ಮೈಲಾರ ಧರ್ಮದರ್ಶಿ ವಿರುದ್ಧ ದೂರು ನೀಡಲು ಮುಂದಾದ ಗೊರವಯ್ಯ, ಭಕ್ತರು
ವಿಜಯನಗರ, ಆಗಸ್ಟ್ 06: ಮುಂದಿನ ಆರು ತಿಂಗಳಲ್ಲಿ ಈ ಸರ್ಕಾರ ಬೀಳಲಿದೆ, ಗಡ್ಡಧಾರಿಯೊಬ್ಬರು ಮುಂದೆ ಸಿಎಂ ಆಗಲಿದ್ದಾರೆ ಎಂದು ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಸುಕ್ಷೇತ್ರ ಮೈಲಾರ ಲಿಂಗೇಶ್ವರನ ಸನ್ನಿಧಾನದ ಧರ್ಮದರ್ಶಿ ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ನುಡಿದಿದ್ದರು.
ಇದು ದೈವವಾಣಿಯೆಂದೇ ರಾಜ್ಯದಲ್ಲಿ ಪ್ರಚಾರ ಪಡೆಯಿತು. ಈ ಬಗ್ಗೆ ಕಾರ್ಣಿಕ ನುಡಿಯುವ ಗೊರವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಭವಿಷ್ಯ ನುಡಿದ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಟಪ್ಪ ಒಡೆಯರ್ ವಿರುದ್ಧ ರಾಮಜ್ಜ ಗೊರವಯ್ಯ ಹಾಗೂ ಭಕ್ತರು ದೂರು ನೀಡಲು ಮುಂದಾಗಿದ್ದಾರೆ.
ಏನಿದು ದೂರು?
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪ ಒಡೆಯರ್ ದೇವಸ್ಥಾನದ ಆಡಳಿತವನ್ನು ನೋಡಿಕೊಂಡು ಹೋಗುವವರು. ಆದರೆ ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆ ಎಂದು ಕರೆಸಿಕೊಳ್ಳುವ ಜಾತ್ರೆಗೆ ಪ್ರತಿ ವರ್ಷ ಕಾರ್ಣಿಕ ನುಡಿಯುವುದು ವಾಡಿಕೆಯಾಗಿದೆ.
ಈ ಜಾತ್ರೆಯಲ್ಲಿ ಕಾರ್ಣಿಕವನ್ನು ವರ್ಷಕ್ಕೆ ಒಂದೇ ಬಾರಿ ಮಾತ್ರ ನುಡಿಯುವುದಾಗಿದೆ. ಈ ಹಕ್ಕು ಇರುವುದು ಗೊರವಯ್ಯ ರಾಮಜ್ಜರಿಗೆ ಮಾತ್ರ. ಕಾರ್ಣಿಕದ ವಾಣಿಯನ್ನು ವಿಶ್ಲೇಷಣೆ ಮಾಡುವ ಕಾರ್ಯ ಗೊರಯ್ಯರಿಗೆ ಮಾತ್ರ ಇರುವಂತದ್ದಾಗಿದೆ. ಆದರೆ ಮೈಲಾರ ದೇವಸ್ಥಾನದ ಧರ್ಮದರ್ಶಿ ವೆಂಕಪಯ್ಯ ಒಡೆಯರ್ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಗೊರಯ್ಯ ರಾಮಜ್ಜ ಮತ್ತು ಭಕ್ತರು ಆರೋಪಿಸುತ್ತಿದ್ದಾರೆ.
ಅಲ್ಲದೆ, ರಾಜಕೀಯ ನಾಯಕರನ್ನು ತಮ್ಮತ್ತ ಸೆಳೆಯುವ ದೃಷ್ಟಿಯಿಂದ ಮತ್ತು ನಾಯಕರ ಮನದಲ್ಲಿ ಭಯ ಹುಟ್ಟಿಸಿ, ಹಣ ಮಾಡಿಕೊಳ್ಳುವ ಸಂಚು ನಡೆಸಿದ್ದಾರೆ ಎಂದು ಗೊರವಯ್ಯ ರಾಮಜ್ಜ ಮಾಹಿತಿ ನೀಡಿದರು.
ಧರ್ಮದರ್ಶಿ ಹೇಳುವ ಹಾಗೆ ಯಾವುದು ನಡೆಯುವುದಿಲ್ಲ, ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರವನ್ನು ಪೂರ್ಣಗೊಳಿಸಲಿದ್ದಾರೆ. ಆರು ತಿಂಗಳಲ್ಲಿ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಪರ ಭಕ್ತರು ಹಾಗೂ ಆಡಳಿತ ಮಂಡಳಿಯವರು ಹೇಳಿದ್ದಾರೆ. ವೆಂಕಪಯ್ಯ ಒಡೆಯರ್ ಹೇಳುವ ಥರ ಕಾರ್ಣಿಕ ನಡಿದೇ ಇಲ್ಲ. ವೆಂಕಪ್ಪಯ್ಯ ಒಡೆಯರ್ ನುಡಿದ ವಿಶ್ಲೇಷಣೆ ಸುಳ್ಳು ಎಂದು ರಾಮಜ್ಜ ಗೊರವಯ್ಯ ತಿಳಿಸಿದರು.
