ಕುರಿ, ಕುರಿಗಾಹಿಗಳನ್ನು ರಕ್ಷಿಸಿದ ಸೂಗನಗೌಡಗೆ ಶೌರ್ಯ, ಕೃಷ್ಣೋಜಿಗೆ ವಿಶಿಷ್ಟ ಸೇವಾ ಪ್ರಶಸ್ತಿ
ಬಳ್ಳಾರಿ, ಜನವರಿ 25: "ಸೇವೆಗೆ ಸೇರಿದ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೇಲಧಿಕಾರಿಗಳು ಸೂಚಿಸಿದ ಜವಾಬ್ದಾರಿಗಳನ್ನು ಹಾಗೂ ನನ್ನ ಕರ್ತವ್ಯವನ್ನು ಸಮರ್ಪಕವಾಗಿ ಮತ್ತು ಶ್ರದ್ಧೆಯಿಂದ ನಿರ್ವಹಿಸಿದ್ದಕ್ಕಾಗಿ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಬಂದಿದೆ" ಎಂದು ಅಗ್ನಿಶಾಮಕ ಚಾಲಕ ಸೂಗನಗೌಡ ಹೇಳಿದರು.
ಬರೀ ಸೂಗನಗೌಡ ಅಂತ ಹೆಸರು ಹೇಳಿದರೆ ಯಾರಿಗೂ ಗೊತ್ತಾಗುವುದಿಲ್ಲ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮದ ಹತ್ತಿರ ಕೃಷ್ಣ ನದಿಯಲ್ಲಿ 2018 ಆಗಸ್ಟ್ 29ರಂದು ಸುಮಾರು 5 ಲಕ್ಷ ಕ್ಯೂಸೆಕ್ಸ್ ನೀರಿನ ಪ್ರವಾಹದಲ್ಲಿ 6 ಜನ ಕುರಿಗಾಹಿಗಳ ರಕ್ಷಣೆ ಮತ್ತು 165 ಕುರಿಗಳ ರಕ್ಷಣೆ ಮಾಡುವ ಮೂಲಕ ನಾಡಿನ ಗಮನ ಸೆಳೆದಿದ್ದ ಬಳ್ಳಾರಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕ ಚಾಲಕ ಸೂಗನಗೌಡ.
ಕರ್ನಾಟಕದ ಇಬ್ಬರು ಬಾಲಕರಿಗೆ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರಶಸ್ತಿ
ರಾಷ್ಟ್ರಪತಿಯವರಿಂದ ಶೌರ್ಯ ಪ್ರಶಸ್ತಿ ಪದಕ ಘೋಷಣೆ
ಈ ಸೂಗನಗೌಡ ಅವರಿಗೆ 72ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ 2021ನೇ ಸಾಲಿನಲ್ಲಿ ಗೌರವಾನ್ವಿತ ಭಾರತ ಸರ್ಕಾರದ ಘನತೆವೆತ್ತ ರಾಷ್ಟ್ರಪತಿಯವರಿಂದ ಶೌರ್ಯ ಪ್ರಶಸ್ತಿ ಪದಕ ಘೋಷಣೆಯಾಗಿದೆ.
ಪ್ರಶಸ್ತಿ ಸಂದಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ ಅಗ್ನಿಶಾಮಕ ಚಾಲಕ ಸೂಗನಗೌಡ ಅವರು, ನನ್ನ ಕರ್ತವ್ಯವನ್ನು ಮತ್ತಷ್ಟು ಶ್ರದ್ಧೆಯಿಂದ ಹಾಗೂ ಉತ್ಸಾಹದಿಂದ ಮಾಡಲು ನೆರವಾಗಿದೆ ಎಂದರು. ಭಾರತ ಅತ್ಯುನ್ನತ ಪ್ರಶಸ್ತಿ ದೊರೆತಿರುವುದು ತುಂಬಾ ಸಂತೋಷ ಸಂಗತಿ. ಕರ್ತವ್ಯದ ಸಮಯದಲ್ಲಿ ಸದಾ ನೆರವು ನೀಡಿದ ಎಲ್ಲಾ ಮೇಲಾಧಿಕಾರಿಗಳಿಗೆ, ಸಿಬ್ಬಂದಿ ವರ್ಗಕ್ಕೆ ಅಭಾರಿ ಎಂದು ತಿಳಿಸಿದರು.
