ಭಾರೀ ಮಳೆಗೆ ತತ್ತರಿಸಿದ ಬಳ್ಳಾರಿ: ಮನೆಗಳಿಗೇ ಹರಿದುಬಂದ ನೀರು
ಬಳ್ಳಾರಿ, ಸೆಪ್ಟೆಂಬರ್ 15: ಕಳೆದ ಮೂರ್ನಾಲ್ಕು ದಿನಗಳಿಂದಲೂ ಸುರಿಯುತ್ತಿರುವ ವಿಪರೀತ ಮಳೆಯಿಂದ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ರೇಣುಕಾನಗರ ಸೇರಿದಂತೆ ಇನ್ನಿತರೆ ಕಾಲೊನಿಯ ಮನೆಗಳಿಗೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಮಹಾನಗರದ ನಾನಾ ಕಾಲೊನಿಯ ನಿವಾಸಿಗಳು ಮಳೆಯ ನೀರು ಮನೆಗಳಿಗೆ ನುಗ್ಗಿ ಪರದಾಡುತ್ತಿದ್ದಾರೆ. ಏಕಾಏಕಿ ಮಳೆಯ ನೀರು ಮನೆಗಳಿಗೆ ನುಗ್ಗಿರುವುದರಿಂದ ಮನೆಯೊಳಗಿನ ಸಾಮಾನು - ಸರಂಜಾಮು ಒದ್ದೆಯಾಗಿವೆ. ದಿನಸಿಗಳಿಗೂ ನೀರು ತಾಕಿ ಆಹಾರಕ್ಕೂ ಹೆಣಗಾಡುವಂತಾಗಿದೆ. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ. ತುಷಾರಮಣಿ ಅವರನ್ನು ಭೇಟಿಯಾದ ರೇಣುಕಾನಗರ ನಿವಾಸಿಗಳು ತಮಗಾದ ಸಮಸ್ಯೆ ಹೇಳಿಕೊಂಡಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಮಳೆ; ಸೆ. 19ರ ತನಕ ಯೆಲ್ಲೊ ಅಲರ್ಟ್
ಆದರೆ ನಿಮ್ಮ ಮನೆಗಳು ಇರುವ ಪ್ರದೇಶ ಬುಡಾದಿಂದ ಅನುಮತಿ ಪಡೆದು ನಿರ್ಮಾಣಗೊಂಡ ಬಡಾವಣೆಗಳ ಪೈಕಿ ಒಂದರಲ್ಲಿ ಇರಬೇಕು. ಮನೆ ಕಂದಾಯ, ನೀರಿನ ಕರ ಕಟ್ಟಿರಬೇಕು. ಹಾಗಿದ್ದರೆ ಮಾತ್ರ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದು ಆಯುಕ್ತೆ ತುಷಾರಮಣಿ ಅವರು ನಿವಾಸಿಗಳಿಗೆ ಹೇಳಿ ಕಳಿಸಿದ್ದಾರೆ.
ಇನ್ನು ಮಳೆಯಿಂದಾಗಿ ಜಿಲ್ಲೆಯಾದ್ಯಂತ ನೂರಾರು ಕಚ್ಚಾ ಮನೆಗಳು ಜಖಂಗೊಂಡಿದೆ. ಸಂಡೂರು ತಾಲೂಕಿನ ನಾನಾ ಗ್ರಾಮಗಳಲ್ಲಿನ ಅಂದಾಜು 38 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸಂಡೂರು ಹೋಬಳಿಯ ತಾರಾನಗರದಲ್ಲಿ 2, ತೋರಣಗಲ್ಲು ಹೋಬಳಿಯ ವಿಠಲಾಪುರದಲ್ಲಿ 7, ರಾಮಸಾಗರ ಹಾಗೂ ಅಂತಾಪುರದಲ್ಲಿ 3, ರಾಜಾಪುರ, ನಾಗಲಾಪುರ ಹಾಗೂ ಮೆಟ್ರಿಕಿಯಲ್ಲಿ ತಲಾ 2, ಬನ್ನಿಹಟ್ಟಿ, ಸುಲ್ತಾನಪುರದಲ್ಲಿ ತಲಾ 1 ಹಾಗೂ ಚೋರನೂರು ಹೋಬಳಿಯ ಸಿ.ಕೆ.ಹಳ್ಳಿಯಲ್ಲಿ 4, ಅಂಕಮನಾಳು, ತೊಣಸಿಗೆರೆ ಹಾಗೂ ಕಾಟಿನಕಂಬದಲ್ಲಿ ತಲಾ 2, ಶ್ರೀರಾಮಶೆಟ್ಟಿಹಳ್ಳಿ, ಹೊಸ ಜೋಗಿಕಲ್ಲು, ಬಿ.ಗೊಲ್ಲರ ಹಟ್ಟಿ ಹಾಗೂ ಬಂಡ್ರಿಯಲ್ಲಿ ತಲಾ ಒಂದೊಂದು ಮನೆಗಳು ಹಾನಿಗೀಡಾಗಿವೆ.
ಸಂಡೂರು, ಚೋರನೂರು ಹಾಗೂ ಕುರೇಕುಪ್ಪ ಮಳೆ ಮಾಪನ ಕೇಂದ್ರಗಳಲ್ಲಿ ಭಾನುವಾರ, ಸೋಮವಾರದಂದು ಕ್ರಮವಾಗಿ 12.6 ಮಿ.ಮೀ., 57.3 ಮಿ.ಮೀ. ಹಾಗೂ 15.3 ಮಿ.ಮೀ. ಮಳೆಯಾಗಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಹಾಗೂ ಹರಪನಹಳ್ಳಿ, ಸಿರುಗುಪ್ಪ- ಹೊಸಪೇಟೆ ತಾಲೂಕಿನಾದ್ಯಂತ ಕಚ್ಚಾ ಮನೆಗಳು ಕುಸಿದಿವೆ. ಕಳೆದ ಬಾರಿ ಕುಸಿದು ಬಿದ್ದಿರುವ ಮನೆಗಳಿಗೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡುವಲ್ಲಿ ಯಶಸ್ಸು ಕಂಡಿದೆ.