ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ ಶ್ರೀರಾಮುಲು
ಬಳ್ಳಾರಿ, ಮಾರ್ಚ್ 31: "ರಾಜ್ಯದಲ್ಲಿ ಇದುವರೆಗೆ 98 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅದರಲ್ಲಿ 6 ಜನರು ಗುಣಮುಖರಾಗಿದ್ದು, ಮೂರು ಜನರು ಮೃತಪಟ್ಟಿದ್ದಾರೆ" ಎಂದು ಸಚಿವ ಶ್ರೀರಾಮುಲು ಅವರು ಮಾಹಿತಿ ನೀಡಿದರು.
ಬಳ್ಳಾರಿಯಲ್ಲಿ ಮಾತನಾಡಿದ ಅವರು, "26 ಸಾವಿರ ಜನರನ್ನು ಗುರುತಿಸಿ ಅದರಲ್ಲಿ 3243 ಜನರ ಮಾದರಿಯನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 91 ಜನರಿಗೆ ಸೊಂಕು ಇರುವುದು ದೃಢಪಟ್ಟಿದೆ. 226 ಜನರು ಐಸೋಲೇಶಷನ್ ವಾರ್ಡ್ ನಲ್ಲಿದ್ದಾರೆ" ಎಂದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳು, ಟಾಸ್ಕ ಫೋರ್ಸ್, ಮುಖ್ಯಮಂತ್ರಿಗಳು ಹಾಗೂ ನಾನು ಸಭೆ ನಡೆಸಿ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ. ಈ ಕೆಲಸದಲ್ಲಿ ನಿರತರಾಗಿರುವವರಲ್ಲಿ ಆತ್ಮಸ್ಥೈರ್ಯ, ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯಲ್ಲಿ 59,399 ಜನರಿಗೆ ತಪಾಸಣೆ
ಹೊಸಪೇಟೆಯಲ್ಲಿಯೂ ಮೂರು ಜನರಿಗೆ ಕೊರೊನಾ ಸೋಂಕು ಇರುವುದು ನಿನ್ನೆ ಸಂಜೆ ದೃಢಪಟ್ಟಿದೆ. ಇಡೀ ನಗರವನ್ನು ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ. ಸೋಂಕಿತರ ಮನೆಯ 5 ಕಿ.ಮೀ ಸುತ್ತ ಬಫರ್ ಝೋನ್ ಆಗಿ ಮಾಡಲಾಗಿದೆ. ಅಲ್ಲಿ ಸೋಂಕು ವ್ಯಾಪಿಸದಂತೆ ಎಲ್ಲ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ ಎಂದು ವಿವರಿಸಿದರು. ಅವರ ಟ್ರಾವೆಲ್ ಹಿಸ್ಟರಿ ಕಲೆಹಾಕಲಾಗುತ್ತಿದೆ ಎಂದೂ ಹೇಳಿದರು.
ರಾಮನಗರದಲ್ಲಿ ಶ್ರೀರಾಮುಲು ಸಭೆ; ಮಾಸ್ಕ್ ಧರಿಸದ ಆರೋಗ್ಯ ಸಚಿವರು
ಬಳ್ಳಾರಿ ಜಿಲ್ಲೆಯಲ್ಲಿ 59,399 ಜನರಿಗೆ ತಪಾಸಣೆ ಮಾಡಲಾಗಿದ್ದು, ಅದರಲ್ಲಿ 57 ಜನರ ಮಾದರಿ ಪ್ರಯೋಗಾಲಯದಿಂದ ಬಂದಿದೆ. ಅದರಲ್ಲಿ 3 ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. 45 ಜನರಿಗೆ ನೆಗೆಟಿವ್ ಅಂತ ಬಂದಿದೆ. 9 ಜನರ ವರದಿ ಬರಬೇಕಿದ್ದು, 13 ಜನರನ್ನು ಐಸೋಲೇಶನ್ ವಾರ್ಡ್ ನಲ್ಲಿಡಲಾಗಿದೆ. 216 ಜನರು 14 ದಿನಗಳ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 9 ಜನರು 28 ದಿನಗಳ ಹೋಮ್ ಕ್ವಾರಂಟೈನ್ ಪೂರ್ಣಗೊಳಿಸಿದ್ದು, ಇನ್ನೂ 356 ಜನರು ಗೃಹಬಂಧನದಲ್ಲಿದ್ದಾರೆ ಎಂದರು.