ತಮ್ಮ ಜೀವದ ಹಂಗುತೊರೆದು ರಕ್ಷಣೆ
2019ರ ಮಾ.19ರಂದು ಧಾರವಾಡ ನಗರದಲ್ಲಿ ಬಹುಮಹಡಿ ಕಟ್ಟಡ ಕುಸಿತದ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಶ್ರೇಯಸ್ಸು ಇವರದ್ದು. ಸೂಗನಗೌಡ ಅವರು 2019 ಆ.11ರಂದು ಗಂಗಾವತಿ ತಾಲ್ಲೂಕಿನ ವಿರುಪಾಪುರಗಡ್ಡೆಯಲ್ಲಿ ತುಂಗಭದ್ರ ನದಿ ಪ್ರವಾಹದಲ್ಲಿ ಸಿಲುಕಿದ ಜನರ ಪ್ರಾಣರಕ್ಷಣೆ ಮಾಡಲು ತಮ್ಮ ಜೀವದ ಹಂಗುತೊರೆದು ರಕ್ಷಣೆ ಮಾಡುವಾಗ ರಬ್ಬರ್ ಬೋಟ್ ಮುಳಗಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಸುಮಾರು 2 ಕಿ.ಮೀ ದೂರದಲ್ಲಿ ನೀರಿನ ಪ್ರವಾಹದಿಂದ ಮೇಲೆ ಎದ್ದು ದಡ ಸೇರಿದ್ದನ್ನು ಸ್ಮರಿಸಬಹುದು.
ಬಳ್ಳಾರಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ
ಅಗ್ನಿಶಾಮಕ ಚಾಲಕ ಸೂಗನಗೌಡ ಅವರ ಈ ಒಂದು ಉತ್ತಮ ಕಾರ್ಯಕ್ಕಾಗಿ ರಾಷ್ಟ್ರಪತಿಗಳು 2021ನೇ ಸಾಲಿನ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶೌರ್ಯ ಪ್ರಶಸ್ತಿ ಪದಕವನ್ನು ಘೊಷಿಸಿದ್ದಾರೆ ಎಂದು ಬಳ್ಳಾರಿ ಪ್ರಾದೇಶಿಕ ಅಗ್ನಿಶಾಮಕ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಚಾಲಕ ಸೂಗನಗೌಡ ಅವರು ರಾಯಚೂರು ತಾಲೂಕಿನ ನಾಗಲಾಪುರ ಗ್ರಾಮದವರಾಗಿದ್ದು, ಇವರು 2016, ಮೇ 18ರಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಅಗ್ನಿಶಾಮಕ ಚಾಲಕರಾಗಿ ನೇಮಕಗೊಂಡು ಬಳ್ಳಾರಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಠಾಣಾಧಿಕಾರಿ ಜಿ.ಕೃಷ್ಣೋಜಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾಪದಕ:
ಕೊಪ್ಪಳದ ಅಗ್ನಿಶಾಮಕ ಠಾಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಜಿ.ಕೃಷ್ಣೋಜಿ ಅವರು ರಾಷ್ಟ್ರಪತಿಯವರ ವಿಶಿಷ್ಠ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ. ಶ್ರೀಕೃಷ್ಣೋಜಿ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕಾರಿಗನೂರು ಗ್ರಾಮದವರಾಗಿದ್ದು, ಇವರ ಸೇವಾ ಅವಧಿಯಲ್ಲಿ 17 ಬಾರಿ ಉತ್ತಮ ಕಾರ್ಯಕ್ಕಾಗಿ ನಗದು ಬಹುಮಾನ ಇಲಾಖೆಯಿಂದ ಪಡೆದಿರುತ್ತಾರೆ.
ಬಳ್ಳಾರಿ ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಸ್.ರವಿಪ್ರಸಾದ್ ಅವರು, ದೇಶದ ಪರಮೋಚ್ಚ ಪ್ರಶಸ್ತಿ ದೊರೆತಿದೆ. ಇವರ ಈ ಕಾರ್ಯ, ಸಾಹಸ ಇತರರಿಗೆ ಮಾದರಿ. ಈ ಸಾಲಿನಲ್ಲಿ ಅಗ್ನಿ ಶಾಮಕ ಮತ್ತು ತುರ್ತು ಸೇವೆ ಇಲಾಖೆ ರಾಜ್ಯಾದ್ಯಂತ 7 ಜನರಿಗೆ ರಾಷ್ಟಪತಿಗಳ ಪ್ರಶಸ್ತಿ ದೊರೆತಿದೆ. ನಮ್ಮ ವಲಯದ ಇಬ್ಬರಿಗೆ ಶೌರ್ಯ ಪ್ರಶಸ್ತಿ ನೀಡಿರುವುದು ತುಂಬಾ ಖುಷಿ ಮತ್ತು ಹೆಮ್ಮೆಯ ಸಂಗತಿ ಎಂದರು.