ಕಬ್ಬಿನ ಗದ್ದೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಲಕ್ಷಾಂತರ ರುಪಾಯಿ ಬೆಳೆ ಹಾನಿ
ಬಳ್ಳಾರಿ, ಡಿಸೆಂಬರ್ 15: ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಗ್ರಾಮ ಹೊರವಲಯದಲ್ಲಿ ಕಬ್ಬಿನ ಗದ್ದೆಗೆ ವಿದ್ಯುತ್ ಶಾಕ್ ತಗುಲಿ ಬೆಂಕಿ ಬಿದ್ದಿದ್ದು, ಅಂದಾಜು 2.5 ಎಕರೆಗೂ ಅಧಿಕ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಗ್ರಾಮದ ಪೂಜಾರ್ ಹನುಮಂತಪ್ಪ ಮಾಲೀಕತ್ವದ ಸುಮಾರು 5 ಎಕರೆಯಷ್ಟು ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಗೆ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಕಬ್ಬಿನ ಬೆಳೆ ಭಸ್ಮವಾದ ಘಟನೆ ಜರುಗಿದೆ.
ಯುವತಿ ಜೊತೆ ಸ್ನೇಹ: ಯುವಕನಿಗೆ ಹಿಗ್ಗಾಮುಗ್ಗಾ ಥಳಿತದ ವಿಡಿಯೋ ವೈರಲ್!
ಈ ಕಬ್ಬಿಗೆ ಬೆಂಕಿ ತಗುಲುತ್ತಿದ್ದಂತೆ ಹಗರಿಬೊಮ್ಮನಹಳ್ಳಿ ತಾಲೂಕಿನ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದ ತತ್ ಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯವರು, ಬೆಂಕಿ ನಂದಿಸಿ ಮುಂದಾಗುವ ಭಾರೀ ಅವಘಡವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ಲಕ್ಷ ರುಪಾಯಿಗಳಿಗೂ ಅಧಿಕ ಮೊತ್ತದ ಕಬ್ಬಿನ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಗ್ನಿ ಶಾಮಕ ದಳದ ಮಲ್ಲಯ್ಯ, ಅನ್ವರ್ ಬಾಷಾ, ಮಾನಪ್ಪ ಆಚಾರಿ, ಅಂಬಣ್ಣ ಹಾಗೂ ಜಗದೀಶ ಬೆಂಕಿ ನಂದಿಸುವ ಕರ್ತವ್ಯದಲ್ಲಿ ಪಾಲ್ಗೊಂಡಿದ್ದರು.