ರೈತರ ಪವಿತ್ರವಾದ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬಕ್ಕೆ ರೆಡ್ಡಿ ವಿಷಸ್
ಇಂದು ರೈತರ ಪಾಲಿನ ವಿಶೇಷವಾದ ದಿನ. ಮಣ್ಣೆತ್ತಿನ ಅಮಾವಾಸ್ಯೆಯ ದಿನವಾದ ಇಂದು ರೈತರು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ ಎಂದು ಮಣ್ಣೆತ್ತಿನ ಅಮಾವಾಸ್ಯೆ ಬಗ್ಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಸರಿಯಾಗಿ ಹದಿನೈದು ದಿನಗಳ ಹಿಂದೆ ಕಾರುಹುಣ್ಣಿಮೆಯಂದು ರೈತರು ದಿನನಿತ್ಯ ದುಡಿಯುವ ರೈತರ ಪಾಲಿನ ದೈವವೇ ಆಗಿರುವ ಎತ್ತುಗಳನ್ನು ಸಿಂಗರಿಸಿ ಸಂಜೆ ಊರಲ್ಲಿ ಮೆರವಣಿಗೆ ಮಾಡಿ ಸಿಹಿ ತಿನಿಸುಗಳನ್ನು ತಯಾರಿಸಿ ವಿಶಿಷ್ಟವಾಗಿ ಸಂಭ್ರಮದಿಂದ ಆಚರಿಸುವ ಕಾರು ಹುಣ್ಣಿಮೆಯ ನಂತರ ಬರುವುದೇ ಮಣ್ಣೆತ್ತಿನ ಅಮಾವಾಸ್ಯೆ .
ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ, ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಪೂಜಿಸುವ ಮೂಲಕ ರೈತನ ಬದುಕಿನ ಎರಡು ಕಣ್ಣುಗಳಾಗಿ ಮಣ್ಣು ಮತ್ತು ಎತ್ತು ಎರಡನ್ನೂ ಪೂಜಿಸುವ ಪರಿಪಾಠವನ್ನು ಹೊಂದಿದ್ದಾರೆ.
ಮಣ್ಣೆತ್ತಿನ ಅಮಾವಾಸ್ಯೆ : ಮಣ್ಣಿನ ಬಸವಣ್ಣನಿಗೆ ಭಾರೀ ಬೇಡಿಕೆ
ಉತ್ತರ ಕರ್ನಾಟಕದ ಭಾಗದಲ್ಲಿ ಇಂದಿನಿಂದ ಮುಂದೆ ಬರುವ ಹಬ್ಬಗಳು ವಿಶೇಷವಾಗಿ ಮಣ್ಣಿನಿಂದಲೆ ತಯಾರಿಸಿದ ನಾಗರಪಂಚಮಿಯಂದು ನಾಗಪ್ಪ, ಗೌರಿ ಹುಣ್ಣಿಮೆಯಂದು ಗೌರಿ, ಗಣೇಶ ಚೌತಿಯಂದು ಗಣಪತಿ ಹೀಗೆ ಮಣ್ಣಿನ ಮೂರ್ತಿಗಳನ್ನೇ ಆರಾಧಿಸುವ ಪದ್ಧತಿ ಮೊದಲಿನಿಂದಲೂ ಬಂದಿದೆ.
ಈ ಪವಿತ್ರವಾದ ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಭಕ್ತಿಯಿಂದ ಪೂಜೆಯಲ್ಲಿ ತೊಡಗಿರುವ ಎಲ್ಲ ಸಮಸ್ತ ಜನಾಂಗದ ಬಾಂಧವರು ವಿಶೇಷವಾಗಿ ರೈತರಿಗೆ ಒಳ್ಳೆಯದಾಗಲಿ ಎಂದು ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಬಸವಣ್ಣನಲ್ಲಿ ಪ್ರಾರ್ಥಿಸುತ್ತೇನೆ.
- ಗಾಲಿ ಜನಾರ್ದನ ರೆಡ್ಡಿ