ಇಂದಿನಿಂದ (ಜೂ.24) ಸಾರ್ವಜನಿಕ ವೀಕ್ಷಣೆಗೆ ಹಂಪಿ ಮುಕ್ತ
ವಿಜಯನಗರ, ಜೂನ್ 24: ದೇಶದೆಲ್ಲೆಡೆ ಕೊರೊನಾ ಸೋಂಕು 2ನೇ ಅಲೆ ವ್ಯಾಪಕವಾಗಿ ಹರಡಿದ್ದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪ್ರವಾಸಿ ತಾಣಗಳನ್ನು ಮುಚ್ಚಲಾಗಿತ್ತು. ಕೊರೊನಾ ಸೋಂಕು ಪ್ರಕರಣಗಳು ಕಡಿಮೆಯಾದ ಕಾರಣ ಇದೀಗ ಹಂಪಿಯ ಸ್ಮಾರಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಐತಿಹಾಸಿಕ ಹಂಪಿ ನೋಡಲು ಬಂದ ದೇಶಿ-ವಿದೇಶಿ ಪ್ರವಾಸಿಗರು
ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ವಿಶ್ವವಿಖ್ಯಾತ ಹಂಪಿ ಸ್ಮಾರಕಗಳನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದೇಶ- ವಿದೇಶಗಳಿಂದ ಹಂಪಿ ನೋಡಲು ಬರುವ ಅತಿಥಿಗಳ ಮುಖದಲ್ಲೂ ಹಂಪಿಯ ಸ್ಮಾರಕ ವೀಕ್ಷಿಸಿದ ಸಂತಸ ಮೂಡಿದೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ನೆರವೇರಲಿದೆ. ಆದರೆ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ಮುಂದುವರಿಸಲಾಗಿದೆ.
ಹಂಪಿಯ ಎಲ್ಲ ಸ್ಮಾರಕಗಳು, ಕಮಲಾಪುರದಲ್ಲಿನ ವಸ್ತು ಸಂಗ್ರಹಾಲಯಗಳು ಜೂ.24ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿವೆ. ಸಾರ್ವಜನಿಕರು ಆನ್ಲೈನ್ ಮತ್ತು ನಾಲ್ಕು ಕೌಂಟರ್ಗಳಲ್ಲಿ ನಗದು ಪಾವತಿಸಿ ಟಿಕೆಟ್ ಪಡೆಯಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಉಪ ಅಧೀಕ್ಷಕ ಪಿ. ಕಾಳಿಮುತ್ತು ತಿಳಿಸಿದ್ದಾರೆ.