಪ್ರಯಾಣಿಸುತ್ತಿದ್ದ ಲಾರಿ ಮತ್ತು ಕಾರು ಜಖಂಗೊಂಡಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಘಟನೆಯಿಂದಾಗಿ ಈ ಮಾರ್ಗದ ಸಂಚಾರದಲ್ಲಿ ವ್ಯತ್ಯಯವಾಗಿತ್ತು.