ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಯೋಗಕ್ಕಿದೆ: ಗಾಲಿ ರೆಡ್ಡಿ
ದೇಶದ ನಾಗರೀಕರ ಆರೋಗ್ಯದ ಮಟ್ಟವನ್ನು ಮಾಪನ ಮಾಡಿದರೆ ಆ ದೇಶದ ಅಭಿವೃದ್ಧಿಯನ್ನು ಅಳೆಯಬಹುದು ಎಂದು ತಜ್ಞರು ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಭಾರತದ ಪ್ರಾಚೀನ ಶಾಸ್ತ್ರವಾದ ಯೋಗವು ವಿಶ್ವದಲ್ಲಿಯೇ ಪ್ರಾಮುಖ್ಯತೆಯನ್ನು ಪಡೆದಿದೆ.
ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಯೋಗದ ಮಹತ್ವದ ಬಗ್ಗೆ ಸಾರಿದ್ದಲ್ಲದೆ, ವಿಶ್ವ ಯೋಗ ದಿನಾಚರಣೆಯ ವಿಷಯ ಮಂಡಿಸಿದ್ದು, ನಂತರ ವಿಶ್ವಸಂಸ್ಥೆ ಇದಕ್ಕೆ ಒಪ್ಪಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಜೂ.21ರಂದು ವಿಶ್ವ ಯೋಗ ದಿನಾಚರಣೆಯಾಗಿ ಆಚರಿಸಲಾಗ್ತಿದೆ.
ಕ್ರಿ.ಪೂ 3ನೇ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾದ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಬೆಳೆದು ಬಂದಿದೆ. ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ. ಅಂದಹಾಗೆ ಜೂ.21 ದೀರ್ಘಕಾಲ ಹಗಲು ಹೊಂದಿರುವ ದಿನ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ.
ಹೀಗಾಗಿ, ಇದೇ ದಿನವನ್ನು ಯೋಗದಿನಾಚರಣೆಯಾಗಿ ಪ್ರಧಾನಿ ಮೋದಿ ಆಯ್ಕೆ ಮಾಡಿಕೊಂಡಿದ್ದರು. ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಭಾರತದ ಈ ಹೆಮ್ಮೆಯ ಕೊಡುಗೆಯಲ್ಲಿ ನಾವು ಪಾಲುದಾರರಾಗೋಣ.
ತಮಗೆಲ್ಲಾ ತಿಳಿದಿರುವಂತೆ ನಾನು ಕಾರಣಾಂತರಗಳಿಂದ 43 ತಿಂಗಳು ವನವಾಸದಲ್ಲಿದ್ದುದು ನನ್ನ ಬದುಕಿನ ಅತ್ಯಂತ ಕಷ್ಟದ ದಿನಗಳಾಗಿದ್ದವು.
ಈ ವೇಳೆ ನನಗೆ ಮಾನಸಿಕವಾಗಿ ತುಂಬಾ ಕಿರಿಕಿರಿಯಾಗುತ್ತಿದ್ದ ಸಮಯದಲ್ಲಿ ನನ್ನ ಮಾನಸಿಕ ಸಮತೋಲನವನ್ನು ಕಾಪಾಡಿ, ನನ್ನಲ್ಲಿ ಏಕಾಗ್ರತೆ ಮತ್ತು ನನ್ನ ಭವಿಷ್ಯದ ದಿನಗಳ ಬಗ್ಗೆ ಭರವಸೆ ಹಾಗೂ ಆಶಾವಾದ ಮೂಡುವಲ್ಲಿ ಯೋಗವೇ ನನಗೆ ಸಹಕಾರಿಯಾಗಿದ್ದದು ಎಂದು ನಾನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಆದ್ದರಿಂದ ಯೋಗಕ್ಕೆ ಮನುಷ್ಯನ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿಯಿದೆ ಎನ್ನುವುದಕ್ಕೆ ನಾನೇ ಸಾಕ್ಷಿ.
ಈ ಸಂದರ್ಭದಲ್ಲಿ ಯುವ ಭಾಂದವರಲ್ಲಿ ನನ್ನ ಕಳಕಳಿಯ ವಿನಂತಿ. ಎಲ್ಲರೂ ಮಾದಕ ದ್ರವ್ಯ ಸೇವನೆಯಿಂದ ದೂರವಿರಿ. ಯೋಗಾಭ್ಯಾಸ ಮೈಗೂಡಿಸಿ ಆರೋಗ್ಯವಂತರಾಗಿರಿ. ಪಾಶ್ಚಿಮಾತ್ಯ ಸಂಸ್ಕೃತಿಯ ಗೀಳನ್ನು ಕಡಿಮೆ ಮಾಡಿ.
ನಮ್ಮ ರಾಷ್ಟ್ರೀಯತೆ, ಸಂಸ್ಕೃತಿ, ಆಚಾರ - ವಿಚಾರ ಪರಂಪರೆ ಹಾಗೂ ವಿಶ್ವಮಟ್ಟದಲ್ಲಿ ಶ್ರೇಷ್ಠತೆ ಪಡೆದ ನಮ್ಮ ಗೌರವ ಸಂಗೀತ ಪ್ರಕಾರಗಳಿಗೆ ಗಮನ ಹರಿಸೋಣ. ಯೋಗ ಮಾಡೋಣ... ಆರೋಗ್ಯವಾಗಿರೋಣ...
- ಗಾಲಿ ಜನಾರ್ದನ ರೆಡ್ಡಿ