ವಿ.ಎಸ್.ಉಗ್ರಪ್ಪನನ್ನು ರೂಂನಲ್ಲಿ ಕೂಡಿ ಹಾಕಿ ಬೀಗ ಜಡಿದು ಪರಾರಿಯಾಗಿದ್ದು ಯಾರು?
ಹೊಸಪೇಟೆ, ನ 24: ಉಪಚುನಾವಣೆಯ ನಿಮಿತ್ತ ಪಕ್ಷದ ಕಚೇರಿಗೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡರನ್ನು, ವ್ಯಕ್ತಿಯೊಬ್ಬ ರೂಂ ಒಳಗೆ ಕೂಡಿಹಾಕಿ ಬೀಗ ಜಡಿದು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ವೈ.ಘೋರ್ಪಡೆ ಮತ್ತು ಬಸವರಾಜ ರಾಯರೆಡ್ಡಿ ಸುದ್ದಿಗೋಷ್ಠಿ ನಡೆಸಲು, ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದರು.
ಮಂಡ್ಯ ರಾಜಕೀಯಕ್ಕೆ ಹೊಸ ಜೋಡೆತ್ತುಗಳ ಆಗಮನ!
ಆ ವೇಳೆ, ವ್ಯಕ್ತಿಯೊಬ್ಬ, ಅವಾಚ್ಯ ಶಬ್ದಗಳಿಂದ ಪಕ್ಷ ಮತ್ತು ಪಕ್ಷದ ಮುಖಂಡರನ್ನು ನಿಂದಿಸಿ, ಘೋಷಣೆಯನ್ನು ಕೂಗುತ್ತಾ, ಕಚೇರಿಯ ಶೆಟರ್ ಅನ್ನು ಎಳೆದು, ಬೀಗ ಜಡಿದು ಪರಾರಿಯಾಗಿದ್ದಾನೆ.
ವಿಷಯ ತಿಳಿದು ಕಚೇರಿಯತ್ತ ಆಗಮಿಸಿದ ಸ್ಥಳೀಯ ಕಾಂಗ್ರೆಸ್ ಮುಖಂಡರು, ಶೆಟರ್ ತೆಗೆದ ನಂತರ, ಉಗ್ರಪ್ಪ ಸುದ್ದಿಗೋಷ್ಠಿಯನ್ನು ಮುಂದುವರಿಸಿದ್ದಾರೆ.
"ಗಲಾಟೆ ಮಾಡಿದ ವ್ಯಕ್ತಿ, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಆನಂದ್ ಸಿಂಗ್ ಕಡೆಯವನು. ಏಕಾಏಕಿ ಬಂದು, ನಮ್ಮ ಪಕ್ಷದ ವಿರುದ್ದ ಘೋಷಣೆಯನ್ನು ಕೂಗಿ, ಬೀಗ ಜಡೆದು ಹೋಗಿದ್ದಾನೆ" ಎಂದು ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಡಿಸೆಂಬರ್ ಐದರಂದು ನಡೆಯಲಿರುವ ಹದಿನೈದು ಕ್ಷೇತ್ರಗಳ ಅಸೆಂಬ್ಲಿ ಉಪಚುನಾವಣೆಯಲ್ಲಿ ವಿಜಯನಗರ ಕೂಡಾ ಒಂದು. ಬಿಜೆಪಿ ಅಭ್ಯರ್ಥಿಯಾಗಿ ಆನಂದ್ ಸಿಂಗ್, ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ.ವೈ. ಘೋರ್ಪಡೆ ಮತ್ತು ಜೆಡಿಎಸ್ಸಿನಿಂದ ಎನ್.ಎಂ.ನಬಿ ಕಣದಲ್ಲಿದ್ದಾರೆ.