ರಾಮುಲು ವಿರುದ್ಧ ಡಿಕೆಶಿ ರಣಕಹಳೆ, ಬಳ್ಳಾರಿಯಲ್ಲಿ ಬೃಹತ್ ಸಮಾವೇಶ
ಬಳ್ಳಾರಿ, ಮಾರ್ಚ್ 23: ಬಳ್ಳಾರಿ ರಾಜಕೀಯ ಕೋಟೆಯ ಉಳಿದೋರ್ವ ರಾಜ ಶ್ರೀರಾಮುಲು ವಿರುದ್ಧ ಮತ್ತೆ ತೊಡೆತಟ್ಟಲು ಡಿ.ಕೆ.ಶಿವಕುಮಾರ್ ಅವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ನಾಳೆ ಬಳ್ಳಾರಿಯ ಸಂಡೂರಿನಲ್ಲಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಭಾರಿ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ರಾಮುಲು ವಿರುದ್ಧ ಮತ್ತೆ ಡಿ.ಕೆ.ಶಿವಕುಮಾರ್ ಅವರು ಅಬ್ಬರಿಸಲಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಕಲೆವೇ ತಿಂಗಳುಗಳ ಹಿಂದೆ ನಡೆದಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರ ಉಪಚುನಾವಣೆಯಲ್ಲಿ ಶ್ರೀರಾಮುಲು ಮತ್ತು ಡಿ.ಕೆ.ಶಿವಕುಮಾರ್ ಎದುರಬದುರಾಗಿದ್ದರು. ಆ ಯುದ್ಧದಲ್ಲಿ ಡಿಕೆ.ಶಿವಕುಮಾರ್ ಅವರು ಜಯಗಳಿಸಿದ್ದರು. ಈಗ ಮತ್ತೆ ಇವರಿಬ್ಬರು ಎದುರಾಗುತ್ತಿದ್ದಾರೆ.
ಯಡಿಯೂರಪ್ಪ ಡೈರಿ ಪ್ರಕರಣ: ಡಿಕೆ ಶಿವಕುಮಾರ್ ಹೇಳಿದ್ದೇನು?
ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಅಭ್ಯರ್ಥಿ ಉಗ್ರಪ್ಪ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ರಾಮುಲು ಅವರ ಸಹೋದರಿ ಶಾಂತಾ ಅವರು ಸೋಲು ಕಂಡಿದ್ದರು.
ನಾಳೆ ಬೃಹತ್ ಸಮಾವೇಶ
ನಾಳೆ ನಡೆಯುವ ಸಮಾವೇಶದಲ್ಲಿ ಸಚಿವರಾದ ತುಕಾರಾಂ ಮತ್ತು ಪಿ.ಟಿ.ಪರಮೇಶ್ವರ್ ನಾಯಕ್ ಅವರು ಭಾಗವಹಿಸಲಿದ್ದಾರೆ ಎಂಬುದು ಈಗಾಗಲೇ ಖಚಿತಗೊಂಡಿದೆ. ಆದರೆ ಬಳ್ಳಾರಿ ಜಿಲ್ಲೆಯ ಅತೃಪ್ತ ಶಾಸಕರು ಭಾಗವಹಿಸುತ್ತಾರಾ ಎಂಬ ಅನುಮಾನ ಮೂಡಿದೆ.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯ ಗೆಲ್ಲಿಸಿಯೇ ಸಿದ್ಧ: ಡಿಕೆ.ಶಿವಕುಮಾರ್
ಇಬ್ಬರು ಶಾಸಕರ ಅಸಮಾಧಾನ
ಬಿ.ನಾಗೇಂದ್ರ, ಆನಂದ್ ಸಿಂಗ್ ಅವರುಗಳು ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಇಬ್ಬರು ಶಾಸಕರು ನಾಳೆಯ ಸಮಾವೇಶಕ್ಕೆ ಬರುತ್ತಾರೆಯೇ ಇಲ್ಲವೊ ಎಂಬುದು ಕುತೂಹಲ ಕೆರಳಿಸಿದೆ. ಇನ್ನು ಕಂಪ್ಲಿ ಶಾಸಕ ಗಣೇಶ್ ಜೈಲಿನಲ್ಲಿದ್ದಾರೆ. ಬಿ.ನಾಗೇಂದ್ರ ಅವರು ಈಗಾಗಲೇ ತಮ್ಮ ಸಹೋದರನನ್ನು ಬಿಜೆಪಿಗೆ ಸೇರಿಸಿದ್ದಾರೆ. ಅವರೂ ಒಂದು ಕಾಲು ಬಿಜೆಪಿಯಲ್ಲಿಟ್ಟಿದ್ದಾರೆ ಎನ್ನಲಾಗಿದೆ.
'ನೂರು ಡಿಕೆಶಿ ಬಂದರೂ ಶಿವಮೊಗ್ಗದಲ್ಲಿ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ'
ಉಗ್ರಪ್ಪ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ
ಬಳ್ಳಾರಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಈ ವರೆಗೆ ಅಭ್ಯರ್ಥಿ ಖಾತ್ರಿಯಾಗಿಲ್ಲ, ಆದರೆ ಹಾಲಿ ಸಂಸದ ಉಗ್ರಪ್ಪ ಅವರಿಗೆ ಮತ್ತೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಬಿಜೆಪಿಯು ಈಗಾಗಲೇ ಬಳ್ಳಾರಿಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು ರಾಮುಲು ಅವರ ಆಪ್ತ ದೇವೇಂದ್ರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
ಗೆಲ್ಲಿಸುವ ಜವಾಬ್ದಾರಿ ಡಿ.ಕೆ.ಶಿವಕುಮಾರ್ ಮೇಲೆ
ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರೇ ಆಗಿದ್ದು, ಈ ಬಾರಿ ಕೂಡ ಉಗ್ರಪ್ಪ ಅವರನ್ನು ಗೆಲ್ಲಿಸುವ ಜವಾಬ್ದಾರಿ ಅವರ ಮೇಲೆ ಇದೆ. ಉಪಚುನಾವಣೆಯಲ್ಲಿ ಗೆದ್ದಷ್ಟು ಸುಲಭವಾಗಿ ಈ ಬಾರಿ ಗೆಲ್ಲಲು ಸಾಧ್ಯವಿಲ್ಲ. ಇಬ್ಬರು ಶಾಸಕರು ಅಸಮಾಧಾನಗೊಂಡಿದ್ದರೆ, ಒಬ್ಬರು ಜೈಲಿನಲ್ಲಿದ್ದಾರೆ. ಉಪಚುನಾವಣೆಗೆ ಎಲ್ಲ ರಾಜ್ಯ ನಾಯಕರು ಬಳ್ಳಾರಿಯಲ್ಲಿ ಬೀಡು ಬಿಟ್ಟು ಪ್ರಚಾರ ಮಾಡಿದ್ದರು, ಆದರೆ ಈಗ ಹಾಗೆ ಆಗಲು ಸಾಧ್ಯವಿಲ್ಲ ಹಾಗಾಗಿ ಉಗ್ರಪ್ಪ ಅವರು ಆತಂಕದಲ್ಲಿದ್ದಾರೆ.