ವಿಜಯನಗರ ಜಿಲ್ಲೆಯಲ್ಲಿ ಭಾರೀ ಮಳೆ: ಉಕ್ಕಿ ಹರಿದ ಹಳ್ಳಗಳು
ವಿಜಯನಗರ, ಜುಲೈ 19: ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಸುಮಾರು 5 ಗಂಟೆಗೂ ಅಧಿಕ ಸುರಿದ ಮಳೆಯಿಂದಾಗಿ ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ವೇಳೆ ಮಾದಿಹಳ್ಳಿ ಮತ್ತು ಬೂದಿಹಾಳ್ ಬಳಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟುವಾಗ ಬೈಕ್ ಜತೆಗೆ ನೀರು ಹರಿಯುವ ರಭಸಕ್ಕೆ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ.
ಹಳ್ಳದಲ್ಲಿ ಕೊಚ್ಚಿ ಹೋಗುತ್ತಿರುವ ಸಂದರ್ಭದಲ್ಲಿ ಗಿಡ- ಗಂಟೆಗಳನ್ನು ಹಿಡಿದುಕೊಂಡು ನಿಂತಿದ್ದ ಮಾದಿಹಳ್ಳಿ ಗ್ರಾಮದ ಸಂತೋಷನನ್ನು ತಕ್ಷಣ ಗ್ರಾಮಸ್ಥರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಹರಪನಹಳ್ಳಿ ತಾಲೂಕಿನ ಫಣಿಯಾಪುರ ಗ್ರಾಮದ ಕೆಂಚಪ್ಪ ಎನ್ನುವರಿಗೆ ಸೇರಿದ 9 ಮೇಕೆಗಳು ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿವೆ. ಹರಪನಹಳ್ಳಿ ತಾಲೂಕಿನದ್ಯಾಂತ ಭಾನುವಾರ ಭಾರೀ ಮಳೆಯಿಂದಾಗಿ ನೂರಾರು ಎಕರೆಗಳು ಬೆಳೆ ನಾಶವಾಗಿವೆ. ಬೇವಿನಹಳ್ಳಿ ದೊಡ್ಡ ತಾಂಡದ ಕೃಷ್ಣನಾಯ್ಕ್ರವರ ಅಡಿಕೆ ಬೆಳೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಮೂರು ಎಕರೆ ಅಡಿಕೆ ಗಿಡಗಳು ಮತ್ತು ಚೆಂಡು ಹೂವು ಸೇರಿದಂತೆ ಸಂಪೂರ್ಣ ಜಲಾವೃಗೊಂಡಿವೆ.
ಹರಪನಹಳ್ಳಿ ತಾಲೂಕಿನ ಚಟ್ನಿಹಳ್ಳಿಯ ಕೆರೆಯು ಕೋಡಿ ಬಿದ್ದಿದ್ದು, ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಚರಂಡಿಗಳು ಬ್ಲಾಕ್ ಆಗಿ ಕೊಟ್ಟೂರಿನ ಬಸ್ ನಿಲ್ದಾಣವೆಲ್ಲ ಸಂಪೂರ್ಣ ಜಲಾವೃಗೊಂಡಿತ್ತು. ಈ ವೇಳೆ ಬಸ್ ಪ್ರಯಾಣಿಕರು ಮತ್ತು ನಿರ್ವಾಹಕರು ಪರದಾಡಿದರು.
ಒಟ್ಟಾರೆ ಭಾನುವಾರ ಸುರಿದ ಮಳೆಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಮತ್ತು ಕೊಟ್ಟೂರು ತಾಲೂಕುಗಳಲ್ಲಿ ನೂರಾರು ಎಕರೆ ಬೆಳೆಗಳಿಗೆ ಅಪಾರ ಹಾನಿಯಾಗಿದೆ.