ಏನಿದು ಭವಿಷ್ಯವಾಣಿ?
ಕಳೆದ ಮಾರ್ಚ 01, 2021ರಂದು "ಮುತ್ತಿನ ರಾಶಿ ಮೂರು ಪಾಲು ಆತಲೇ ಪರಾಕ್' ಎಂದು ಐತಿಹಾಸಿಕ ಕ್ಷೇತ್ರ ಮೈಲಾರ ಕಾರ್ಣಿಕೋತ್ಸವದಲ್ಲಿ ದೈವವಾಣಿ ಕಾರ್ಣಿಕ ಹೇಳಲಾಗಿತ್ತು.
ಇದರ ವಿಶ್ಲೇಷಣೆಯನ್ನು ಧರ್ಮದರ್ಶಿ ವೆಂಕಪ್ಪ ಒಡೆಯರ್ ಬೊಮ್ಮಾಯಿ ಸರ್ಕಾರದ ಅವಧಿ ಕೇವಲ ಆರು ತಿಂಗಳು ಮಾತ್ರ ಆಡಳಿತ ನಡೆಸುತ್ತದೆ. ನಂತರ ಸರ್ಕಾರ ಬೀಳುತ್ತದೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದರು.
ಅದನ್ನು ಕಾರ್ಣಿಕ ನುಡಿ ಎಂದೇ ಬಿಂಬಿಸಿದ್ದರು. ಆದರೆ, ರಾಮಜ್ಜ ಅದು ಸುಳ್ಳು ಎಂದಿದ್ದಾರೆ. ಪದೇ ಪದೇ ಈ ರೀತಿ ವಿಶ್ಲೇಷಣೆ ಮಾಡಬಾರದು. ಕಾರ್ಣಿಕ ವರ್ಷಕ್ಕೊಮ್ಮೆ ಮಾತ್ರ ನುಡಿಯಲಾಗುತ್ತದೆ. ಕಾರ್ಣಿಕ ನುಡಿಯೋದು ನಾನು. ಉಪವಾಸ ಇದ್ದು, ಬಿಲ್ಲು ಏರಿ ಕಾರ್ಣಿಕ ನುಡಿಯುತ್ತೇನೆ. ವೆಂಕಪ್ಪಯ್ಯ ಒಡೆಯರ್ ಈ ರೀತಿ ಹೇಳಿದರೆ ಭಕ್ತರು ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿರುದ್ಧ ಕಾರ್ಣಿಕದ ಗೊರವಯ್ಯನವರ ಅಸಮಾಧಾನ ಹೊರಹಾಕಿದರು.
ನಾವು ಹನ್ನೊಂದು ದಿನ ನಾವು ಉಪವಾಸ ಇರುತ್ತೇವೆ, ಇದಾದ ಮೇಲೆ ಕಾರ್ಣಿಕ ನುಡಿಯುತ್ತೇವೆ. ಸುಮ್ಮನೆ ಪ್ರಚಾರ ಪಡೆದುಕೊಳ್ಳಲು ಧರ್ಮದರ್ಶಿಗಳಾದ ವೆಂಕಟಪ್ಪ ಒಡೆಯರ್ ಈ ರೀತಿ ಹೇಳುತ್ತಾರೆ. ಇದು ವರ್ಷಕ್ಕೊಮ್ಮೆ ಮಾತ್ರ ನುಡಿಯಲಾಗುವ ಕಾರಣಿಕ, ವರ್ಷಕ್ಕೆ ಎರಡು ಬಾರಿ ಹೇಳಲು ಸಾಧ್ಯವಿಲ್ಲ. ಮುತ್ತಿನ ರಾಶಿ ಮೂರು ಭಾಗವಾಯಿತೆಲೇ ಪರಾಕ್ ಎನ್ನುವ ಕಾರ್ಣಿಕವನ್ನು ನಾವು ನುಡಿದಿದ್ದೆವು" ಎಂದು ಕಾರ್ಣಿಕ ನುಡಿಯುವ ಗೊರವಯ್ಯ ರಾಮಜ್ಜ ಹೇಳಿದ್ದಾರೆ. ಧರ್ಮದರ್ಶಿಗಳಾದ ವೆಂಕಟಪ್ಪ ಒಡೆಯರ್ ವಿರುದ್ಧ ದೂರು ನೀಡಲು ಭಕ್ತರು ಮುಂದಾಗಿದ್ದಾರೆ ಎನ್ನಲಾಗಿದೆ.