ವಿಶೇಷ ವರದಿ: ಬಳ್ಳಾರಿ ಜಿಲ್ಲೆ ಸಂಡೂರು ಮಂದಿಗೆ ಹೊಲದಲ್ಲೇ ಕೊರೊನಾವೈರಸ್ ಲಸಿಕೆ!?
ಬಳ್ಳಾರಿ, ಜೂನ್ 14: ಕೊರೊನಾವೈರಸ್ ಲಸಿಕೆ ಆರೋಗ್ಯ ಕೇಂದ್ರಗಳಲ್ಲೇ ಸಿಗುತ್ತಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ರೈತರು ಮತ್ತು ಕೃಷಿಕರನ್ನು ಹುಡುಕಿಕೊಂಡು ಹೋಗಿ ಲಸಿಕೆ ನೀಡುವಂತಾ ಕಾರ್ಯ ನಡೆಸಲಾಗುತ್ತಿದೆಯಾ ಎಂಬ ಅನುಮಾನ ಮೂಡಿತ್ತಿದೆ.
ಬೆಳ್ಳಂಬೆಳಗ್ಗೆ ಎದ್ದು ಹೊಲಗಳಿಗೆ ಹೋಗುವ ಗ್ರಾಮೀಣ ಜನರಿಗೆ ಅವರ ಹೊಲಗಳಲ್ಲೇ ಕೊವಿಡ್-19 ಲಸಿಕೆಯನ್ನು ನೀಡಲಾಗುತ್ತಿದೆ. ಕೊವಿಡ್-19 ಲಸಿಕೆ ವಿತರಣೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆ ಆಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಸಿಹಿಸುದ್ದಿ: ಈ ಚಿಕಿತ್ಸೆ ಪಡೆದರೆ 24 ಗಂಟೆಗಳಲ್ಲಿ ಕೊರೊನಾವೈರಸ್ ಮಾಯ!?
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುರೇಕೊಪ್ಪ ಮತ್ತು ಹಳೆ ದರೋಜಿ ಗ್ರಾಮಗಳಲ್ಲಿ ನಿಜವಾಗಿಯೂ ಹೊಲಗಳಲ್ಲೇ ಜನರಿಗೆ ಕೊವಿಡ್-19 ಲಸಿಕೆ ನೀಡಲಾಯಿತೇ?. ಕೊರೊನಾವೈರಸ್ ಲಸಿಕೆ ವಿತರಣೆ ಪ್ರಕ್ರಿಯೆ ನಡೆದಿದ್ದು ಹೇಗೆ?. ಯಾವೆಲ್ಲ ಅಧಿಕಾರಿಗಳು ಈ ಪ್ರಕ್ರಿಯೆ ಜವಾಬ್ದಾರಿ ವಹಿಸಿಕೊಂಡಿದ್ದರು?. ಯಾವ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹೊಲಗಳಲ್ಲೇ ಲಸಿಕೆ ನೀಡಲಾಯಿತು?. ಲಸಿಕೆ ವಿತರಣೆ ಸಂದರ್ಭ ನಿಯಮಗಳ ಉಲ್ಲಂಘನೆ ಆಗಿದೆಯಾ?. ಹೊಲದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಹೇಳುವುದೇನು?. ಸಂಡೂರು ತಾಲೂಕಿನ ಗ್ರಾಮದ ಹೊಲಗಳಲ್ಲಿ ಲಸಿಕೆ ವಿತರಿಸುವುದರ ಹಿಂದಿನ ಅಸಲಿ ಸತ್ಯಾಂಶವೇನು ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.
ಹೊಲಗಳಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ
ಕೊರೊನಾವೈರಸ್ ಲಸಿಕೆ ವಿತರಣೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಲಸಿಕೆ ನೀಡುವುದು ತುರ್ತು ಅಗತ್ಯವಾಗಿದೆ. ಇದರ ಮಧ್ಯೆ ಜೂನ್ 12ರ ಶನಿವಾರ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮ ಹಾಗೂ ಹಳೇದರೋಜಿ ಮತ್ತು ಹೊಸ ದರೋಜಿ ಗ್ರಾಮದಲ್ಲಿ ಕೊವಿಡ್-19 ಲಸಿಕೆ ನೀಡಲು ಯೋಜನೆ ರೂಪಿಸಲಾಗಿತ್ತು. ಹೊಲಗಳಿಗೆ ತೆರಳಿ ಅಲ್ಲಿಯೇ ಲಸಿಕೆ ವಿತರಣೆ ಪ್ರಕ್ರಿಯೆ ನಡೆಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರು ಪ್ರಶ್ನೆ ಮಾಡಿದ್ದರು.
