"ನಮ್ಮ ಪಕ್ಷದಲ್ಲಿ ಸಿಗೋ ಮರ್ಯಾದೆ ಬೇರೆ ಕಡೆ ಸಿಗುತ್ತಾ?" ಅತೃಪ್ತರಿಗೆ ಅನಿಲ್ ಲಾಡ್ ಪ್ರಶ್ನೆ
ಬಳ್ಳಾರಿ, ಜುಲೈ 20: "ನಮ್ಮ ಶಾಸಕರಿಗೆ ಕೋಟಿಗಟ್ಟಲೆ ಹಣದ ಆಮಿಷ ಒಡ್ಡಿ ಕರೆದೊಯ್ದು ಬಿಜೆಪಿಯವರು ಮುಂಬೈನಲ್ಲಿ ಇಟ್ಟಿದ್ದಾರೆ" ಎಂದು ಮಾಜಿ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, "ಒಂದೂವರೆ ವರ್ಷದಿಂದ ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆದುಕೊಂಡು ಬಂದಿದೆ. ಆದರೆ ಬಿಜೆಪಿಯವರು ಅಧಿಕಾರದ ಆಸೆಗಾಗಿ ನಮ್ಮ ಶಾಸಕರಿಗೆ ಹಣದ ಆಮಿಷ ಒಡ್ಡಿದ್ದಾರೆ. ಅಲ್ಲದೇ ಮುಂಬೈನ ಹೋಟೆಲ್ನಲ್ಲಿ ಇಟ್ಟು ಕಾವಲು ಕಾಯುತ್ತಿದ್ದಾರೆ. ನಮ್ಮ ಪಕ್ಷದ ನಾಯಕ ಡಿಕೆಶಿಯವರನ್ನೂ ಶಾಸಕರೊಂದಿಗೆ ಮಾತನಾಡಿಸಲು ಬಿಡಲಿಲ್ಲ. ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ನೋಡಿದರೆ ಅಸಹ್ಯವಾಗುತ್ತದೆ" ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀರಾಮುಲು ಒಬ್ಬ ದುರ್ಬಲ ನಾಯಕ: ಅನಿಲ್ ಲಾಡ್ ವಾಗ್ದಾಳಿ
ಇದೇ ಸಂದರ್ಭದಲ್ಲಿ, ರಾಜೀನಾಮೇ ನೀಡಿದ ಅತೃಪ್ತರಿಗೆ, ತಾಯಿ ಪಕ್ಷದಲ್ಲಿ ಸಿಗುವ ಮರ್ಯಾದೆ ಬೇರೆ ಪಕ್ಷದಲ್ಲಿ ಸಿಗೋದಿಲ್ಲ ಎಂದು ಮನವಿ ಮಾಡಿದರು.
"ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಹಣ ಕೊಟ್ಟಿದ್ದಾರೆ ಅಂತ ಆರೋಪ ಮಾಡುತ್ತಿರುವುದು ಸರಿಯಲ್ಲ. ಸರ್ಕಾರದ ಬಹುಮತ ಸಾಬೀತು ವಿಚಾರದಲ್ಲಿ ರಾಜ್ಯಪಾಲರ ನಡೆ ಅವರ ಹುದ್ದೆಗೆ ಗೌರವ ತಂದುಕೊಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗುತ್ತಿದೆ" ಎಂದು ಪ್ರತಿಕ್ರಿಯಿಸಿದರು.