ಕೊರೊನಾದಿಂದ ಶಿಕ್ಷಕರ ಸಾವು; ಶಾಲೆ ಬೇಡವೇ ಬೇಡ ಎಂದ ಶಾಸಕ
ಬಳ್ಳಾರಿ, ಅಕ್ಟೋಬರ್ 9: ಸುಭದ್ರವಾದ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಲು ದೊಡ್ಡದು. ಆದರೆ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪುತ್ತಿರುವ ಶಿಕ್ಷಕರ ಸಂಖ್ಯೆ ಹೆಚ್ಚಿರುವುದು ಆಘಾತಕಾರಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ.
"ಶಿಕ್ಷಕರು ಕೊರೊನಾ ಸೋಂಕಿಗೆ ತುತ್ತಾಗಿ ಸಾಯುತ್ತಿರುವುದು ಬಹಳ ದುಃಖದ ವಿಷಯ. ವಠಾರ ಶಾಲೆಯಾಗಲಿ, ಬೇರೆ ರೀತಿಯೇ ಆಗಲಿ, ಯಾವ ರೀತಿಯಲ್ಲೂ ಶಾಲೆಗಳು ತೆರೆಯುವುದು ಬೇಡವೇ ಬೇಡ" ಎಂದಿದ್ದಾರೆ.
ಬಳ್ಳಾರಿಯಲ್ಲಿ ಶಿಕ್ಷಕರ ಸಾವು; ಶಾಲಾರಂಭದ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ?
ಬಳ್ಳಾರಿ ನಗರದಲ್ಲಿ 5 ಮಂದಿ ಶಿಕ್ಷಕರು ಸೋಂಕಿನಿಂದ ಬಲಿಯಾದರೆ, ಉಳಿದ ತಾಲೂಕಿನಲ್ಲಿ 5 ಜನ ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 10 ಮಂದಿ ಶಿಕ್ಷಕರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕಳೆದ ಮೂರು ತಿಂಗಳಿಂದ ಶಿಕ್ಷಕರ ಸಾವು ಸಂಭವಿಸುತ್ತಿದೆ. ವಿದ್ಯಾಗಮ ಯೋಜನೆ ಜಾರಿಯಾದ ಬಳಿಕ 8 ಜನ ಶಿಕ್ಷಕರು ಬಲಿಯಾಗಿದ್ದಾರೆ. ಉಳಿದಂತೆ ಈ ಯೋಜನೆ ಜಾರಿಯಾಗುವ ಮೊದಲ ಇಬ್ಬರು ಶಿಕ್ಷಕರು ಕೊರೊನಾದಿಂದ ಸಾವನ್ನಪ್ಪಿದ್ದರು.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸೋಮಶೇಖರ ರೆಡ್ಡಿ, ಶಿಕ್ಷಕರ ಶವದ ಮೇಲೆ ಶಾಲೆ ನಡೆಸುವುದು ಸರಿಯಲ್ಲ. ಗುರುಗಳಿಗೆ ನಾವು ಕೊಡುವ ಗೌರವವೇ ಬೇರೆ. ಬಳ್ಳಾರಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರಿ ಶಿಕ್ಷಕರ ಸಾವು ಹೆಚ್ಚಾಗಿದೆ. ಹೀಗಾಗಿ ಈ ವರ್ಷ ಶಾಲೆ ಆರಂಭ ಮಾಡುವುದು ಬೇಡವೇ ಬೇಡ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.
Recommended Video
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33764 ಆಗಿದ್ದು, ಸೋಂಕಿಗೆ ಈವರೆಗೂ 485 ಮಂದಿ ಬಲಿಯಾಗಿದ್ದಾರೆ. ಆದರೆ ಸೋಕಿನಿಂದ ಗುಣಮುಖ ಆದವರ ಸಂಖ್ಯೆಯೂ ಹೆಚ್ಚಳವಾಗಿದೆ. ಈವರೆಗೂ ಒಟ್ಟು 30429 ಮಂದಿ ಗುಣಮುಖ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2850 ಸಕ್ರಿಯ ಪ್ರಕರಣಗಳಿವೆ. ಸಾವಿನ ಪ್ರಮಾಣ ಮಾತ್ರ ಇನ್ನೂ ಕಡಿಮೆಯಾಗಿಲ್ಲ.