ಬಳ್ಳಾರಿ: ಉದ್ಯೋಗದ ಭರವಸೆ ನೀಡಿ ಭೂಮಿ ವಶ; ಭೂಮಿಯೂ ಇಲ್ಲ, ಉದ್ಯೋಗವೂ ಇಲ್ಲ
ಬಳ್ಳಾರಿ, ಆಗಸ್ಟ್ 16: ಕೈಗಾರಿಕೆಗಳ ಉದ್ದೇಶಕ್ಕಾಗಿ ಸರಕಾರ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ರೈತರ ಭೂಮಿಯನ್ನ ವಶಪಡಿಸಿಕೊಂಡಿದೆ. ಕೆಐಎಡಿಬಿ ಮೂಲಕ ರೈತರಿಂದ ವಶಪಡಿಸಿಕೊಂಡ ಭೂಮಿಯಲ್ಲಿ ಇದುವರೆಗೆ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಇತ್ತ ಉದ್ಯೋಗವಿಲ್ಲ, ಆತ್ತ ಭೂಮಿಯೂ ಇಲ್ಲದಂತಾಗಿದೆ ರೈತರ ಪರಿಸ್ಥಿತಿ.
ಗಣಿನಾಡು ಬಳ್ಳಾರಿ ತಾಲೂಕಿನ ಕುಡುತಿನಿ, ವೇಣಿವೀರಾಪುರ, ಕೊಳಗಲ್ಲು ಗ್ರಾಮಗಳಲ್ಲಿ ಬ್ರಹ್ಮಿಣಿ ಸ್ಟೀಲ್ ಹಾಗೂ ಮಿತ್ತಲ್ ಕಂಪನಿಗಾಗಿ ರೈತರಿಂದ ಸುಮಾರು 10 ಸಾವಿರ ಎಕರೆ ಭೂಮಿಯನ್ನ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತು. ರೈತರು ತಮ್ಮ ಕುಟುಂಬಕ್ಕೆ ಉದ್ಯೋಗ ಸಿಗಬಹುದು ಎನ್ನುವ ಕಾರಣಕ್ಕೆ ಕಡಿಮೆ ದರದಲ್ಲಿಯೇ ಭೂಮಿ ನೀಡಿದ್ದಾರೆ. ಇದಕ್ಕೆ ಕೆಲವು ರೈತರು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಮಾಡುತ್ತಲೇ ಇದ್ದಾರೆ.
ರಾಯಚೂರು: ಹಟ್ಟಿ ಚಿನ್ನದ ಗಣಿಗೆ 75ರ ಹೊಳಪು
ಇನ್ನೂ ಈತ್ತ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಇದುವರೆಗೆ ಕೈಗಾರಿಕಾ ಸ್ಫಾಪನೆಯಾಗಿಲ್ಲ. ಈ ವಿಚಾರವನ್ನು ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗಂಭೀರವಾಗಿ ತೆಗೆದುಕೊಂಡಿದ್ದು, ಕೈಗಾರಿಕಾ ಸ್ಥಾಪನೆ ಮಾಡಲು 6 ತಿಂಗಳು ಗಡುವು ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಕಾಮಗಾರಿ ಸರಿಯಾದ ಸಮಯದಲ್ಲಿ ನಡೆಯಬೇಕು, ನಮ್ಮ ಭಾಗದ ಜನರಿಗೆ ಉದ್ಯೋಗ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ಕಾಲಾವಕಾಶ ಕೇಳಿದ್ದರು. ಆದರೆ ಸಿಎಂ ಕೇವಲ 6 ತಿಂಗಳು ಗಡುವು ನೀಡಿದ್ದಾರೆ. ಇದರೊಳಗೆ ಸಾಧ್ಯವಾಗದಿದ್ದರೆ ಯಾವುದೇ ಮುಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕುಡಿತಿನಿ ಗ್ರಾಮದಲ್ಲಿ ಪ್ರತಿ ಎಕರೆಗೆ 8 ಲಕ್ಷ, ವೇಣಿ, ವೀರಾಪುರ ಗ್ರಾಮದಲ್ಲಿ ಪ್ರತಿ ಎಕರೆಗೆ 10 ಲಕ್ಷ ಹಾಗೂ ಕೊಳಗಲ್ಲು ಗ್ರಾಮದಲ್ಲಿ ಪ್ರತಿ ಎಕರೆಗೆ 12 ಲಕ್ಷದಂತೆ ರೈತರಿಗೆ ಪರಿಹಾರ ನೀಡಲಾಗಿದೆ. ಆದರೆ ಪರಿಹಾರ ಹೆಚ್ಚು ಕೊಡಬೇಕು ಎನ್ನುವ ಕೂಗು ಇವತ್ತಿಗೂ ರೈತರು ಮಾಡುತ್ತಿದ್ದಾರೆ. ಇದಕ್ಕಾಗಿ ಭೂ ಸಂತ್ರಸ್ತರು ಸಾಕಷ್ಟು ಹೋರಾಟಗಳನ್ನ ಮಾಡಿದ್ದಾರೆ. ಸರಕಾರದ ಒಪ್ಪಂದದಂತೆ ಕಂಪನಿಗಳು 3-4 ವರ್ಷದೊಳಗೆ ಕೈಗಾರಿಕೆ ಸ್ಥಾಪನೆ ಮಾಡಬೇಕು. ಆದರೆ ಭೂಮಿ ಸ್ವಾಧೀನ ಪಡಿಸಿಕೊಂಡು 12 ವರ್ಷ ಕಳೆದರೂ ಇದುವರೆಗೆ ಕೈಗಾರಿಕಾ ಸ್ಥಾಪನೆ ಆಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಂಪನಿಗಳು ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಇದುವರೆಗೆ ಕೈಗಾರಿಕೆ ಸ್ಥಾಪನೆ ಮಾಡದಿರುವ ಕಾರಣ ಸರಕಾರ ಭೂಮಿಯನ್ನು ವಾಪಾಸ್ ಪಡೆಯಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.