ವಿಜಯನಗರ ಜಿಲ್ಲೆ ರಚನೆ: ರೆಡ್ಡಿ-ರಾಮುಲು ಬಳಗದಲ್ಲಿ ಬಿರುಕು?
ಬಳ್ಳಾರಿ, ಡಿಸೆಂಬರ್ 2: ಒಂದು ಕಾಲದಲ್ಲಿ ಗಣಿನಾಡು ಅಂದರೆ ಸಾಕು ಒಂದುಕ್ಷಣ ಎಲ್ಲರ ಮನದಲ್ಲಿ ರೆಡ್ಡಿ ಸಾಮ್ರಾಜ್ಯ ಕಣ್ಮುಂದೆ ಬರುತ್ತಿತ್ತು. ಯಾವಾಗ ಅಕ್ರಮ ಗಣಿಗಾರಿಕೆ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಬೃಹತ್ ಪಾದಯಾತ್ರೆ ನಡೆಸಿ ಜನಾರ್ಧನ ರೆಡ್ಡಿಯವರನ್ನು ಜೈಲಿಗೆ ಹೋಗುವಂತೆ ಮಾಡಿದರೋ ಅಂದಿನಿಂದ ರೆಡ್ಡಿ ಹಿಡಿತ ಕಡಿಮೆಯಾಗಲಾರಂಭಿಸಿತು.
ಆದರೆ, ಅದಾದ ಬಳಿಕವು ರೆಡ್ಡಿ ಬ್ರದರ್ಸ್ ಜತೆ ಬಿ.ಶ್ರೀರಾಮುಲು ಇದ್ದಿದ್ದರಿಂದ ಸೋಮಶೇಖರರೆಡ್ಡಿ ಮತ್ತು ಕರುಣಾಕರ ರೆಡ್ಡಿ ತಮ್ಮ ಅಣ್ಣ ಜನಾರ್ಧನ ರೆಡ್ಡಿ ಸ್ಥಾನದಲ್ಲಿ ರಾಮುಲು ಅವರನ್ನು ನೋಡುತ್ತಿದ್ದರು.
ವಿಜಯನಗರಕ್ಕೆ ಕಂಪ್ಲಿ ಸೇರಿಸಲು ಆಗ್ರಹ; ಸಚಿವ ಶ್ರೀರಾಮುಲು ಹೇಳುವುದೇನು?
ಆದರೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಮುಲು ಮತ್ತು ರೆಡ್ಡಿ ಬಳಗದಲ್ಲಿ ಬಿರುಕು ಮೂಡಿದೆಯಾ ಎಂಬ ಪ್ರಶ್ನೆ ಮೂಡಿದೆ. ಗಣಿ ಜಿಲ್ಲೆ ಬಳ್ಳಾರಿಯು ರೆಡ್ಡಿಗಳ ಮೂಲಕ ದೇಶದಲ್ಲಿಯೇ ಗುರುತಿಸಿಕೊಳ್ಳುವಂತಾಗಿತ್ತು. ಆದರೀಗ ದಿನೇ ದಿನೇ ರೆಡ್ಡಿಗಳ ಪಾರುಪತ್ಯ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದೆ. ಅದರಲ್ಲೂ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗವಾದ ಮೇಲಂತೂ ಈ ಸಂಶಯ ರಾಜಕೀಯ ವಲಯದಲ್ಲಿ ಮತ್ತಷ್ಟು ಜೋರಾಗಿದೆ. ಆದರೆ, ಇದರೆಲ್ಲದರ ನಡುವೆಯೂ ರಾಮುಲು ಹಾಗೂ ರೆಡ್ಡಿ ಬ್ರದರ್ಸ್ ಜತೆಗಿದ್ದರೇ ಯಾರೂ ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂಬ ಮಾತೊಂದಿತ್ತು.
ವಿಜಯನಗರ ಜಿಲ್ಲೆ ರಚನೆ ವಿರೋಧಿಸಿದ್ದ ಸಚಿವ ಶ್ರೀರಾಮುಲು
ಆದರೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಬ್ರದರ್ಸ್ ಮತ್ತು ರಾಮುಲು ನಡುವೆ ಬಿರುಕು ಉಂಟಾಗಿದೆ. ಈ ಹಿಂದೆ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿದ್ದ ಸಚಿವ ಶ್ರೀರಾಮುಲು ತಮ್ಮ ನಡೆ ಬದಲಿಸಿ, ವಿಜಯನಗರ ಜಿಲ್ಲೆ ರಚನೆ ಪರ ಬ್ಯಾಟ್ ಬೀಸಿದ್ದೇ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾಗಿದೆ. ಇದರಲ್ಲಿ ಶ್ರೀರಾಮುಲು ಅವರು ಸಚಿವ ಆನಂದ್ ಸಿಂಗ್ ಅವರೊಂದಿಗೆ ರಾಜಕೀಯ ಒಪ್ಪಂದಕ್ಕೆ ಒಳಗಾಗಿ ನೂತನ ಜಿಲ್ಲೆ ರಚನೆಗೆ ಕೈ ಜೋಡಿಸಿದರು ಎಂಬ ಆರೋಪ ಕೇಳಿ ಬಂದಿದೆ. ಇದುವೇ ರೆಡ್ಡಿ ಬ್ರದರ್ಸ್ ಮುನಿಸಿಗೆ ಕಾರಣವಾಗಿದೆ.