ಹೊಲಗಳಲ್ಲೇ ಕೊರೊನಾ ಲಸಿಕೆ ನೀಡಿರುವುದಕ್ಕೆ ಆಕ್ಷೇಪ
"ಅರೇ ಇದೇನಿದು ಹೊಲಗಳಲ್ಲಿ , ರಸ್ತೆಗಳಲ್ಲಿ ಕೋವಿಂದ್ ವ್ಯಾಕ್ಸಿನ್ ಹಾಕುವುದೇ?, ಇವರ ಹತ್ತಿರ ಹೊಲಗಳಲ್ಲೇ ಆಧಾರ್ ಕಾರ್ಡ್ ಇರಬಹುದೆ, ರಸ್ತೆಗಳಲ್ಲಿ ಆಧಾರ್ ಕಾರ್ಡ್ ಇರಬಹುದೆ, ಆರೋಗ್ಯ ಇಲಾಖೆಯವರು ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ?, ಹಾಗಾದರೆ ಕೇಂದ್ರಗಳಲ್ಲಿ ನೋಂದಣಿ ಮಾಡಿಸುವುದು ಸಾಲುಗಳಲ್ಲಿ ನಿಲ್ಲುವುದು ಏತಕ್ಕೆ?, ಯಾವ ಪರೀಕ್ಷೆಯೂ ಮಾಡದೆ ಇವರಿಗೆ ವ್ಯಾಕ್ಸಿನ್ ನೀಡಿದಲ್ಲಿ ಆರೋಗ್ಯದಲ್ಲಿ ಏರುಪೇರು ಆದರೆ ಇದಕ್ಕೆ ಯಾರು ಹೊಣೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಈ ಭಾವಚಿತ್ರಗಳು ಸಂಡೂರು ತಾಲ್ಲೂಕಿನ ಕುರೇಕುಪ್ಪ ಗ್ರಾಮ ಮತ್ತು ಹಳೇ ದರೋಜಿ ಗ್ರಾಮ ಎಂದು ಹೇಳಲಾಗುವುದು" ಎಂದು ಆರ್ ಟಿಐ ಕಾರ್ಯಕರ್ತ ಶ್ರೀರಾಮ್ ಮಹೇಶ್ ಪ್ರಶ್ನಿಸಿದ್ದಾರೆ.
ಗ್ರಾಮಸ್ಥರಲ್ಲಿ ಕೊರೊನಾವೈರಸ್ ಲಸಿಕೆ ಬಗ್ಗೆ ಭೀತಿ
"ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಗ್ರಾಮೀಣ ಭಾಗದಲ್ಲಿ ಜನರು ಇಂದಿಗೂ ಭಯಪಡುತ್ತಿದ್ದಾರೆ. ಕೊವಿಡ್-19 ಕೇಂದ್ರಗಳಿಗೆ ಹೋಗುವುದಿರಲಿ, ಆರೋಗ್ಯ ಇಲಾಖೆ ಸಿಬ್ಬಂದಿಯೇ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ತೆರಳಿದರೆ ಬಹುತೇಕ ಜನರು ಹೊಲಗಳಿಗೆ ಹೋಗಿದ್ದಾರೆ ಎಂಬ ಉತ್ತರ ಕೇಳಿ ಬರುತ್ತಿತ್ತು. ಬೆಳಗ್ಗೆ 6 ಗಂಟೆಗೆ ಹೊಲಗಳಿಗೆ ಹೋದ ಜನರು ಸಂಜೆ 6 ಗಂಟೆ ನಂತರವೇ ಮನೆಗಳಿಗೆ ವಾಪಸ್ ಆಗುತ್ತಿದ್ದರು. ಅದೇ ರೀತಿ ಗ್ರಾಮಸ್ಥರು ಕೈಗೆ ಸಿಗದ ಹಿನ್ನೆಲೆ ಹೊಲಗಳಿಗೇ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಲಸಿಕೆ ವಿತರಿಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿತ್ತು," ಎಂದು ಸಂಡೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಕುಶಾಲ್ ರಾಜ್ ಹೇಳಿದ್ದಾರೆ.
