ಆನಂದ್ ಸಿಂಗ್ ಕಣಕ್ಕೆ, ಸ್ಪರ್ಧೆಯಿಂದ ಗವಿಯಪ್ಪ ಹೊರಕ್ಕೆ
ಬಳ್ಳಾರಿ, ನವೆಂಬರ್ 15: ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದ ಎಚ್. ಆರ್ ಗವಿಯಪ್ಪ ಅವರಿಗೆ ಈಗ ಇಕ್ಕಟ್ಟಿನ ಪರಿಸ್ಥಿತಿ. ಬದ್ಧ ಎದುರಾಳಿ ಆನಂದ್ ಸಿಂಗ್ ಮತ್ತೆ ಬಿಜೆಪಿಗೆ ಮರಳಿರುವುದು, ಉಪ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವುದು ಸಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ಬಗ್ಗೆ ಎಲ್ಲೂ ಹೇಳಿಕೊಳ್ಳುವಂತಿಲ್ಲ. ಸದ್ಯಕ್ಕೆ ತಮಗೆ ಸೋಲುಣಿಸಿದ ಆನಂದ್ ಸಿಂಗ್ ಪರ ಪ್ರಚಾರಕ್ಕಿಳಿಯದಿರಲು ನಿರ್ಧರಿಸಿದ್ದಾರೆ.
ವಿಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಗವಿಯಪ್ಪ ಅವರು ಬಿಜೆಪಿಯ ಹಿರಿಯ ಮುಖಂಡರ ಮನ ಓಲೈಕೆ ತಂತ್ರಕ್ಕೆ ಬಗ್ಗದಿರಲು ನಿರ್ಧರಿಸಿದ್ದಾರೆ. ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದಾರೆ. ಉಪ ಚುನಾವಣೆ ಬಳಿಕ ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಹೋಗಿ ರಾಜೀನಾಮೆ ನೀಡಿ ಅನರ್ಹ ಶಾಸಕ ಎನಿಸಿಕೊಂಡ ಆನಂದ್ ಸಿಂಗ್, ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಈಗ ಮತ್ತೆ ಬಿಜೆಪಿ ತೆಕ್ಕೆಯಲ್ಲಿದ್ದಾರೆ. ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೂಡಾ ಸಿಕ್ಕಿದೆ. 2008ರಿಂದ ಪ್ರಾಬಲ್ಯ ಹೊಂದಿರುವ ಆನಂದ್ ಸಿಂಗ್ ಡಿಸೆಂಬರ್ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.
ಗವಿಯಪ್ಪ ರಾಜಕೀಯ ಜರ್ನಿ:
2004 ರ ಚುನಾವಣೆಯಲ್ಲಿ ಎಚ್.ಆರ್.ಗವಿಯಪ್ಪ ಹೊಸಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ, 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋಲನುಭವಿಸಿದ್ದಾರೆ. ಸೋತ ನಂತರ ಗವಿಯಪ್ಪ, ಈ ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲ ಎಂಬ ಕೂಗೆದ್ದಿತ್ತು.
ಎಚ್.ಆರ್. ಗವಿಯಪ್ಪ ಅವರು ಕಾಂಗ್ರೆಸ್ ಟಿಕೇಟ್ನಿಂದ ಒಮ್ಮೆ ವಂಚಿತರಾಗಿ, ಗಾನಯೋಗಿ ಪುಟ್ಟರಾಜ ಗವಾಯಿಗಳ ಆಶೀರ್ವಾದ ಪಡೆದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾರ್ ಚಿಹ್ನೆಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ನಂತರ ಕಾಂಗ್ರೆಸ್ ಸಹ ಸದಸ್ಯರಾಗಿದ್ದರು.
ಬಿ ಶ್ರೀರಾಮುಲು ಬಿಜೆಪಿಗೆ ಕರೆ ತಂದಿದ್ದರು
''ಎಚ್.ಆರ್. ಗವಿಯಪ್ಪ ಪಕ್ಷಕ್ಕೆ ಸೇರ್ಪಡೆ ಆದಲ್ಲಿ, ಪಕ್ಷ ಅವರನ್ನು ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಉತ್ಸುಕವಾಗಿದೆ'' ಎಂದಿದ್ದ ಬಿ ಶ್ರೀರಾಮುಲು ಅವರು ಕೊನೆಗೂ ಗವಿಯಪ್ಪಗೆ ಟಿಕೆಟ್ ಕೊಡಿಸಿದ್ದರು.
