ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ ಕೊರೊನಾ ಸೋಂಕಿಗೆ ನಾಲ್ವರು ಬಲಿ
ಬಳ್ಳಾರಿ, ಜೂನ್ 28: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ನಾಲ್ವರು ಬಲಿಯಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.
ನೆರೆಯ ರಾಜ್ಯ ಆಂಧ್ರಪ್ರದೇಶ ಮೂಲದ ಕರ್ನೂಲ್ ಜಿಲ್ಲೆ ಆದೋನಿಯ 60 ವರ್ಷ ವಯೋಮಾನದ ವ್ಯಕ್ತಿ, ಬಳ್ಳಾರಿ ತಾಲೂಕಿನ ರೂಪನಗುಡಿ ಹೋಬಳಿಯ 65 ವರ್ಷ ವಯೋಮಾನದ ವ್ಯಕ್ತಿ ಹಾಗೂ ಬಳ್ಳಾರಿ ನಗರದ ಕೋಟೆ ಪ್ರದೇಶದ 63 ವರ್ಷ ವಯೋಮಾನದ ಮಹಿಳೆ, ಬಳ್ಳಾರಿಯ ರಾಜೇಶ್ವರಿ ನಗರದ 58 ವರ್ಷ ವಯೋಮಾನದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ತಿಳಿಸಿದ್ದಾರೆ.
ಬಳ್ಳಾರಿ, ಉಡುಪಿಯಲ್ಲಿ SSLC ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ತೀವ್ರ ಉಸಿರಾಟದ ತೊಂದರೆ, ಜ್ವರ ಮತ್ತು ಕೆಮ್ಮು-ನೆಗಡಿಯಿಂದ ಬಳಲುತ್ತಿದ್ದ ಈ ನಾಲ್ವರನ್ನು ಶನಿವಾರ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಪರೀಕ್ಷೆಯ ಹಿನ್ನೆಲೆಯಲ್ಲಿ ಗಂಟಲು ದ್ರವ ಸಂಗ್ರಹ ಮಾಡಲಾಗಿತ್ತು. ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದ್ದು, ಎಸ್ಒಪಿ ಪ್ರಕಾರ ಈ ನಾಲ್ವರ ಅಂತ್ಯಕ್ರಿಯೆಯನ್ನು ನಡೆಸಲಾಗುವುದೆಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಹೇಳಿದ್ದಾರೆ.