ಬಳ್ಳಾರಿ ಜಿಂದಾಲ್ ನಲ್ಲಿ ಫ್ಯಾನ್ ಸ್ಫೋಟಿಸಿ ಉದ್ಯೋಗಿ ಸಾವು
ಬೆಂಗಳೂರು, ಫೆಬ್ರವರಿ 03: ಬಳ್ಳಾರಿಯ ಜಿಂದಾಲ್ ಕಂಪನಿಯಲ್ಲಿ ಫ್ಯಾನ್ ಸ್ಫೋಟಿಸಿ ಉದ್ಯೋಗಿಯೊಬ್ಬ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿತೇಂದ್ರ ಚೌಧರಿ ಸಾವನ್ನಪ್ಪಿದ್ದು, ಉಳಿದ ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ದಾನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಂದಾಲ್ ಸ್ಟೀಲ್ ಕಾರ್ಖಾನೆಯಲ್ಲಿ ಫ್ಯಾನ್ ಇಂಪೆಲ್ಲರ್ ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಿಂಟರ್ ಪ್ಲಾಂಟ್ ವಿಭಾಗದ ಫ್ಯಾನ್ ಸರ್ವೀಸ್ ಮಾಡಿದ್ದ ಟೆಕ್ನೀಷಿಯನ್ ಪ್ರಾಯೋಗಿಕವಾಗಿ ರನ್ ಮಾಡಿದ್ದಾರೆ. ಈ ವೇಳೆ ಫ್ಯಾನ್ ಸ್ಫೋಟಗೊಂಡು ಕಬ್ಬಿಣದ ಉಪಕರಣಗಳು ಹಾರಿ ಉದ್ಯೋಗಿಗಳ ಮೇಲೆ ಬಿದ್ದಿವೆ. ಕಂಪನಿ ಉದ್ಯೋಗಿ ಜೀತೇಂದ್ರ ಚೌಧರಿ ತಲೆಗೆ ಗಂಭೀರ ಪೆಟ್ಟಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೀತೇಂದ್ರ ಚೌಧರಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮೂವರು ಟೆಕ್ನೀಷಿಯನ್ ಗಳಿಗೂ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಂದಾಲ್ ಕಂಪನಿಯ ಸಿಂಟರ್ ಫ್ಲಾಂಟ್ ವಿಭಾಗವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಅವಘಡ ಸಂಭವಿಸಿದೆ. ಈ ಹಿಂದೆ ಜಿಂದಾಲ್ ಉದ್ಯೋಗಿಯೊಬ್ಬರು ಇದೇ ರೀತಿ ಸಾವನ್ನಪ್ಪಿದ್ದರು. ಆದರೆ ಆ ಪ್ರಕರಣ ಹೊರಗೆ ಬರಲಿಲ್ಲ. ಪರಿಹಾರವೂ ನೀಡಿರಲಿಲ್ಲ. ಜೀತೇಂದ್ರ ಚೌಧರಿ ವಿಚಾರದಲ್ಲಿ ಅದೇ ಅನ್ಯಾಯ ಮರುಕಳಿಸಬಾರದು ಎಂದು ಹೆಸರು ಹೇಳಲು ಇಚ್ಛಿಸದ ಉದ್ಯೋಗಿಯೇ ಈ ಅವಘಡದ ಮಾಹಿತಿ ಹಂಚಿಕೊಂಡಿದ್ದಾರೆ.