ಒಡಹುಟ್ಟಿದ ಅಣ್ಣ-ತಮ್ಮಂದಿರಂತೆ ಇದ್ದರು
ಅಂದುಕೊಂಡ ಹಾಗೇ ಸಚಿವ ಶ್ರೀರಾಮುಲು ಒಂದು ವೇಳೆ ವಿಜಯನಗರ ಜಿಲ್ಲೆ ರಚನೆ ವಿಚಾರದಲ್ಲಿ ತಮ್ಮ ನಿಲುವನ್ನು ಬದಲಿಸಿದಿದ್ದರೆ ರೆಡ್ಡಿ ಬ್ರದರ್ಸ್ ಕುಟುಂಬದ ಅಸಮಾಧಾನಕ್ಕೆ ಕಾರಣವಾಗುತ್ತಿರಲಿಲ್ಲ. ಈ ಹಿಂದೆ ಹೇಗೆ ಒಡಹುಟ್ಟಿದ ಅಣ್ಣ-ತಮ್ಮಂದಿರಂತೆ ಇದ್ದರೋ ಹಾಗೇ ಕೂಡ ಇರುತ್ತಿದ್ದರು. ಆದರೆ, ವಿಜಯನಗರ ಜಿಲ್ಲೆ ರಚನೆಯಿಂದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ರೆಡ್ಡಿ ಪಾರುಪತ್ಯ ಪೂರ್ತಿ ತೆರೆಮರೆಗೆ ಸರಿಯುತ್ತಿರುವುದರಿಂದ ರೆಡ್ಡಿ ಬ್ರದರ್ಸ್ ಸಿಟ್ಟಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಖಾತೆ ಹಂಬಲ
ಅಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿರುವ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಬಳ್ಳಾರಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಸೇರ್ಪಡೆ ವಿಚಾರವನ್ನು ವಿರೋಧಿಸಿದ್ದಾರೆ. ಇದು, ಈಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಮೊಳಕಾಲ್ಮೂರು ಶಾಸಕರಾಗಿರುವ ಶ್ರೀರಾಮುಲು ಹೇಗಾದರೂ ಮಾಡಿ ಮೊಳಕಾಲ್ಮೂರನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿ, ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಖಾತೆ ಪಡೆಯಬೇಕೆಂಬ ಹಂಬಲ ಹೊಂದಿದ್ದಾರೆ. ಇತ್ತ ಆಡಳಿತ ಪಕ್ಷದ ಅದರಲ್ಲೂ ತಮ್ಮನಂತಿರುವ ಸೋಮಶೇಖರರೆಡ್ಡಿ ವಿರೋಧ ವ್ಯಕ್ತಪಡಿಸಿರುವುದು ಹೊಸ ತಲೆನೋವಾಗಿ ಪರಿಣಮಿಸಿದೆ.
Recommended Video
ಜರ್ನಾರ್ಧನ ರೆಡ್ಡಿ ಮಧ್ಯ ಪ್ರವೇಶಿಸುವರೇ
ಇನ್ನು ಇದನ್ನು ವಿರೋಧ ಪಕ್ಷದವರು ಹೇಗೆ ಎನ್ಕ್ಯಾಷ್ ಮಾಡಿಕೊಳ್ಳಬಲ್ಲರು ಎಂಬ ಹೊಸ ಟೆನ್ಯನ್ ಶ್ರೀರಾಮುಲು ಅವರಿಗೆ ತಂದಿದೆ. ಸರ್ಕಾರವು ಸಚಿವ ಆನಂದ ಸಿಂಗ್ ಆಶಯದಂತೆ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿದೆ.
ಆದರೆ, ಅಣ್ಣ ತಮ್ಮಂದಿರಂತೆ ಇದ್ದ ಶ್ರೀರಾಮುಲು ಮತ್ತು ರೆಡ್ಡಿ ಬ್ರದರ್ಸ್ ಕುಟುಂಬದಲ್ಲಿ ಬಿರುಕನ್ನು ತಂದೊಡ್ಡಿದೆ. ಇದು, ಮುಂದೆ ಯಾವ ಹಾದಿ ಪಡೆಯಬಹುದು. ಒಂದು ವೇಳೆ ಷರತ್ತು ಬದ್ಧ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಜರ್ನಾರ್ಧನ ರೆಡ್ಡಿ ಅವರು ಮಧ್ಯ ಪ್ರವೇಶಿಸಿ ಸ್ನೇಹಿತ ಶ್ರೀರಾಮುಲು ಮತ್ತು ಕುಟುಂಬದ ಸದಸ್ಯರ ಮನಸ್ತಾಪವನ್ನು ತಣ್ಣಗಾಗಿಸುವರೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.