ಹಂಪಿ ಉತ್ಸವ 2020ರ ಅದ್ಧೂರಿ ಆರಂಭ; ರಾಜಕೀಯ ಮೇಲಾಟಕ್ಕೂ ಬಳಕೆಯಾಯ್ತು ವೇದಿಕೆ
ಬಳ್ಳಾರಿ, ಜನವರಿ 11: 2020ರ ಹಂಪಿ ಉತ್ಸವ ಕಾರ್ಯಕ್ರಮ ನಿನ್ನೆ (ಜನವರಿ 10) ಬಳ್ಳಾರಿಯಲ್ಲಿ ಅದ್ಧೂರಿಯಾಗಿ ಉದ್ಘಾಟನೆಯಾಗಿದೆ. ವಿಜಯನಗರದ ಗತ ವೈಭವವನ್ನು ಸಾರುವ ಹಂಪಿ ಉತ್ಸವಕ್ಕೆ ನಿನ್ನೆ ಸಂಜೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.
ಇದೇ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, "ಬರುವ ಮಾರ್ಚ್ 5ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ ನಾಡಿನ ಅನ್ನದಾತನ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ನೀಡುವ ಆಶಯವಿದೆ. ಹಂಪಿ ಮತ್ತು ಅದರ ಸುತ್ತಲಿನ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ ಪ್ರವಾಸೋದ್ಯಮ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುವುದು" ಎಂದು ಭರವಸೆ ನೀಡಿದರು. ಸಾಂಸ್ಕೃತಿಕ ಉತ್ಸವವಾದ ಹಂಪಿ ಉತ್ಸವ ಈ ಬಾರಿ ರಾಜಕೀಯ ಮೇಲಾಟಕ್ಕೂ ವೇದಿಕೆಯಾಯಿತು. ಉತ್ಸವದ ಹೈಲೈಟ್ಸ್ ಇಲ್ಲಿದೆ...
ಯಶ್ ಕಾರ್ ಮುಂದೆ ನಿಂತು ಸೆಲ್ಫೀ ತೆಗೆದುಕೊಂಡ ಅಭಿಮಾನಿಗಳು
ಹಂಪಿ ಉತ್ಸವಕ್ಕೆ ಸಿಎಂ ಚಾಲನೆ ನೀಡಿದ ಬಳಿಕ ಗಾಯತ್ರಿ ಪೀಠದ ಬಳಿ ಹಾಕಿರುವ ಶ್ರೀ ಕೃಷ್ಣದೇವರಾಯ ವೇದಿಕೆ ಆಗಮಿಸಿದ ಯಶ್ ನೋಡಲು ಅಭಿಮಾನಿಗಳ ನೂಕುನುಗ್ಗಲು ಉಂಟಾಯಿತು. ವೇದಿಕೆಗೆ ಆಗಮಿಸಿ ಅಭಿಮಾನಿಗಳತ್ತ ಕೈ ಬೀಸಿ ಹೊಸ ವರ್ಷದ ಶುಭಾಶಯ ಕೋರಿದರು ಯಶ್. ಬಳಿಕ ಮಾತನಾಡಿದ ಅವರು, "ಇತಿಹಾಸ ಹಾಗೇ ಸೃಷ್ಟಿ ಆಗಲ್ಲ. ಈ ಮಣ್ಣಿನಲ್ಲಿ ಒಂದು ಪವರ್ ಇದೆ ಅದಕ್ಕೆ ದೇಶದ ಅತ್ಯಂತ ಉನ್ನತ ಇತಿಹಾಸ ನಿರ್ಮಾಣ ಆಗಿದೆ. ಆದ್ರೆ ಈ ಐತಿಹಾಸಿಕ ಸ್ಥಳವನ್ನು ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ" ಎಂದರು. ಇತ್ತ ಯಶ್ ಅಭಿಮಾನಿಗಳು ಯಶ್ ವೇದಿಕೆಗೆ ಬರಲು ಬಳಸಿದ ಕಾರ್ ಮುಂದೆ ನಿಂತು ವಿವಿಧ ಭಂಗಿಯಲ್ಲಿ ಫೋಟೊ ತೆಗೆಸಿಕೊಂಡರು.
ನಾಳೆ ಹಂಪಿ ಉತ್ಸವ 2020; ವಿಜಯನಗರ ವೈಭವ ಸಾರುವ ಈ ಉತ್ಸವದಲ್ಲೊಂದು ಸುತ್ತು...
ಆನಂದ ಸಿಂಗ್ ಮನವಿಗೆ ಇರುಸುಮುರುಸಿಗೊಂಡ ಸಿಎಂ?
ಕಳೆದ ಉಪ ಚುನಾವಣೆಯಲ್ಲಿ ಆನಂದ್ ಸಿಂಗ್ ಮುಂಬರುವ ಹಂಪಿ ಉತ್ಸವದಲ್ಲಿ ಜಿಲ್ಲಾ ವಿಭಜನೆ ಮಾಡುವ ಮೂಲಕ ವಿಜಯನಗರ ಕ್ಷೇತ್ರದ ಜನರಿಗೆ ಬಂಪರ್ ಕೊಡುಗೆ ನೀಡುತ್ತೇವೆ ಅಂದಿದ್ದರು. ಆದರೀಗ ಅವರಿಗೆ ನಿರಾಶೆ ಆಗಿದೆ. ಉತ್ಸವಕ್ಕೆ ಚಾಲನೆ ನೀಡಿ 15 ನಿಮಿಷ ಸಿಎಂ ಮಾತನಾಡಿದರೂ ಜಿಲ್ಲಾ ವಿಭಜನೆ ಬಗ್ಗೆ ಮಾತೇ ಎತ್ತಲಿಲ್ಲ. ಇದೇ ಸಂದರ್ಭ, ಸಿಎಂಗೆ ಮನವಿ ಮಾಡಿದ ಆನಂದ್ ಸಿಂಗ್, "ನನಗೆ ಸಚಿವ ಸ್ಥಾನ ಬೇಡ, ನಮಗೆ ಜಿಲ್ಲೆ ವಿಭಜನೆ ಮಾಡಿ. ವಿಜಯನಗರ ಜಿಲ್ಲೆ ಘೋಷಣೆ ಮಾಡಿ" ಎಂದರು. ಇದಕ್ಕೆ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮಾಧ್ಯಮಗಳ ಪ್ರಶ್ನೆಗೆ ಹಂಪಿ ಉತ್ಸವದ ಶುಭಾಷಯಗಳು ಎಂದಷ್ಟೇ ಹೇಳಿ ಸಿಎಂ ಹೋರಟು ಹೋದರು.
ಹಂಪಿಯ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಭರವಸೆ
ಉತ್ಸವ ಉದ್ಘಾಟಿಸಿದ ಮುಖ್ಯಮಂತ್ರಿಗಳು, "ಗತವೈಭವದಿಂದ ಮೆರೆದ ಹಂಪಿಯ ಕಲ್ಲು ಕಲ್ಲುಗಳು ಅದರ ಗತ ಇತಿಹಾಸ ಸಾರುತ್ತವೆ. ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್ ಹಂಪಿಯನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಬಣ್ಣಿಸಿರುವುದು ಅದಕ್ಕೆ ಸಾಕ್ಷಿ. ಇತಿಹಾಸದ ಪುನರ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಕಳೆದ 3 ದಶಕಗಳಿಂದ ಹಂಪಿ ಉತ್ಸವ ಆಚರಿಸಿಕೊಂಡು ಬರುತ್ತಿದೆ. ಉತ್ಸವದ ಅಂಗವಾಗಿ ಮತ್ಸ್ಯಮೇಳ, ಶಿಲ್ಪಕಲಾ ಶಿಬಿರ, ಕುಸ್ತಿ,ಗ್ರಾಮೀಣ ಕ್ರೀಡೆಗಳು, ರಂಗ ಚಟುವಟಿಕೆಗಳ ವಿವಿಧ ನಾಲ್ಕು ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದರು. ಜೊತೆಗೆ ಹಂಪಿಯ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಭರವಸೆಯನ್ನೂ ನೀಡಿದರು.
ಆಗಸದಿಂದ ಹಂಪಿ ಸೌಂದರ್ಯ ಸವಿಯಲು 'ಹಂಪಿ ಬೈಸ್ಕೈ'
ಮೈಸೂರು ದಸರಾ ರೀತಿ ಹಂಪಿ ಉತ್ಸವ ಆಚರಣೆ
ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಸಿ.ಟಿ. ರವಿ, "ಇನ್ನು ಮುಂದೆ ಪ್ರತಿವರ್ಷ ನಿಗದಿತ ದಿನಾಂಕದಂದು ಹಂಪಿ ಉತ್ಸವವನ್ನು ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕ್ಯಾಲೆಂಡರ್ ನಲ್ಲಿ ಅಳವಡಿಸಿ ಉತ್ಸವದ ಅನಿಶ್ಚಿತತೆ ನಿವಾರಿಸಲಾಗುವುದು. ಅಲ್ಲದೇ ಮೈಸೂರಿನ ದಸರಾ ರೀತಿ ಆಚರಣೆ ಮಾಡಲಾಗುವುದು ಎಂದರು. ಉತ್ಸವಗಳು ಕೇವಲ ಮನರಂಜನೆಯ ಆಚರಣೆಗಳಾಗಬಾರದು, ಅವು ಪರಂಪರೆಯ ಚಿಂತನ ಮಂಥನಗಳಾಗಬೇಕು" ಎಂದೂ ಹೇಳಿದರು.
ರಾಜಕೀಯ ಮಾತುಗಳಿಗೆ ವೇದಿಕೆಯಾದ ಉತ್ಸವ
ಹಂಪಿ ಉತ್ಸವದಲ್ಲಿ ರಾಜಕೀಯ ಮಾತುಗಳೇ ಹೆಚ್ಚಾದಂತಿದ್ದವು. ಉತ್ಸವದಲ್ಲಿ ಹಾಜರಿದ್ದ ಉಪಮುಖ್ಯಮಂತ್ರಿ ಲಕ್ಷಣ ಸವದಿ ಅವರು, ಸಿ.ಟಿ. ರವಿ ಅವರು ತಮ್ಮ ಇಲಾಖೆಯಲ್ಲಿ ಅದ್ಭುತವಾದ ಕೆಲಸ ಮಾಡ್ತಿದ್ದಾರೆ. ಹೀಗಾಗಿ ಅವರಿಗೆ ಇಲಾಖೆ ಬದಲಾಯಿಸಬೇಡಿ ಎಂದು ಮನವಿ ಮಾಡಿದರು. ಶ್ರೀರಾಮುಲು ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದರು. ಇನ್ನೊಂದೆಡೆ ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಮಾತ್ರ ಮಾತನಾಡಿದ್ದರು.