ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡಿ; ವೈರಲ್ ಆಗಿದೆ ಅಭಿಮಾನಿಗಳ ಈ ಪೋಸ್ಟ್
ಬಳ್ಳಾರಿ, ಜುಲೈ 17: ಶಾಸಕರಿಗೆ ವಿಪ್ ಜಾರಿಗೊಳಿಸಿ, ಅವರನ್ನು ಸಿಲುಕಿಸುವ ಯತ್ನದಲ್ಲಿದ್ದ ಮೈತ್ರಿ ಸರ್ಕಾರಕ್ಕೆ ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಹಿನ್ನಡೆ ಉಂಟು ಮಾಡಿದೆ. ಆದರೆ ಸುಪ್ರೀಂ ಕೋರ್ಟ್ ತೀರ್ಪು ಬರುತ್ತಿದ್ದಂತೆ ಬಿಜೆಪಿ ನಾಯಕರಲ್ಲಿ ಸರ್ಕಾರ ರಚನೆಯ ಆಸೆ ಗರಿಗೆದರಿದೆ.
ಮೈತ್ರಿ ಸರ್ಕಾರ ಪತನವಾಗುತ್ತದೆ, ಬಿಜೆಪಿ ಮತ್ತೆ ಆಡಳಿತಕ್ಕೆ ಬರುತ್ತದೆ ಎಂಬ ಹುಮ್ಮಸ್ಸಿನಲ್ಲಿರುವ ಬಿಜೆಪಿ ಅಭಿಮಾನಿಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಪೋಸ್ಟ್ ಗಳನ್ನು ಹಾಕಲು ಶುರು ಮಾಡಿದ್ದಾರೆ. ಇದರ ಜೊತೆ ಜೊತೆಗೇ, ಸರ್ಕಾರ ರಚನೆಯಾದರೆ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡುವಂತೆ ಅಭಿಮಾನಿಗಳ ಪೋಸ್ಟ್ ಅಭಿಯಾನ ಕೂಡ ವೈರಲ್ ಆಗುತ್ತಿದೆ.
ಕ್ಲೈಮ್ಯಾಕ್ಸ್ ಹಂತಕ್ಕೆ ಕರ್ನಾಟಕದ ಶಾಸಕರ ರಾಜೀನಾಮೆ ಪ್ರಹಸನ: ಸಾಧ್ಯಾಸಾಧ್ಯತೆಗಳು
ಬಳ್ಳಾರಿಯಲ್ಲಿ ಶಾಸಕ ಶ್ರೀರಾಮುಲು ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅಭಿಯಾನ ಶುರುವಾಗಿದ್ದು, ನಾಳೆ ರಾಜ್ಯ ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಮಾಡಲು ವಿಫಲವಾಗುತ್ತದೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎನ್ನುವ ವಿಶ್ವಾಸವನ್ನು ಪೋಸ್ಟ್ ಗಳ ಮೂಲಕ ಬಿಜೆಪಿಗರು ವ್ಯಕ್ತಪಡಿಸಿದ್ದಾರೆ.
2018ರ ವಿಧಾನಸಭಾ ಚುನಾವಣೆ ಸಂದರ್ಭ ಸಂಸದರಾಗಿದ್ದ ಶ್ರೀರಾಮುಲು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆಗ ರಾಜ್ಯದ ಪ್ರಭಾವಿ ಬಿಜೆಪಿ ನಾಯಕರಾಗಿರುವ ಶ್ರೀರಾಮುಲು ಅವರನ್ನು ಡಿಸಿಎಂ ಮಾಡುವಂತೆ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿಮಾನಿಗಳ ಆಸೆ ಕಮರಿತ್ತು.
ಈಗಲೂ ನಾವು ವಿಪ್ ಜಾರಿಗೊಳಿಸಬಹುದು, ಸುಪ್ರೀಂ ತೀರ್ಪಿನ ಬಗ್ಗೆ ಡಿಕೆಶಿ
ಇದೀಗ ಸುಪ್ರೀಂ ಕೋರ್ಟ್ ತೀರ್ಪು ಅಭಿಮಾನಿಗಳ ಕನಸನ್ನು ಮತ್ತೆ ಚಿಗುರಿಸಿದೆ. ಶಾಸಕ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡಲು ಎಲ್ಲಾ ಗ್ರೂಪ್ ಗಳಿಗೆ ಶೇರ್ ಮಾಡುವಂತೆ ಸಂದೇಶ ಕಳುಹಿಸಲಾಗುತ್ತಿದೆ. ಎಲ್ಲೆಲ್ಲೂ ಈ ಪೋಸ್ಟ್ ಗಳದ್ದೇ ಹವಾ ಜೋರಾಗಿದೆ.