ಬಳ್ಳಾರಿಯಲ್ಲಿ ಪಿಯು ವಿದ್ಯಾರ್ಥಿನಿಯರ ಆತ್ಮಹತ್ಯೆ ಯತ್ನ; ವಿದ್ಯಾರ್ಥಿನಿ ಸಾವು
ಬಳ್ಳಾರಿ, ಜುಲೈ 14: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ ಪರೀಕ್ಷೆಯಲ್ಲಿ ಫೇಲ್ ಆದ ಕಾರಣಕ್ಕೆ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದು, ಒಬ್ಬ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಹೊಸಪೇಟೆಯ ಅನಂತಶಯನಗುಡಿ ಸಮೀಪ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂದು ಬೆಳಿಗ್ಗೆ ಪರೀಕ್ಷೆ ಫಲಿತಾಂಶ ಬಂದಿದ್ದು, ಪರೀಕ್ಷೆಯಲ್ಲಿ ಇಬ್ಬರೂ ನಪಾಸಾಗಿದ್ದರು. ಹೀಗಾಗಿ ರೂಪ ಮತ್ತು ಶ್ರೇಯ ಎಂಬ ಇಬ್ಬರು ವಿದ್ಯಾರ್ಥಿನಿಯರು ಹೊಸಪೇಟೆಯಿಂದ ಜಿಂದಾಲ್ ಕಂಪನಿಗೆ ಹೊರಟಿದ್ದ ಗೂಡ್ಸ್ ರೈಲಿಗೆ ಅಡ್ಡ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೊಸಪೇಟೆಯ ಕೆ.ಎಸ್.ಪಿ.ಎಲ್.ಕಾಲೇಜಿನಲ್ಲಿ ಇವರು ಓದುತ್ತಿದ್ದರು.
ತಾಯಿ ಮನೆಗೆಲಸ ಮಾಡಿಕೊಂಡಿದ್ದ ಮನೆಯಲ್ಲಿ ಸೋಂಕು; ಉಡುಪಿ ವಿದ್ಯಾರ್ಥಿ ಆತ್ಮಹತ್ಯೆ
ಶ್ರೇಯಾ ಎಂಬ ವಿದ್ಯಾರ್ಥಿನಿಯ ತಲೆಗೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದು, ರೂಪಾ ಎಂಬ ವಿದ್ಯಾರ್ಥಿನಿಯ ಕೈ ಬೆರಳು ತುಂಡಾಗಿ ನಡುವಿಗೆ ಬಲವಾದ ಪೆಟ್ಟು ಬಿದ್ದಿದೆ. ಇಬ್ಬರು ವಿದ್ಯಾರ್ಥಿನಿಯರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು.
ರೂಪಾ (18) ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದು, ಶ್ರೇಯಾ ಎಂಬ ವಿದ್ಯಾರ್ಥಿನಿ ಪರಿಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿದುಬಂದಿದೆ.