ಬಳ್ಳಾರಿ: ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಸ್ಪಂದಿಸಿದ ಮಾಜಿ ಶಾಸಕ
ಬಳ್ಳಾರಿ, ಸೆಪ್ಟೆಂಬರ್ 23: ಕೊರೊನಾ ವೈರಸ್ ಮಾಹಾಮಾರಿಯಿಂದಾಗಿ ಕೆಲಸ ಇಲ್ಲದೆ, ಸಂಬಳ ಇಲ್ಲದೆ ಸಂಸಾರ ನಡೆಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಅತಿಥಿ ಉಪನ್ಯಾಸಕರ ಸಹಾಯಕ್ಕೆ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಮುಂದಾಗಿದ್ದಾರೆ.
ಸರಕಾರಿ ಪದವಿ ಪೂರ್ವ ಹಾಗೂ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಸ್ಪಂದಿಸಿ, ಅವರಿಗೆಲ್ಲಾ ಆಹಾರದ ಕಿಟ್ ಗಳನ್ನು ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸೇರಿದಂತೆ ಜಿಲ್ಲೆಯ 200 ಕ್ಕೂ ಹೆಚ್ಚಿನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ.
ಇದೇ ಸಮಯದಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ನೇಮಿರಾಜ ನಾಯ್ಕ್, ಹಲವಾರು ತಿಂಗಳುಗಳಿಂದ ಸಂಬಳವಿಲ್ಲದೆ ಅತ್ಯಂತ ಕಷ್ಟದ ಸ್ಥಿತಿಯಲ್ಲಿರುವ ಈ ಅತಿಥಿ ಉಪನ್ಯಾಸಕರಿಗೆ ನೆರವಾಗಬೇಕಿದೆ ಎಂದರು.
ನಾಡಿದ್ದು ಬಳ್ಳಾರಿ ಜಿಲ್ಲೆಯ ಅತಿಥಿ ಉಪನ್ಯಾಸಕರ ನಿಯೋಗವನ್ನು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ರವರ ಬಳಿ ಕರೆದುಕೊಂಡು ಹೋಗಿ, ಅವರೊಂದಿಗೆ ಚರ್ಚಿಸಿ, ಸಂಬಳ ಹೆಚ್ಚಳ, ಕೆಲಸ ಖಾಯಂ ಮಾಡಲು ಬೇಕಾದ ನೆರವು ನೀಡುವುದಾಗಿ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ತಿಳಿಸಿದ್ದಾರೆ.