ಕೊವಿಡ್-19 ಲಸಿಕೆ ಪಡೆದವರಿಗೆ ಅನಾರೋಗ್ಯ ಹೆಚ್ಚುವ ಭೀತಿ
"ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳದಿರಲು ಗ್ರಾಮೀಣ ಭಾಗದ ಜನರಲ್ಲಿ ಮನೆ ಮಾಡಿರುವ ತಪ್ಪು ಪರಿಕಲ್ಪನೆಗಳೇ ಕಾರಣವಾಗಿವೆ. ಈ ಲಸಿಕೆ ಹಾಕಿಸಿಕೊಂಡರೆ ಗಂಡಸ್ತನವನ್ನೇ ಕಳೆದುಕೊಳ್ಳುತ್ತಾರೆ ಎಂಬ ರೀತಿಯಾದ ಪರಿಕಲ್ಪನೆಗಳು ಗ್ರಾಮೀಣ ಭಾಗದ ಜನರಲ್ಲಿ ಆಳವಾಗಿ ಬೇರೂರಿದೆ. ಇದಲ್ಲದೇ ಒಂದು ಬಾರಿ ಕೊವಿಡ್-19 ಲಸಿಕೆ ಹಾಕಿಸಿಕೊಂಡರೆ ಅಂಥವರಿಗೆ ಜ್ವರ, ಆಯಾಸ, ಮೈಕೈ ನೋವು ಕಾಣಿಸಿಕೊಳ್ಳುತ್ತಿದೆ. ಕೆಲವರಲ್ಲಿ ಕಾಣಿಸಿಕೊಂಡ ಈ ಸಮಸ್ಯೆಗಳು ಗ್ರಾಮದ ಬಹುಪಾಲು ಜನರಲ್ಲಿ ಭಯವನ್ನು ಹುಟ್ಟು ಹಾಕಿದೆ," ಎಂಬುದು ಸಂಡೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಕುಶಾಲ್ ರಾಜ್ ವಾದ.
ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲೇ ಲಸಿಕೆ ವಿತರಣೆ
"ಸರ್ಕಾರದ ಮಾರ್ಗಸೂಚಿ ಅನ್ವಯ "ನಿಯರ್ ಟು ಹೋಮ್" ಅಡಿಯಲ್ಲಿ ಜನರಿಗೆ ಕೊರೊನಾವೈರಸ್ ಲಸಿಕೆ ನೀಡುವುದಕ್ಕೆ ನಿರ್ಧರಿಸಲಾಗಿತ್ತು. ಅದರಂತೆ 6 ಆಶಾ ಕಾರ್ಯಕರ್ತೆಯರು, 6 ಅಂಗನವಾಡಿ ಸಿಬ್ಬಂದಿ, 2 ವೈದ್ಯರು, 3 ಆರೋಗ್ಯ ಸಿಬ್ಬಂದಿ, 3 ನರ್ಸ್, ತಹಶೀಲ್ದಾರ್, ಕಾರ್ಯನಿರ್ವಹಣಾ ಅಧಿಕಾರಿ(ಇಓ), ಚೀಫ್ ಆಫೀಸರ್, ತಾಲೂಕು ಆರೋಗ್ಯ ಅಧಿಕಾರಿಗಳನ್ನೊಳಗೊಂಡ ತಂಡವು ಗ್ರಾಮಕ್ಕೆ ತೆರಳಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿತು. ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಜೂನ್ 12ರ ಶನಿವಾರ ಕುರೇಕೊಪ್ಪ ಗ್ರಾಮದಲ್ಲಿ 50 ಜನರಿಗೆ ಲಸಿಕೆಯನ್ನು ನೀಡಲಾಯಿತು," ಎಂದು ಟಿಹೆಚ್ಓ ಡಾ. ಕುಶಾಲ್ ರಾಜ್ ತಿಳಿಸಿದ್ದಾರೆ.
