ಹಿರೇಹಡಗಲಿಯಲ್ಲಿ ಮದುವೆ ದಿಬ್ಬಣದ ಟ್ರ್ಯಾಕ್ಟರ್ ಮಗುಚಿ ನಾಲ್ವರ ಸಾವು
ಬಳ್ಳಾರಿ, ಮಾರ್ಚ್ 20: ಮದುವೆ ದಿಬ್ಬಣದ ಟ್ರಾಕ್ಟರ್ ಮಗುಚಿಬಿದ್ದು ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟು, ಏಳು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ಬಳ್ಳಾರಿ ಜಿಲ್ಲೆ ಹಿರೇಹಡಗಲಿ ಪೊಲೀಸ್ ಠಾಣೆವ್ಯಾಪ್ತಿಯ ಕತ್ತೆಬೆನ್ನೂರು ಗ್ರಾಮದ ಬಳಿ ನಡೆದಿದೆ.
ಮದುವೆ ದಿಬ್ಬಣದ ಟ್ರಾಕ್ಟರ್ ಮುಗುಚಿ ಬಿದ್ದ ಪರಿಣಾಮ ಟ್ರಾಕ್ಟರ್ ನಲ್ಲಿದ್ದವರಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಏಳು ಜನರಿಗೆ ತೀವ್ರ ಗಾಯಗಳಾಗಿದೆ.
ಜಗಳೂರು ಬಳಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಪುತ್ರನ ಕಾರು ಅಪಘಾತ
ಮೃತಪಟ್ಟವರನ್ನು ದಾಸಹನಹಳ್ಳಿ ಮೂಲದ ಅಂಗಡಿ ಗೀತಾ (40) ಸೊಪ್ಪನ ಸುನಿತಾ (30), ವೀರಣ್ಣ ಜಕ್ಕಣ್ಣನವರ (35) ಹೆಗ್ಗಜ್ಜರ ಕಾಳಮ್ಮ (50) ಎಂದು ಗುರುತಿಸಲಾಗಿದೆ. ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೂವಿನಹಡಗಲಿ ಮತ್ತು ಹರಪನಹಳ್ಳಿಯ ಸಾವ೯ಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೂವಿನ ಹಡಗಲಿಯ ಭೀರಬ್ಬಿ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮದುವೆ ಮುಗಿಸಿಕೊಂಡು ವಾಪಸ್ ದಾಸಹನಹಳ್ಳಿಗೆ ತೆರಳುವಾಗ ಕತ್ತೇಬೆನ್ನೂರು ಬಳಿ ಟ್ರಾಕ್ಟರ್ ಆಯತಪ್ಪಿ ಮಗುಚಿಬಿದ್ದಿದೆ. ಸ್ಥಳಕ್ಕೆ ಸಿಪಿಐ ಮಾಲತೇಶ ಕೂನಬೇವು ಭೇಟ್ಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.