ಅಮಿತ್ ಶಾ ಉದ್ಘಾಟಿಸಿದ ಬಳ್ಳಾರಿ FSL ಲ್ಯಾಬ್ ವಿಶೇಷತೆಗಳು
ಬಳ್ಳಾರಿ, ಮೇ 03; ಒಂದು ದಿನದ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳ್ಳಾರಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಇನ್ನು ಮುಂದೆ ತ್ವರಿತವಾಗಿ ಫೋರೆನ್ಸಿಕ್ ವರದಿಗಳು ಲಭ್ಯವಾಗಲಿವೆ.
ಮಂಗಳವಾರ ಅಮಿತ್ ಶಾ ಬಳ್ಳಾರಿಯ ಬಿಎಸ್ಎನ್ಎಲ್ ಕಚೇರಿಯ ಆವರಣದಲ್ಲಿರುವ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಬೆಂಗಳೂರಿನಿಂದ ವರ್ಚುವಲ್ ಮೂಲಕ ಉದ್ಘಾಟಿಸಿದರು. ಬೆಂಗಳೂರಿನಲ್ಲಿ ಪೊಲೀಸ್ ಗಸ್ತು ನಿರ್ವಹಣೆಗಾಗಿ ನವೀನ ತಂತ್ರಜ್ಞಾನದ ಸ್ಮಾರ್ಟ್ ಇ-ಬಿಟ್ ಗೆ ಚಾಲನೆ ನೀಡುವುದರ ಜೊತೆಗೆ ಬಳ್ಳಾರಿಯ ಎಫ್ಎಸ್ಎಲ್ ಸೆಂಟರ್ಗೂ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಈ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವು ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಒಳಪಡಲಿವೆ. ಬಳ್ಳಾರಿಯಲ್ಲಿ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ಸ್ಥಾಪನೆಯಾಗಿರುವುದರಿಂದ ಇದುವರೆಗೆ ಕಲಬುರಗಿ ಕೇಂದ್ರದ ಮೇಲಿದ್ದ ಒತ್ತಡ ಕಡಿಮೆಯಾಗಲಿದೆ.
ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮಾತನಾಡಿ, "ಇನ್ನು ಮುಂದೆ ಎಫ್ಎಸ್ಎಲ್ ವರದಿಗಳು ಬೇಗ ಬರಲಿವೆ. ಪ್ರಕರಣಗಳಲ್ಲಿ ಆರೋಪಗಳ ದೃಢಪಡುವಿಕೆಯ ಶೇಕಡಾವಾರು ಪ್ರಮಾಣ ತೀರಾ ಕಡಿಮೆ ಇದ್ದು, ಎಫ್ಎಸ್ಎಲ್ ಬಲಪಡಿಸಿದರೇ ಪೊಲೀಸರ ಸಾಕ್ಷ್ಯಾಧಾರಗಳು ಸ್ಟ್ರಾಂಗ್ ಆಗಲು ಮತ್ತು ಶಿಕ್ಷೆ ಪ್ರಮಾಣ ಹೆಚ್ಚಾಗಲು ಸಾಧ್ಯ ಮತ್ತು ಅಪರಾಧಗಳ ಪ್ರಮಾಣ ಕಡಿಮೆಯಾಗಲು ಸಹಕಾರಿಯಾಗಲಿದೆ" ಎಂದರು.
ಕರ್ನಾಟಕ ಸರಕಾರ ಈ ಎಫ್ಎಸ್ಎಲ್ ಕೇಂದ್ರಕ್ಕೆ ವಿಜ್ಞಾನಿಗಳು, ಸಿಬ್ಬಂದಿ ಹಾಗೂ ಅಗತ್ಯ ಸೌಕರ್ಯ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದು,ಇನ್ನೂ ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ಜಿಲ್ಲಾಡಳಿತ ಒದಗಿಸಲಿದೆ. ಇದುವರೆಗೆ ಒಂದು ವರದಿ ಬರಬೇಕಾದರೇ ಎರಡು ತಿಂಗಳಾಗುತ್ತಿತ್ತು, ಇನ್ನು ಮುಂದೆ ಹದಿನೈದು ದಿನಗಳಿಂದ ತಿಂಗಳೊಳಗೆ ವರದಿ ಕೈಸೇರಲಿದೆ.
ಬಸವರಾಜ ಬೊಮ್ಮಾಯಿ 2022-23ರ ಬಜೆಟ್ನಲ್ಲಿ ಎಫ್ಎಸ್ಎಲ್ ಪ್ರಯೋಗಾಲಯ ಘೋಷಣೆ ಮಾಡಿದ್ದರು. ಈ ಘೋಷಣೆಯಾದ ಎರಡು ತಿಂಗಳಲ್ಲಿಯೇ ಎಫ್ಎಸ್ಎಲ್ ಕೇಂದ್ರವನ್ನು ಬಳ್ಳಾರಿಯಲ್ಲಿ ಆರಂಭಿಸಲಾಗಿದೆ. ಬುಧವಾರದಿಂದಲೇ ಈ ಲ್ಯಾಬ್ ಕಾರ್ಯನಿರ್ವಹಿಸಲಿದೆ. ಎಲ್ಲ ಅಗತ್ಯ ಸಿಬ್ಬಂದಿ ಹಾಗೂ ಸೌಕರ್ಯಗಳನ್ನು ಸರಕಾರ ಒದಗಿಸಿದೆ.
Recommended Video
ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಜಿ. ಲಿಂಗಮೂರ್ತಿ, ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತ ಡಾ. ಆಕಾಶ್, ಡಿವೈಎಸ್ಪಿ ರಮೇಶಕುಮಾರ್ ಹಲವರು ಉಪಸ್ಥಿತರಿದ್ದರು.