ಕರ್ನಾಟಕ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಟಿ.ಎಚ್. ಸುರೇಶಬಾಬು ಅವರನ್ನು ಪಕ್ಷಕ್ಕೆ ಸ್ವಾಗತಿಸುವ ಉತ್ಸಾಹದಲ್ಲಿತ್ತು. ಈಗಾಗಲೇ ಬಿ. ನಾಗೇಂದ್ರ, ಬಿ.ಎಸ್. ಆನಂದಸಿಂಗ್ ಅವರನ್ನು ಬಿ. ಶ್ರೀರಾಮುಲು - ಜಿ. ಜನಾರ್ದನರೆಡ್ಡಿ ಅವರ ಬಿಗಿ ಹಿಡಿತದಿಂದ ಬಿಡಿಸಿಕೊಂಡು, ಕಾಂಗ್ರೆಸ್ಸಿಗೆ ಸೇರಿಸಿಕೊಂಡಿದ್ದ ಕಾಂಗ್ರೆಸ್ ಹೈಕಮಾಂಡ್, ಟಿ.ಎಚ್. ಸುರೇಶಬಾಬು ಅವರನ್ನು ಪಕ್ಷಕ್ಕೆ ಸೆಳೆದುಕೊಂಡಲ್ಲಿ ಬಿಜೆಪಿಗೆ ಜಿಲ್ಲೆಯಲ್ಲಿ ತೀವ್ರ ಆಘಾತ ನೀಡಲಿದೆ ಎಂದೇ ವಿಶ್ಲೇಷಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಗವಿಯಪ್ಪ ಅವರನ್ನು ಬಿಜೆಪಿ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಆನಂದ್ ಸಿಂಗ್ ಪ್ಲ್ಯಾನ್ ಬಿ ಏನಾಗಿತ್ತು?
ಒಂದು ವೇಳೆ ಸುಪ್ರೀಂಕೋರ್ಟಿನಲ್ಲಿ ತೀರ್ಪು ತಮ್ಮ ವಿರುದ್ಧ ಬಂದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದಿದ್ದರೆ, ಪತ್ನಿ ಲಕ್ಷ್ಮಿಯನ್ನು ಕಣಕ್ಕಿಳಿಸಲು ಮುಂದಾಗಿದ್ದರು. ಜೊತೆಗೆ 24 ವರ್ಷ ವಯಸ್ಸಿನ ಪುತ್ರ ಸಿದ್ಧಾರ್ಥ್ ಸಿಂಗ್ ನನ್ನು ತಯಾರಿರಲು ಹೇಳಿದ್ದರು. ಆದರೆ ಸಿದ್ದಾರ್ಥ್ ಗೆ ವಯೋಮಿತಿ ಅಡ್ಡಿಯಾಗಿದೆ. ಈ ಬಾರಿ ಆನಂದ್ ಸಿಂಗ್ ಸ್ಪರ್ಧೆಯ ಮೂಲಕ ಬಳ್ಳಾರಿ ಬಿಜೆಪಿಯಲ್ಲಿನ ಒಡೆದ ಮನಸ್ಸುಗಳನ್ನು ಒಂದು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.
ಸ್ಥಳೀಯ ಬಿಜೆಪಿ, ಆರೆಸ್ಸೆಸ್ ವಿರೋಧ
ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹಿಸಿದ ಆನಂದ್ ಸಿಂಗ್ ನಿಲುವನ್ನು ಗಾಲಿ ರೆಡ್ಡಿ ಸೋದರರು ಹಾಗೂ ಬಿ ಶ್ರೀರಾಮುಲು ತೀವ್ರವಾಗಿ ವಿರೋಧಿಸಿದರು. ಸ್ಥಳೀಯ ಬಿಜೆಪಿ ಮುಖಂಡರು, ಆರೆಸ್ಸೆಸ್ ನಾಯಕರಿಗೆ ಗವಿಯಪ್ಪ ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂಬ ಇರಾದೆ ಇದೆ. ಪ್ರತ್ಯೇಕ ಜಿಲ್ಲೆ ಜೊತೆಗೆ ಸಂಪನ್ಮೂಲಗಳ ಕೊರತೆ ಎದುರಾಗಲಿದ್ದು, ಮತದಾರರು ವಿಭಜನೆಯಾಗಲಿದ್ದಾರೆ, ಬಿಜೆಪಿಗೆ ಇದು ದೊಡ್ಡ ತಲೆನೋವಾಗಲಿದೆ.
ಕಾಂಗ್ರೆಸ್ಸಿನಿಂದ ಕಠಿಣ ಸ್ಪರ್ಧೆ ಸಾಧ್ಯತೆ
ಮಾಜಿ ಶಾಸಕರಾದ ಸಂತೋಷ್ ಲಾಡ್, ಸೂರ್ಯ ನಾರಾಯಣ ರೆಡ್ಡಿ ಅವರನ್ನು ಮೊದಲಿಗೆ ಸ್ಪರ್ಧೆಗಿಳಿಯಲು ಕೇಳಲಾಯಿತು. ಆದರೆ ಇಬ್ಬರೂ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಗವಿಯಪ್ಪ ಅವರನ್ನು ಘರ್ ವಾಪ್ಸಿ ಮಾಡಿಸಿ ಮತ್ತೆ ಟಿಕೆಟ್ ಕೊಡುವ ಯೋಜನೆಯನ್ನು ಹಾಕಿಕೊಳ್ಳಲಾಯಿತು. ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರಿಗೂ ಆಹ್ವಾನ ನೀಡಲಾಗಿದೆ. ಈ ನಡುವೆ ಜೆಡಿಎಸ್ ನಿಂದ ಕೂಡ್ಲಿಗಿ ಮಾಜಿ ಶಾಸಕ ಎನ್ಎಂ ನಬಿ ಅವರಿಗೆ ಟಿಕೆಟ್ ನೀಡಲಾಗಿದೆ.