ರಾಜಕೀಯ ಹೈಡ್ರಾಮಾ ವಿರುದ್ಧ ಬಳ್ಳಾರಿ ರೈತರ ಆಕ್ರೋಶ
ಬಳ್ಳಾರಿ, ಜುಲೈ 23: ರಾಜ್ಯ ರಾಜಕಾರಣದಲ್ಲಿನ ಹೈಡ್ರಾಮಾ ವಿರುದ್ಧ ಬಳ್ಳಾರಿ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮಳೆ ಇಲ್ಲ. ಬೆಳೆಗೆ ನೀರಿಲ್ಲ, ಡ್ಯಾಂಗಳಲ್ಲಿ ನೀರಿಲ್ಲದೆ ರೈತರು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಮೂರೂ ಪಕ್ಷಗಳು ವಿಧಾನಸೌಧದಲ್ಲಿ ಕಿತ್ತಾಡುತ್ತಾ ಕಾಲಹರಣ ಮಾಡುತ್ತಿವೆ. ಮೈತ್ರಿ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿಯವರು ಕಿತ್ತಾಡುತ್ತಿದ್ದರೆ, ಇತ್ತ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ -ಜೆಡಿಎಸ್ ಪ್ಲಾನ್ ಮಾಡುತ್ತಿವೆ. ಇದಕ್ಕಾಗಿ ನಿನ್ನೆ ರಾತ್ರಿ 12ರವರೆಗೂ ಸದನ ನಡೆಸಿದರು. ಅದೇ ಆಸಕ್ತಿಯನ್ನು ರಾಜ್ಯದ ಅಭಿವೃದ್ಧಿ, ರೈತರ ಹೋರಾಟಗಳ ಬಗ್ಗೆ ತೋರಿದ್ದರೆ ನಮ್ಮ ರಾಜ್ಯ ಹೀಗಿರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಕುರ್ಚಿಯೊಂದಿಗೆ ಅಣುಕು ಪ್ರತಿಭಟನೆ
ಈಗ ಸದನದಲ್ಲಿ ಮೋಡ ಬಿತ್ತನೆ ಬಗ್ಗೆ ಚರ್ಚೆ ಆಗಬೇಕಿತ್ತು. ಈ ಸಮಯದಲ್ಲಿ ಹೈಡ್ರಾಮಾ ನಡೆಯುತ್ತಿದೆ. ನಿಮ್ಮ ಆಟಗಳನ್ನು ಕಾರ್ಟೂನ್ ರೀತಿ ಟಿ.ವಿ.ಯಲ್ಲಿ ನೋಡುವಂತೆ ಆಗಿದೆ ಎಂದು ವ್ಯಂಗ್ಯ ಮಾಡಿದರು.
ರೈತರ ಸಮಸ್ಯೆಗೆ ಒಂದು ದಿನವೂ ಹೀಗೆ ಚರ್ಚೆ ನಡೆಸಲಿಲ್ಲ. ಎಲ್ಲರೂ ರಾಜಿನಾಮೆ ಕೊಟ್ಟು ಮನೆಗೆ ಹೋಗಿ ಎಂದು ತಾಕೀತು ಮಾಡಿದರು.