ಹೊಲದಲ್ಲಿ ಕೊರೊನಾ ಲಸಿಕೆ ನೀಡಿರುವ ಬಗ್ಗೆ ಸ್ಪಷ್ಟನೆ
"ಭಾರತದಲ್ಲಿ ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆಯನ್ನು ವಿತರಿಸುವಂತೆ ಕೇಂದ್ರ ಸರ್ಕಾರ ಈಗಾಗಲೇ ಆದೇಶಿಸಿದೆ. ಈ ಹಿನ್ನೆಲೆ 21ರ ನಂತರದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊವಿಡ್-19 ಲಸಿಕೆ ಕೊರತೆ ಸೃಷ್ಟಿಯಾಗಬಾರದು. 45 ವರ್ಷ ಮೇಲ್ಪಟ್ಟವರ ಆರೋಗ್ಯ ದೃಷ್ಟಿಯಿಂದಾಗಿ ಹುಡುಕಿಕೊಂಡು ಹೋಗಿ ಪ್ರತಿಯೊಬ್ಬರಿಗೆ ಲಸಿಕೆ ನೀಡುವ ಉದ್ದೇಶವನ್ನು ಹೊಂದಲಾಗಿತ್ತು. ಲಸಿಕೆ ವಿತರಣೆ ಪ್ರಕ್ರಿಯೆ ಸಂದರ್ಭದಲ್ಲಿ ಎಲ್ಲ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು," ಎಂದು ಸಂಡೂರು ಟಿಹೆಚ್ಓ ಡಾ. ಕುಶಾಲ್ ರಾಜ್ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ
ಹೊಲದಲ್ಲಿ ಕೊರೊನಾವೈರಸ್ ಲಸಿಕೆ ವಿತರಿಸುವ ಮೂಲಕ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಸುದ್ದಿ ಆಗಿದೆ. ಆದರೆ ಅದೇ ತಾಲೂಕನ್ನು ಹೊಂದಿರುವ ಬಳ್ಳಾರಿ ಜಿಲ್ಲೆಯು ಲಸಿಕೆ ವಿತರಣೆಯಲ್ಲಿ ಜೂನ್13ರ ಅಂಕಿ-ಅಂಶಗಳ ಪ್ರಕಾರ, 11ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಜಿಲ್ಲೆಯಲ್ಲಿ ಈವರೆಗೂ 21,345 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್, 13,983 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಮೊದಲ ಶ್ರೇಣಿ ಕಾರ್ಮಿಕರ ಪೈಕಿ 20,403 ಮಂದಿಗೆ ಮೊದಲ ಡೋಸ್ ಹಾಗೂ 7202 ಜನರಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. 18-44 ವರ್ಷದೊಳಗಿನ 65231 ಜನರಿಗೆ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದು, ಈ ವಯೋಮಾನದವರ ಪೈಕಿ ಒಬ್ಬರಿಗೆ ಮಾತ್ರ 2ನೇ ಡೋಸ್ ಲಸಿಕೆ ನೀಡಲಾಗಿದೆ. 45 ವರ್ಷ ಮೇಲ್ಪಟ್ಟವರ ಪೈಕಿ 4,04,986 ಜನರಿಗೆ ಮೊದಲ ಡೋಸ್ ಹಾಗೂ 1,04,200 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಈವರೆಗೂ 6,37,351 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕೊವಿಡ್19 ಪರಿಸ್ಥಿತಿ ಹೇಗಿದೆ?
ಬಳ್ಳಾರಿಯಲ್ಲಿ ಕಳೆದ 24 ಗಂಟೆಗಳಲ್ಲಿ 141 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. 7 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಈ ಅವಧಿಯಲ್ಲಿ 511 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ಒಟ್ಟು 95,594 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 90,596 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಮಹಾಮಾರಿಗೆ ಈವರೆಗೂ 1464 ಜನರು ಪ್ರಾಣ ಬಿಟ್ಟಿದ್ದು, 3534 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.