ಮತ್ತೊಂದು ಜುಬಿಲಿಯಂಟ್ ಆಗಲಿದೆಯಾ ಬಳ್ಳಾರಿಯ ಜಿಂದಾಲ್...
ಬಳ್ಳಾರಿ, ಜೂನ್ 06: ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮುಂದುವರೆದಿವೆ. ಇಂದು ಮೂರು ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಮೂರು ಪ್ರಕರಣಗಳು ಜಿಂದಾಲ್ ಗೆ ಸಂಬಂಧಿಸಿದ್ದೇ ಆಗಿದೆ.
Recommended Video
ಈ ವಿಷಯ ತಿಳಿಯುತ್ತಿದ್ದಂತೆ ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ. ಈ ಮೊದಲು ಮೈಸೂರು ಜಿಲ್ಲೆಯ ಜುಬಿಲಿಯಂಟ್ ಕಾರ್ಮಿಕರಲ್ಲಿ ಪತ್ತೆಯಾದ ಕೊರೊನಾ ವೈರಸ್ ಸೋಂಕು ಇಡೀ ಜಿಲ್ಲೆಯನ್ನೇ ಅಲ್ಲೋಲ ಕಲ್ಲೋಲ ಎಂಬಂತೆ ಮಾಡಿತ್ತು. ಅದೇ ರೀತಿ ಈಗ ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ಇರುವ ರಾಜ್ಯದ ನಂಬರ್ ಒನ್ ಉಕ್ಕು ಕಾರ್ಖಾನೆಯಲ್ಲಿ ಸೋಂಕು ಹರಡಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲು ಹಾಕಿದೆ.
ರಾಜ್ಯದ ಅತೀ ದೊಡ್ಡ ಗಣಿ ಕಂಪನಿಯಲ್ಲಿ ಕಾಣಿಸಿಕೊಂಡ ಸೋಂಕು
ಎರಡು ದಿನಗಳ ಹಿಂದೆ ಜಿಂದಾಲ್ ನೌಕರನಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿತ್ತು. ಬಳಿಕ ನಿನ್ನೆಯೂ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಈಗ ಒಂದೇ ದಿನ ಮೂರು ಪ್ರಕರಣಗಳು ದಾಖಲಾಗಿವೆ. ನಿನ್ನೆ ಕಂಪನಿಯ 42 ವರ್ಷದ ಉದ್ಯೋಗಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಜಿಂದಾಲ್ ನಲ್ಲಿ ಮೊದಲು ಕೊರೊನಾ ವೈರಸ್ ದೃಢವಾದ ನೌಕರನ ಮನೆಯ ಮೂವರು ಸದಸ್ಯರಿಗೂ ಸೋಂಕು ದೃಢವಾಗಿದ್ದು, ಜಿಂದಾಲ್ ಗೆ ಸಂಬಂಧಪಟ್ಟಂತೆ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ ಆಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 57ಕ್ಕೆ ಏರಿಕೆ ಆಗಿದೆ. ಸೋಂಕಿತರನ್ನು ಬಳ್ಳಾರಿಯ ಕೊವೀಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.