ಕ್ವಾರಂಟೈನ್ ಸೆಂಟರ್ ಗಳ ಗುರುತು
ಬಳ್ಳಾರಿ ಜಿಲ್ಲೆಯಲ್ಲಿ ಕ್ವಾರಂಟೈನ್ ಸೆಂಟರ್ ಗಳನ್ನು ಈಗಾಗಲೇ ಗುರುತಿಸಿ ಅಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು. ನಗರದ ಆರ್ವೈಎಂಇಸಿ ಕಾಲೇಜಿನಲ್ಲಿ 300 ಬೆಡ್ ಗಳ ವ್ಯವಸ್ಥೆ, ವಿಮ್ಸ್ ದಂತ ವೈದ್ಯಕೀಯ ಕಾಲೇಜಿನಲ್ಲಿ 100, ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ನಲ್ಲಿ 30, ಹಡಗಲಿಯ ಸರಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ 100, ಕೂಡ್ಲಿಗಿಯ ಎಸ್ಸಿ ಪೊಸ್ಟ್ ಮೆಟ್ರಿಕ್ ಹಾಸ್ಟೆಲ್ ನಲ್ಲಿ 135 ಬೆಡ್ ಗಳ ವ್ಯವಸ್ಥೆ ಸೇರಿದಂತೆ 635 ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಟಿಬಿ ಸ್ಯಾನಿಟೋರಿಯಂ, ಜಿಲ್ಲಾಸ್ಪತ್ರೆ, ಪೃಥ್ವಿ ನರ್ಸಿಂಗ್ ಹೋಮ್ ಗಳನ್ನು ಸೂಪರ್ವೈಸಡ್ ಐಸೋಲೇಶನ್ ಸೆಂಟರ್ಗಳನ್ನಾಗಿ ಗುರುತಿಸಲಾಗಿದೆ. ಬಳ್ಳಾರಿಯಲ್ಲಿ ತ್ರೀಪಲ್ ಲೇಯರ್ ಮಾಸ್ಕ್ 27,700, ಎನ್-95 -32 ಸಾವಿರ, ಪಿಪಿಇ-450,ಗ್ಲೌಸ್-70,600 ಲಭ್ಯವಿವೆ ಎಂದರು.
ಕಳಪೆ ಮಾಸ್ಕ್ ಮಾರಾಟದ ವಿರುದ್ಧ ಕ್ರಮ
ವೈದ್ಯರಿಗೆ ಸುರಕ್ಷತಾ ಪರಿಕರಗಳ ಕೊರತೆ ಇರುವುದು ಗಮನದಲ್ಲಿದ್ದು, ಶೀಘ್ರದಲ್ಲಿ ಅವುಗಳನ್ನು ವೈದ್ಯರಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇಡೀ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ ವ್ಯವಸ್ಥೆ ಮಾಡಲಾಗಿದ್ದು, ಏಳರಿಂದ ಎಂಟು ಸಾವಿರದ ಬೆಡ್ ವ್ಯವಸ್ಥೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಸುರಕ್ಷತಾ ಪರಿಕರಗಳ ಕಿಟ್ (ಪಿಪಿಇ)ಗಳ ಕೊರತೆಯಾಗುವುದು ಸಹಜ. ಇದು ನಮ್ಮ ಗಮನದಲ್ಲಿದ್ದು, ಆದಷ್ಟು ವೈದ್ಯರಿಗೆ ಈ ಸುರಕ್ಷತಾ ಪರಿಕರ ಕಿಟ್ ಒದಗಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.
ಬೀದಿಗೆ ಬರಬೇಡಿ, ಮೊದಲು ಪ್ರಾಣ ಉಳಿಸಿಕೊಳ್ಳಿ; ಸಚಿವ ಶ್ರೀರಾಮುಲು
ರಾಜ್ಯದಲ್ಲಿ 700 ವೆಂಟಿಲೇಟರ್ ವ್ಯವಸ್ಥೆ
ರಾಜ್ಯದಲ್ಲಿ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿ 700 ವೆಂಟಿಲೇಟರ್ ಗಳು ನಮ್ಮಲ್ಲಿವೆ. 350 ವೆಂಟಿಲೇಟರ್ ಗಳ ಖರೀದಿಗೆ ಆರ್ಡರ್ ನೀಡಲಾಗಿದೆ.
ಸಮರ್ಪಕವಾಗಿ ಥರ್ಮಲ್ ಸ್ಕ್ಯಾನರ್ ಗಳನ್ನು ಇಡೀ ರಾಜ್ಯದ ಎಲ್ಲೆಡೆ ಒದಗಿಸುವುದಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು. ಕಳಪೆ ಮಾಸ್ಕ್ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವುದು, ಜನರು ಯಾವುದೇ ಕಾರಣಕ್ಕೂ ಕಳಪೆ ಮಾಸ್ಕ್ ಖರೀದಿಸಬಾರದು ಎಂದು ಮನವಿ ಮಾಡಿದರು.