ರಾಜಕಾರಣಿಗಳ ಗನ್ ಮೆನ್ ಗಳು ಜಿಲ್ಲಾ ಕೇಂದ್ರಗಳಿಗೆ ವಾಪಾಸ್!
ಬಳ್ಳಾರಿ, ಮೇ. 05 : ಜನಪ್ರತಿನಿಧಿಗಳಿಗೆ ಮತ್ತು ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಗೃಹ ಇಲಾಖೆ ನೀಡಿರುವ ಗನ್ ಮೆನ್ ಗಳನ್ನು ತಕ್ಷಣವೇ ಹಿಂದಕ್ಕೆ ಪಡೆದು ಗನ್ ಮೆನ್ ಸೇವಾ ಶಿಸ್ತನ್ನು ಕಾಪಾಡಬೇಕು ಎಂದು ಆರ್ಟಿಐ ಕಾರ್ಯಕರ್ತ, ಅಣ್ಣಾ ಫೌಂಡೇಶನ್ ನ ಸಂಚಾಲಕ ರಾಜಶೇಖರ ಮುಲಾಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಮನವಿಗೆ ತಕ್ಷಣವೇ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ಹೌದು, ಮನವಿಗೆ ಸ್ಪಂದಿಸಿರುವ ಚುನಾವಣಾ ಆಯೋಗ ರಾಜ್ಯಾದ್ಯಂತ ಎಲ್ಲಾ ಮುಖಂಡರ ಗನ್ ಮೆನ್ ಗಳನ್ನು ಇಂದಿನಿಂದ (ಶನಿವಾರ) ಹಿಂದಕ್ಕೆ ಪಡೆದಿದೆ.
ಬಿಜೆಪಿ ಸೇರಲಿದ್ದಾರೆ ರಾಜಶೇಖರ್ ಮುಲಾಲಿ?
ಈ ಕುರಿತು ಗೃಹ ಇಲಾಖೆ ಚುನಾವಣಾ ಆಯೋಗ ಮಾಡಿದ ಶಿಫಾರಸ್ಸಿಗೆ ತಕ್ಷಣವೇ ಸ್ಪಂದಿಸಿ, ಹಿರಿಯ ಅಧಿಕಾರಿಗಳು ಗನ್ ಮೆನ್ಗಳಿಗೆ ದೂರವಾಣಿ ಕರೆ ಮಾಡಿ, ಮೂಲ ಕರ್ತವ್ಯ ಸ್ಥಳಕ್ಕೆ ತಕ್ಷಣವೇ ಬಂದು, ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕು ಎಂದು ಆದೇಶ ನೀಡಿದೆ. ಬಹುತೇಕ ರಾಜಕಾರಣಿಗಳ ಗನ್ ಮೆನ್ ಗಳು ಜಿಲ್ಲಾ ಕೇಂದ್ರಗಳಿಗೆ ಹಿಂದಿರುಗುತ್ತಿದ್ದಾರೆ.
ರಾಜಶೇಖರ ಮುಲಾಲಿ, ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರಿಗೆ ಪತ್ರ ಬರೆದು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ನೀಡಿರುವ ಗನ್ ಮೆನ್ ಭದ್ರತೆ ದುರುಪಯೋಗ ಆಗುತ್ತಿದೆ. ಅಲ್ಲದೇ, ಬಹುತೇಕ ಗನ್ ಮೆನ್ ಗಳು ತಮ್ಮ ಕರ್ತವ್ಯ ಮರೆತು, ತಮ್ಮನ್ನು ನಿಯೋಜಿಸಿಕೊಂಡಿರುವವರ ವೈಯಕ್ತಿಕ ಕೆಲಸಗಳನ್ನು ನಿರ್ವಹಿಸುವುದು ಗಮನಕ್ಕೆ ಬಂದಿದೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮತ ಭಿಕ್ಷೆಗೆಂದು ಸಾರ್ವಜನಿಕರಲ್ಲಿ ಹೋದಾಗ ಸಾರ್ವಜನಿಕರು ಮುಕ್ತವಾಗಿ ಅಭ್ಯರ್ಥಿಯೊಡನೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಮತದಾರರು ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಪ್ರಶ್ನಿಸುವಾಗ ಅಭ್ಯರ್ಥಿಯ ಭದ್ರತೆಗೆ ಒದಗಿಸಿರುವ ಗನ್ ಮೆನ್ ಇರುವ ಕಾರಣ ಮತದಾರರಿಗೆ ಭಯದ ವಾತವರಣ ನಿರ್ಮಾಣ ಆಗುತ್ತಿದೆ.
ಅಭ್ಯರ್ಥಿಗಳು ಕರ್ತವ್ಯದಲ್ಲಿರುವ ಭದ್ರತಾ ಸಿಬ್ಬಂದಿಯನ್ನು ವೈಯಕ್ತಿಕ ಕೆಲಸಗಳಿಗೆ ಬಳಸುವುದಲ್ಲದೇ ಗನ್ ಮೆನ್ ಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಸಾರ್ವಜನಿಕರು ನನ್ನ ಗಮನಕ್ಕೆ ತಂದಿರುತ್ತಾರೆ ಎಂದು ಪತ್ರದಲ್ಲಿ ದೂರಿದ್ದಾರೆ.
ರಾಜಶೇಖರ ಮುಲಾಲಿ ನೀಡಿರುವ ಇ-ಮೇಲ್ ದೂರಿಗೆ ತಕ್ಷಣವೇ ಸ್ಪಂದಿಸಿರುವ ಚುನಾವಣಾ ಆಯೋಗ ಗೃಹ ಇಲಾಖೆಯ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿ, ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದೆ. ಈ ಹಿನ್ನಲೆಯಲ್ಲಿ ಗನ್ ಮೆನ್ ಗಳು ಕ್ರಮೇಣ ಮೂಲ ಕೇಂದ್ರ ಸ್ಥಳಕ್ಕೆ ಆಗಮಿಸಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿದ್ದಾರೆ.