ಬಳ್ಳಾರಿ: ಮೆಣಸಿನಕಾಯಿ ಬೀಜಕ್ಕಾಗಿ ರೈತರ ಪ್ರತಿಭಟನೆ
ವಿಜಯನಗರ, ಜೂನ್ 21: ಮೆಣಸಿನಕಾಯಿ ಬೀಜ ನೀಡಬೇಕೆಂದು ರೈತರು ತೋಟಗಾರಿಕೆ ಇಲಾಖೆಗೆ ಮುತ್ತಿಗೆ ಹಾಕಿದ ಘಟನೆ ಬಳ್ಳಾರಿಯಲ್ಲಿ ಸೋಮವಾರ ನಡೆದಿದೆ.
ಬಳ್ಳಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಇಲ್ಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಕಳೆದ ಜೂ.14ರಂದು ಮಣಸಿಕಾಯಿ ಬೀಜಕ್ಕಾಗಿ ರೈತರು ಮುಗಿಬಿದ್ದ ಸಂದರ್ಭದಲ್ಲಿ ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದು ಇನ್ನು ಒಂದು ವಾರದಲ್ಲಿ ಮೆಣಸಿನ ಬೀಜ ತರಿಸುವುದಾಗಿ ಅಧಿಕಾರಿಗಳು ಭರವಸೆಯನ್ನು ನೀಡಿದ್ದರು.
ಅದರಂತೆ ಸೋಮವಾರ ರೈತರು ತೋಟಗಾರಿಕೆ ಇಲಾಖೆ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. "ಬಳ್ಳಾರಿಯ ಭಾಗದಲ್ಲಿ ಸಿಜೆಂಟಾ ಕಂಪನಿಯ ಬೀಜವು ಉತ್ತಮ ರೀತಿಯಲ್ಲಿ ಫಸಲು ಬರುವುದರಿಂದ ಅದೇ ಕಂಪನಿ ಬೀಜವನ್ನು ನೀಡಬೇಕೆಂದು,'' ಒತ್ತಾಯಿಸುತ್ತಿದ್ದರು.
ನಮಗೆ ಬೀಜ ಕೊಡುವವರೆಗೆ ನಾವು ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಈ ಹಿಂದೆ ಬೀಜ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಬೀಜಗಳು ಲಭ್ಯವಿಲ್ಲ ಅಂತ ಹೇಳುತ್ತಿದ್ದಾರೆ. ಹೀಗಾದರೆ ನಾವು ಬದುಕುವುದು ಹೇಗೆ? ಕೃಷಿಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದೇವೆ ಎಂದು ರೈತರು ಅಳಲು ತೊಡಿಕೊಂಡರು.
ಬೀಜಗಳು ಲಭ್ಯವಿಲ್ಲ ಎಂದು ಹೇಳುತ್ತಿದ್ದ ಹಾಗೆ ರೈತರು ರೊಚ್ಚಿಗೆದ್ದು, ಇಲ್ಲಿ ಬೀಜ ವಿತರಣೆ ಮಾಡದೇ ಹೋದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪರಿಸ್ಥಿತಿ ಕೈ ಮೀರುತ್ತದೆ ಎಂದು ಅರಿತ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಮುಂದೆ ಬಂದಾಗ ಇಲಾಖೆ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸಿಜೆಂಟಾ ಕಂಪನಿ ಸಿಬ್ಬಂದಿಗಳು ಗುರುವಾರ ಬೀಜ ನೀಡುವುದಾಗಿ ತಿಳಿಸಿದರು. ಆದರೆ ಇದಕ್ಕೆ ಒಪ್ಪದ ರೈತರು ಎಲ್ಲಿ? ಯಾವಾಗ? ಹೇಗೆ ಬೀಜ ನೀಡುತ್ತೀರಾ? ಎಂದು ಪ್ರಶ್ನೆ ಮಾಡಿದರು.
ಕೊನೆಗೂ ರೈತರನ್ನು ಮನವೊಲಿಸಿ ಗುರುವಾರ ಪ್ರತಿ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಲಭ್ಯವಾಗುತ್ತವೆ ಎಂದು ಭರವಸೆ ನೀಡಿದ ಮೇಲೆ ರೈತರು ನಿರ್ಗಮಿಸಿದರು.
ಆದರೆ ಪತ್ರಕರ್ತರಿಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಅಥವಾ ಬೈಟ್ ನೀಡಿಲ್ಲವಾದ್ದರಿಂದ ಗುರುವಾರ ಬೀಜ ಸಿಗುತ್ತದೆಯೇ ಎಂಬದನ್ನು ಕಾದು ನೋಡಬೇಕಿದೆ. ಕೇವಲ ಈ ಭರವಸೆ ರೈತರನ್ನು ವಾಪಸ್ ಕಳುಹಿಸುವುದಕ್ಕೆ ಮಾತ್ರ ಸೀಮೀತವಾಯಿತೇ ಎಂಬ ಪ್ರಶ್ನೆಯೂ ಮೂಡುತ್ತಿದೆ.