ಹೊಸಪೇಟೆಯ ಜೆರಾಕ್ಸ್ ಅಂಗಡಿಯಲ್ಲೂ ಸಿಗುತ್ತಿದ್ದ ಕೊರೊನಾ ನೆಗೆಟಿವ್ ವರದಿ!
ವಿಜಯನಗರ, ಏಪ್ರಿಲ್ 21: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಬೇರೆ ರಾಜ್ಯಗಳಿಂದ ಬರುವವರಿಗೆ ಅಥವಾ ಬೇರೆ ರಾಜ್ಯಗಳಿಗೆ ಹೋಗುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯವಾಗಿದೆ.
ಹೊಸಪೇಟೆಯ ಜೆರಾಕ್ಸ್ ಅಂಗಡಿಯಲ್ಲಿ ನಕಲಿ ರಿಪೋರ್ಟ್ ತಯಾರಿ ಮಾಡಿಕೊಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಶಿವರಾಜ್ ಎನ್ನುವ ಆರೋಪಿಯನ್ನು ಹೊಸಪೇಟೆ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈತನು ಶಿವರಾಜ್ ಜೆರಾಕ್ಸ್ ಸೆಂಟರ್ನಲ್ಲಿ ನಕಲಿ ಕೊರೊನಾ ವರದಿಗಳನ್ನು ಮಾಡಿಕೊಡುತ್ತಿದ್ದ ಎನ್ನಲಾಗಿದ್ದು, ಹೊಸಪೇಟೆಯಿಂದ ನಾನಾ ಕಡೆ ತೆರಳುತ್ತಿದ್ದ ಪ್ರಯಾಣ ಮಾಡುವವರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಕಲಿ ಕೋವಿಡ್ ರಿಪೋರ್ಟ್ ವಿತರಿಸುತ್ತಿದ್ದ.
ರಾಜ್ಯ ಸರ್ಕಾರದ ಕೋವಿಡ್ ಪೋರ್ಟಲ್ ವಿಳಾಸಕ್ಕೆ ಹೋಗಿ ನೆಗೆಟಿವ್ ಬಂದಿರುವ ವ್ಯಕ್ತಿಗಳ ಐಡಿ ಬಳಸಿ, ಹೆಸರು ಬದಲು ಮಾಡಿ ನೆಗೆಟಿವ್ ಅಂತ ರಿಪೋರ್ಟ್ ಕೊಡುತ್ತಿದ್ದ.
ಹೊಸಪೇಟೆ ಟಿಎಚ್ಒ ಡಾ.ಭಾಸ್ಕರ್ ಅವರು ನೀಡಿದ ದೂರಿನ ಮೇಲೆ ಆರೋಪಿ ಶಿವರಾಜ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಂತರ ಈತನ ಜೆರಾಕ್ಸ್ ಅಂಗಡಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ.