ವೈಭವದ ಹೆಸರಲ್ಲಿ ಸಂಸ್ಕೃತಿ ಅಲಕ್ಷಿಸಬಾರದು- ಪ್ರೊ.ಅಲ್ಲಮಪ್ರಭು
ಹಂಪಿ, ನವೆಂಬರ್, 4: ಸಂಸ್ಕೃತಿಯ ಹೆಸರಿನಲ್ಲಿ ತಪ್ಪು ಆಚರಣೆ, ವಿಚಾರಗಳನ್ನೇ ಪುನರಾವರ್ತಿಸುವ ಪರಿಪಾಠವನ್ನು ನಾವು ಕೈಬಿಡಬೇಕು. ಸರಳತೆಯ ಕಡೆಗೆ ಹೆಚ್ಚು ಗಮನಹರಿಸಬೇಕು. ಪ್ರೋ. ಅಲ್ಲಮಪ್ರಭು ಬೆಟ್ಟದೂರ ಅಭಿಪ್ರಾಯಪಟ್ಟರು.
ಸಮಕಾಲೀನ ಸಂಗತಿಗಳಿಗೆ ಕವಿಗಳು ಉತ್ತಮ ಪ್ರತಿಕ್ರಿಯೆಯಾಗಿ ತಮ್ಮ ಕವನಗಳನ್ನು ಪ್ರಸ್ತುತಪಡಿಸಿದ್ದಾರೆ ಎಂದು ಅವರು ಹೇಳಿದರು. ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹಂಪಿ ಉತ್ಸವದಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕರ್ನಾಟಕದ ಎಲ್ಲ ಪ್ರದೇಶಗಳ ಕವಿಗಳು ಭಾಗವಹಿಸಿ,ಸಾಮಾಜಿಕ ಪ್ರಜ್ಞೆ ಮೆರೆದರು.
ಎಲ್ಲ ವಯೋಮಾನದ ಎಲ್ಲ ವಿಚಾರಧಾರೆಗಳ ಕವಿಗಳಿಗೆ ವೇದಿಕೆಯು ಧ್ವನಿ ನೀಡಿದೆ. ಆರೀಫ್ರಾಜಾ ಅವರ ಮತ್ತೆ ಮತ್ತೆ ನನ್ನ ಚಂಚಲ ಪಾದಗಳು ಎಂಬ ಗಜಲ್ ಹೈದರಾಬಾದ್ ಕರ್ನಾಟಕದ ಪ್ರಾತಿನಿಧಿಕ ಕಾವ್ಯ ಪ್ರಕಾರರನ್ನು ಉತ್ತಮ ಉದಾಹರಣೆ ಎಂಬಂತೆ ಬಿಂಬಿಸಿತು. ಉರ್ದು ಸಂಸ್ಕೃತಿಯ ಮೂಸೆಯಲ್ಲಿ ಅರಳಿರುವ ಗಜಲ್ ಕನ್ನಡದ ಸಹೃದಯರಿಗೆ ಇನ್ನೂ ಒಗ್ಗಬೇಕಾಗಿದೆ ಎಂದರು.
ರಾಮಲಿಂಪ್ಪ ಅವರ ವಿಡಂಬನಾತ್ಮಕ ಕವಿತೆ
ರಾಮಲಿಂಗಪ್ಪ ಟಿ.ಬೇಗೂರ ಅವರ "ಮಾ ಟೀವಿಯಲ್ಲಿ ಧಾರವಾಹಿಗಳು ಯಾವಾಗ ಮುಗಿಯುತ್ತವೆ" ಎಂಬ ಕವಿತೆಯು ಸಮಕಾಲೀನ ರಾಜಕೀಯ, ಸಾಮಾಜಿಕ ಸ್ಥಿತಿಯನ್ನು ಸಮರ್ಥವಾಗಿ ವ್ಯಂಗ್ಯ ಮತ್ತು ವಿಡಂಬನಾತ್ಮಕವಾಗಿ ಬಿಂಬಿಸಿದೆ ಎಂದು ಅಲ್ಲಮ ಪ್ರಭು ಹೇಳಿದರು.
ಕವಿಗಳು ಕಡಿಮೆ ಬರೆದರೂ ಕೂಡ ಸಶಕ್ತವಾಗಿ ಬರೆಯಬೇಕು.ಸರಳವಾಗಿ ಸಂವಹನವಾಗುವಂತಹ ಕವಿತೆಗಳನ್ನು ಕವಿಗೋಷ್ಠಿಯಂತಹ ಸಾರ್ವಜನಿಕ ವೇದಿಕೆಗಳಲ್ಲಿ ಓದುವದನ್ನು ರೂಢಿಸಿಕೊಳ್ಳಬೇಕು ಅದು ಯಶಸ್ವಿ ಸಂವಹನ ಸಾಧ್ಯ ಮಾಡುತ್ತದೆ ಎಂದು ಕಿವಿಮಾತು ಹೇಳಿದರು.
ವಿಜಯನಗರ ಗತವೈಭವ ಮೆಲುಕು ಹಾಕಿದ ಕವಿತೆ
ಅಂಜನಾ ಕೃಷ್ಣಪ್ಪ ಪ್ರಸ್ತುಪಡಿಸಿದ " ಹೊನ್ನ ಮಳೆ ಸುರಿದ ನೆಲ ನಿಕ್ಷೇಪಗೂಡಿನಲ್ಲಿ ಬಳ್ಳದಲ್ಲಿ ಆಳೆದಂತೆ ಮಿನುಗುತಿರು ಹಂಪೆ" ಎಂಬ ಕವಿತೆ ವಿಜಯನಗರದ ಗತ ವೈಭವವನ್ನು ಮೆಲುಕು ಹಾಕಿತು.
ಸಂಡೂರಿನ ತಿಪ್ಪೇರುದ್ರಸ್ವಾಮಿಯವರ " ಒಣಗಿದ ಗಿಡದ ಮೇಲೆ ಕುಳಿತಿವೆ ಗುಬ್ಬಚ್ಚಿ ಗುಟುಕು ನೀರಿಗಾಗಿ ಕಾಯುತ ಬಿಸಿಲ ಝಳಕೆ ಸೊರಗಿವೆ" ಎಂಬ ಕವನ ಬರದ ಬೇಗೆಯನ್ನು ಅನಾವರಣಗೊಳಿಸಿತು.
ಹಂಪಿ ಉತ್ಸವ: ಮನ್ಸೂರ್ ಸುಭದ್ರಮ್ಮ ಕಂಠದಿಂದ ಗಾನಸುಧೆ
ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಅವರು ಎಂ.ಪಿ.ಪ್ರಕಾಶ ವೇದಿಕೆಯಲ್ಲಿ ಪುರಂದರ ದಾಸರ ರಚನೆ, ಅಕ್ಕಮಹಾದೇವಿಯವರ ವಚನಗಳ ಸುಮಧುರ ಗಾನಸುಧೆಯನ್ನು ಉಣಬಡಿಸಿದರು.
ತಿಲಂಗರಾಗದಲ್ಲಿ "ನಾಮ ಕೀರ್ತನೆಯ ಅನುದಿನ ನರಕ..." ಪುರಂದರ ದಾಸರ ಕೀರ್ತನೆಯನ್ನು ಹಾಗೂ "ಬೆಟ್ಟದ ಮೇಲೊಂದು ಮನೆಯ ಮಾಡಿ...."ಅಕ್ಕಮಹಾದೇವಿಯ ವಚನವನ್ನು ಪ್ರಾರಂಭದಲ್ಲಿ ದಾನಿಮಿತ್ರ ರಾಗದಲ್ಲಿ ಹಾಡಿ ಕಾನಡಾ ರಾಗದಲ್ಲಿ ಅಂತ್ಯಗೊಳಿಸಿದರು. ಕಲಾವಿದರಾದ ನಾಗಭೂಷಣ ಬಾಪೂರೆ, ಹಾರ್ಮೋನಿಯಂ ಹಾಗೂ ಅಂಧ ಕಲಾವಿದ ಉಮೇಶ ತಬಲಾ ಸಾಥ್ ನೀಡಿದರು.
ಒಂದೇ ವೇದಿಕೆಯಲ್ಲಿ 23 ಕವಿಗಳ ಸಮಾಗಮ
ಕಾರ್ಯಕ್ರಮದಲ್ಲಿ ಅಂಜಲಿ ಬೆಳಗಲ್ , ಅರುಣ ಜೋಳದ ಕೂಡ್ಲಿಗಿ, ಎಂ.ಪಿ.ಎಂ.ಮಂಜುನಾಥ, ಜ್ಯೋತಿ ಗುರುಪ್ರಸಾದ, ನಾಗಣ್ಣ ಕಿಲಾರಿ, ಧನಂಜಯ ಕುಂಬ್ಳೆ, ಡಾ.ಮಹ್ಮದ್ ಬಾಷಾ ಗೂಳ್ಯಂ, ಸುಜಾತಾ ಅಡ್ಕ, ಪ್ರವರ ಕೆ.ವಿ.ಡಾ.ಶಾಂತಾನಾಯ್ಕ, ಲಕ್ಷ್ಮೀಪತಿ ಕೋಲಾರ, ಮಾಧವಿ ಭಂಡಾರಿ, ವಾಮದೇವಯ್ಯ ಎನ್.ಎಂ., ತಾರಿಣಿ ಶುಭದಾಯಿನಿ, ವಿರೇಂದ್ರ ರಾವಿಹಾಳ, ವೆಂಕಟೇಶ ಉಪ್ಪಾರ, ವೀರಣ್ಣ ಮಡಿವಾಳರ, ಹನುಮಪ್ಪ ಎಸ್.ಘಂಟಿ ಸೇರಿದಂತೆ 23 ಕವಿಗಳು ಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚಿಸಿದರು.